5 ಕೋಟಿ ಕೊಟ್ಟರೆ ಪ್ರಧಾನಿ ಮೋದಿ ಹತ್ಯೆ ಮಾಡುತ್ತೇನೆ ಎಂದಿದ್ದ ವ್ಯಕ್ತಿ ಬಂಧನ
ಪುದುಚೇರಿ,ಫೆಬ್ರವರಿ 05: ಯಾರಾದರೂ 5 ಕೋಟಿ ಕೊಟ್ಟರೆ ಪ್ರಧಾನಿ ನರೇಂದ್ರ ಮೋದಿಯವರನ್ನು ಕೊಲೆ ಮಾಡುತ್ತೀನಿ ಎಂದು ಹೇಳಿದ್ದ ವ್ಯಕ್ತಿಯನ್ನು ಪುದುಚೆರಿಯಲ್ಲಿ ಪೊಲೀಸರು ಬಂಧಿಸಿದ್ದಾರೆ.
ಸತ್ಯ ಆನಂದಂ ವಿರುದ್ಧ ಪೊಲೀಸರು ಐಪಿಸಿ ಸೆಕ್ಷನ್ 505 (1) ಮತ್ತು 505 (2) (ಸಾರ್ವಜನಿಕ ಕಿಡಿಗೇಡಿತನಗಳಿಗೆ ಕಾರಣವಾಗುವ ಹೇಳಿಕೆಗಳನ್ನು ನೀಡುವುದು ಮತ್ತು ವರ್ಗಗಳ ನಡುವೆ ದ್ವೇಷ, ಅಥವಾ ಕೆಟ್ಟ ಇಚ್ಚೆಯನ್ನು ಸೃಷ್ಟಿಸುವ ಅಥವಾ ಉತ್ತೇಜಿಸುವ ಹೇಳಿಕೆಗಳು)ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು, ಎಫ್ ಐಆರ್ ದಾಖಲಿಸಿದ್ದಾರೆ.
ಮೂಲಗಳ ಪ್ರಕಾರ ಆರ್ಯಂಕುಪ್ಪಂ ಗ್ರಾಮದ ನಿವಾಸಿಯಾಗಿದ್ದ ವ್ಯಕ್ತಿ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಯಾರಾದರೂ 5 ಕೋಟಿ ರೂ ಕೊಟ್ಟರೆ ಪ್ರಧಾನಿ ನರೇಂದ್ರ ಮೋದಿಯ ಹತ್ಯೆ ಮಾಡುವುದಾಗಿ ಘೋಷಣೆ ಮಾಡಿದ್ದ. ಕಾರು ಚಾಲಕನೋರ್ನ ಈ ಪೋಸ್ಟ್ ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದ.
ಪುದುಚೆರಿಯ 43 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಪ್ರಧಾನಿ ಮೋದಿ ವಿರುದ್ಧ ಪೋಸ್ಟ್ ಅಪ್ಲೋಡ್ ಮಾಡಿದ್ದಕ್ಕಾಗಿ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆಯೇ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು ಖಾತೆಯ ಮೂಲ ಪರಿಶೀಲಿಸಿ ಆತನ ಜಾಡು ಪತ್ತೆ ಮಾಡಿ ಬಂಧಿಸಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ ಆರೋಪಿಯನ್ನು 43 ವರ್ಷದ ಸತ್ಯ ಆನಂದಂ ಎಂದು ಗುರುತಿಸಲಾಗಿದ್ದು, ಈತ ಆರ್ಯಂಕುಪ್ಪಂ ಗ್ರಾಮದ ನಿವಾಸಿ ಮತ್ತು ರಿಯಲ್ ಎಸ್ಟೇಟ್ ಉದ್ಯಮಿ ಎನ್ನಲಾಗಿದೆ.