ಮಹಾಭಾರತ ಹೇಳಿಕೆ: ನಟ ಕಮಲ್ ವಿರುದ್ಧದ ಕ್ರಿಮಿನಲ್ ಪ್ರಕರಣ ವಜಾ
ಚೆನ್ನೈ, ಜೂನ್ 18: 'ಯೂನಿರ್ವಸಲ್ ಸ್ಟಾರ್' ಕಮ್ ರಾಜಕಾರಣಿ ಕಮಲ್ ಹಾಸನ್ ವಿರುದ್ಧದ ಕ್ರಿಮಿನಲ್ ಪ್ರಕರಣವನ್ನು ಮದ್ರಾಸ್ ಹೈಕೋರ್ಟ್ನ ಮದುರೈ ಪೀಠ ವಜಾಗೊಳಿಸಿದೆ.
2017ರಲ್ಲಿ ಸಾಮಾಜಿಕ ಜಾಲ ತಾಣಗಳು, ಮಾಧ್ಯಮಗಳ ಎದುರು ಸದಾಕಾಲ ಹಿಂದೂ ವಿರೋಧಿ ಹೇಳಿಕೆ ನೀಡುವ ಮೂಲ ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿದ್ದಾರೆ ಎಂದು ನಟ ಕಮಲ್ ಹಾಸನ್ ವಿರುದ್ಧ ಹಿಂದೂ ಮಕ್ಕಳ್ ಕಚ್ಚಿ, ತಿರುನಲ್ವೇಲಿ ಜಿಲ್ಲಾಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಿತ್ತು.
ಖಾಸಗಿ ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಮಹಾಭಾರತದ ಬಗ್ಗೆ ಉಲ್ಲೇಖಿಸಿದ್ದರು. ಮಹಾಭಾರತದಲ್ಲಿ ಹೆಣ್ಣನ್ನು ಕೀಳಾಗಿ ನಡೆಸಿಕೊಳ್ಳಲಾಗಿದೆ. ಜೂಜಾಟದಲ್ಲಿ ದಾಳದಂತೆ ಬಳಸಿಕೊಳ್ಳಲಾಗಿದೆ. ಇಂಥ ಕೀಳುಕಥೆಗಳನ್ನು ನಾವು ಪಠ್ಯದಲ್ಲಿ ಮಕ್ಕಳಿಗೆ ಹೇಳಿಕೊಡಬೇಕಾಗಿದೆ ಎಂದಿದ್ದರು.
''ಆದರೆ, ಕಮಲ್ ಹಾಸನ್ ಹೇಳಿಕೆಯಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆಯಾಗುವಂಥ ಯಾವುದೇ ಅಂಶಗಳಿಲ್ಲ. ವಿಮರ್ಶೆಯು ಮುಕ್ತ ಸಮಾಜದ ಭಾಗವಾಗಿದೆ,'' ಎಂದು ನ್ಯಾಯಮೂರ್ತಿ ಜಿ ಇಳಂಗೋವನ್ ಅವರಿದ್ದ ಏಕಸದಸ್ಯ ಪೀಠ ಹೇಳಿದೆ. ದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಅದರಲ್ಲಿಯೂ ಸಿನಿಮಾ ಕ್ಷೇತ್ರದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಕುರಿತಂತೆ ಟಿವಿ ಸಂದರ್ಶನದಲ್ಲಿ ಮಾತನಾಡುತ್ತಿದ್ದಾಗ ಕಮಲ್ ದೇಶದ ಮಹಾಕಾವ್ಯವನ್ನು ಉಲ್ಲೇಖಿಸಿದ್ದರು.
''...ಸಾರ್ವಜನಿಕ ವೇದಿಕೆಗಳಲ್ಲಿ, ಮನೆಗಳಲ್ಲಿ ಪ್ರತಿನಿತ್ಯ, ಸಾಹಿತ್ಯ, ಮಹಾಕಾವ್ಯಗಳ ಘಟನೆಗಳ ಬಗ್ಗೆ ಹಲವು ಪ್ರತಿಕ್ರಿಯೆಗಳನ್ನು ಕಾಣುತ್ತೇವೆ. ಇದರಲ್ಲಿ ಹೋಲಿಕೆಗಳನ್ನು ನೀಡುವುದು ಬಹುತೇಕ ಸಾಮಾನ್ಯವಾಗಿದೆ. ಹೋಲಿಕೆಗಳನ್ನು ಗುರುತಿಸುವುದು ಮತ್ತು ಪ್ರತಿಕ್ರಿಯಿಸುವುದು ಪ್ರತಿಯೊಬ್ಬರ ಮೂಲಭೂತ ಹಕ್ಕು ಆಗಿದೆ. ಹೀಗಾಗಿಯೇ, ಕಲೆ, ಸಾಹಿತ್ಯ, ಲಲಿತ ಕಲೆ ವಿಕಸಿತವಾಗಿವೆ. ಒಬ್ಬರಿಗೆ ತಪ್ಪಾಗಿ ಕಂಡ ಮಾತ್ರಕ್ಕೆ ಮತ್ತೊಬ್ಬರ ಆಲೋಚನಾ ಪ್ರಕ್ರಿಯೆ ನಿರ್ಬಂಧಿಸುವ ಹಕ್ಕು ಯಾರಿಗೂ ಇಲ್ಲ. ಒಬ್ಬರ ದೃಷ್ಟಿಯಲ್ಲಿ ತಪ್ಪಾಗಿ ಕಂಡಿದ್ದು, ಮತ್ತೊಬ್ಬರ ದೃಷ್ಟಿಯಲ್ಲಿ ಸರಿ ಇರಬಹುದು. ಆದರೆ, ಅದಕ್ಕಾಗಿ ಇನ್ನೊಬ್ಬರು ಕ್ರಮ ಕೈಗೊಳ್ಳುವ ಯಾವುದೇ ಹಕ್ಕನ್ನು ಅದು ನೀಡುವುದಿಲ್ಲ. ಅದರಲ್ಲೂ ಕ್ರಿಮಿನಲ್ ವಿಚಾರಣೆಗೆ ಅವಕಾಶ ಒದಗಿಸುವುದಿಲ್ಲ,'' ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ಹೇಳಿದೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿ ಜಿಲ್ಲೆ ಅರೆಮಲ್ಲಾಪುರದ ಶರಣಬಸವೇಶ್ವರ ದೇವಸ್ಥಾನದ ಪೀಠಾಧಿಪತಿ ಪ್ರಣವಾನಂದ ಸ್ವಾಮೀಜಿ ಕೂಡಾ ಕಮಲ್ ಹಾಸನ್ ವಿರುದ್ಧ ಬೆಂಗಳೂರಿನ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಕಮಲ್ ಭಾಷಣ, ಸಂದರ್ಶನ, ಸಾಮಾಜಿಕ ಜಾಲ ತಾಣಗಳಾದ ಟ್ವಿಟ್ಟರ್, ಫೇಸ್ಬುಕ್ನಲ್ಲಿ ಸಂದೇಶಗಳು ಹಿಂದೂಗಳ ಭಾವನೆಗೆ ಧಕ್ಕೆ ತರುತ್ತಿದ್ದು, ಸಮಾಜದ ಶಾಂತಿ ಕದಡುತ್ತಿವೆ ಎಂದು ಆರೋಪಿಸಿದ್ದರು.