ಭಾರತಕ್ಕೆ ಅಕ್ರಮ ಪ್ರವೇಶ: ಮಾಲ್ಡೀವ್ಸ್ ಮಾಜಿ ಉಪಾಧ್ಯಕ್ಷ ಬಂಧನ
ತೂತುಕುಡಿ, ಆಗಸ್ಟ್ 1: ಮಾಲ್ಡೀವ್ಸ್ನ ಮಾಜಿ ಉಪಾಧ್ಯಕ್ಷ ಅಹ್ಮದ್ ಅದೀಬ್ ಗಫೂರ್ ಅವರನ್ನು ಭಾರತದ ಅಧಿಕಾರಿಗಳು ತಮಿಳುನಾಡಿನ ತೂತುಕುಡಿಯಲ್ಲಿ ಭಾನುವಾರ ಬಂಧಿಸಿದ್ದಾರೆ.
ಭಾರತಕ್ಕೆ ಅಕ್ರಮವಾಗಿ ಪ್ರವೇಶ ಮಾಡಿದ ಆರೋಪದಲ್ಲಿ ಅವರನ್ನು ಬಂಧಿಸಲಾಗಿದೆ. ಸರಕು ಸಾಗಣೆ ಹಡಗಿನ ಸಿಬ್ಬಂದಿ ಸೋಗಿನಲ್ಲಿ ಅವರು ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಲು ಪ್ರಯತ್ನಿಸಿದ್ದರು.
ತಮಿಳುನಾಡಿನ ತೂತುಕುಡಿ ಬಂದರು ಅಧಿಕಾರಿಗಳು, ತಾವು ಮಾಲ್ಡೀವ್ಸ್ನ ಮಾಜಿ ಉಪಾಧ್ಯಕ್ಷರನ್ನು ಬಂಧಿಸಿರುವುದಾಗಿ ಹೇಳಿದ್ದಾರೆ. ಈ ವರದಿಯ ಬಗ್ಗೆ ಪರಿಶೀಲನೆ ನಡೆಸಿ ಸತ್ಯಾಸತ್ಯತೆ ತಿಳಿಯುವ ಪ್ರಯತ್ನ ನಡೆಸಿರುವುದಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ಮಾಲ್ಡೀವ್ಸ್ ನಲ್ಲಿ ನರೇಂದ್ರ ಮೋದಿ : ಅಧ್ಯಕ್ಷ ಇಬ್ರಾಹಿಂಗೆ ಕ್ರಿಕೆಟ್ ಬ್ಯಾಟ್ ಉಡುಗೊರೆ
ಸಮುದ್ರ ಮಾರ್ಗದಿಂದ ಭಾರತಕ್ಕೆ ಬಂದಿದ್ದ ಅವರನ್ನು ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ. ಈ ಹಡಗನ್ನು ತೂತುಕುಡಿ ಹಳೆಯ ಬಂದರಿನಲ್ಲಿ ಲಂಗರು ಹಾಕಲು ಅನುಮತಿ ನೀಡಿಲ್ಲ.
ಹೋಗುವಾಗ 9 ಮಂದಿ, ಬರುವಾಗ 10
ವರ್ಗೋ 9 ಎಂಬ ಸರಕು ಹಡಗಿನಲ್ಲಿ ಇಂಡೋನೇಷ್ಯಾಕ್ಕೆ ಕೆಲವು ಸರಕುಗಳನ್ನು ಕೊಂಡೊಯ್ಯಲಾಗಿತ್ತು. ಅಲ್ಲಿಂದ ಅದು ವಾಪಸ್ ಬರುತ್ತಿತ್ತು. ಜುಲೈ 11ರಂದು ಇಂಡೋನೇಷ್ಯಾಕ್ಕೆ ಹೊರಟಿದ್ದ ಹಡಗಿನಲ್ಲಿ ಒಂಬತ್ತು ಸಿಬ್ಬಂದಿ ಇದ್ದರು. ಅವರಲ್ಲಿ ಬೋಸ್ಕೋ ಎಂಬ ಭಾರತೀಯ ಹಾಗೂ ಎಂಟು ಮಂದಿ ಇಂಡೋನೇಷ್ಯನ್ನರಿದ್ದರು.
ಮಾಲ್ಡೀವ್ಸ್ ಗೆ 10 ಸಾವಿರ ಕೋಟಿ ನೆರವು, ಡ್ರ್ಯಾಗನ್ ಪಾರಮ್ಯಕ್ಕೆ ಭಾರತದ ತಡೆ
|
ಮಾಹಿತಿ ನೀಡಿದ್ದ ಭಾರತದ ಸಿಬ್ಬಂದಿ
ಸಿಂಗಪುರ ನೋಂದಾಯಿತ ಈ ಹಡಗು ಇಂಡೋನೇಷ್ಯಾದಿಂದ ಜುಲೈ 27ರಂದು ವಾಪಸ್ ಬರುವಾಗ ಅದರಲ್ಲಿ ಹತ್ತು ಮಂದಿ ಇದ್ದರು. ಈ ಬಗ್ಗೆ ಭಾರತದ ಸಿಬ್ಬಂದಿ ಹಡಗಿನ ಏಜೆಂಟ್ಗೆ ಮಾಹಿತಿ ನೀಡಿದ್ದರು. ಕೂಡಲೇ ಏಜೆಂಟ್, ಕಸ್ಟಮ್ ಅಧಿಕಾರಿಗಳು, ಕರಾವಳಿ ಕಾವಲು ಪಡೆ ಮತ್ತು ಗುಪ್ತಚರ ಸಂಸ್ಥೆಗಳಿಗೆ ತಿಳಿಸಿದ್ದರು. ಹೀಗಾಗಿ ಮುಂಚೆಯೇ ಜಾಗೃತರಾಗಿದ್ದ ಅವರು ಹಡಗನ್ನೇರಿ ಅಹ್ಮದ್ ಅದೀಬ್ ಅವರನ್ನು ವಿಚಾರಣೆಗೆ ಒಳಪಡಿಸಿದರು.
ಅಧ್ಯಕ್ಷರ ಹತ್ಯೆ ಪ್ರಯತ್ನ
ಮಾಲ್ಡೀವ್ಸ್ನ ಉಪಾಧ್ಯಕ್ಷರಾಗಿದ್ದ ಸಂದರ್ಭದಲ್ಲಿ 2015ರ ಸೆಪ್ಟೆಂಬರ್ನಲ್ಲಿ ಅಧ್ಯಕ್ಷ ಅಬ್ದುಲ್ಲಾ ಯಾಮೀನ್ ಅವರಿದ್ದ ಸೀಬೋಟ್ಅನ್ನು ಸ್ಫೋಟಿಸಿ ಹತ್ಯೆ ಮಾಡಲು ಪ್ರಯತ್ನ ನಡೆಸಿದ್ದ ಆರೋಪದಲ್ಲಿ 37 ವರ್ಷದ ಅದೀಬ್ ಅವರನ್ನು ಉಚ್ಚಾಟನೆ ಮಾಡಿ ಬಂಧಿಸಲಾಗಿತ್ತು. 2016ರಲ್ಲಿ ಅವರಿಗೆ 15 ವರ್ಷಗಳ ಜೈಲುಶಿಕ್ಷೆ ವಿಧಿಸಲಾಗಿತ್ತು. 2019ರ ಮೇ ತಿಂಗಳಲ್ಲಿ ಆ ಶಿಕ್ಷೆಯನ್ನು ರದ್ದುಗೊಳಿಸಲಾಗಿತ್ತು.
ಮಾಲ್ಡೀವ್ಸ್ ಅಧ್ಯಕ್ಷೀಯ ಚುನಾವಣೆ, ಇಬ್ರಾಹಿಂಗೆ ಗೆಲುವು, ಭಾರತಕ್ಕೆ ಖುಷಿ
ಮಾಲ್ಡೀವ್ಸ್ಗೆ ಕಳುಹಿಸಲು ಚಿಂತನೆ
ಕಳೆದ ಜೂನ್ ತಿಂಗಳಂದು ಪುಣೆಯ ಆಸ್ಪತ್ರೆಯೊಂದರಲ್ಲಿ ಕಣ್ಣಿನ ಚಿಕಿತ್ಸೆ ಪಡೆದುಕೊಂಡಿದ್ದರು. ಆದರೆ, ಅವರು ಕಳ್ಳಮಾರ್ಗದ ಮೂಲಕ ಭಾರತವನ್ನು ಪ್ರವೇಶಿಸಲು ಪ್ರಯತ್ನಿಸಿದ್ದು ಏಕೆ ಎನ್ನುವುದು ತಿಳಿದಿಲ್ಲ. ಈ ಘಟನೆ ಭಾರತ ಮತ್ತು ಮಾಲ್ಡೀವ್ಸ್ ನಡುವಣ ಬಾಂಧವ್ಯಕ್ಕೆ ಹಾನಿ ಮಾಡುವ ಸಾಧ್ಯತೆ ಇರುವುದರಿಂದ ಅದೀಬ್ ಅವರನ್ನು ಮಾಲ್ಡೀವ್ಸ್ಗೆ ಮರಳಿ ಕಳುಹಿಸಲು ಅಥವಾ ಅಲ್ಲಿನ ಸರ್ಕಾರದೊಂದಿಗೆ ಸಂಪರ್ಕಿಸಿ ಮಾತುಕತೆ ನಡೆಸಿ ಅದರಂತೆ ಮುಂದಿನ ನಡೆ ಅನುಸರಿಸುವ ಬಗ್ಗೆ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.