ಸಿಎಂ ಕೊವಿಡ್-19 ಪರಿಹಾರ ನಿಧಿಗೆ ದೇಣಿಗೆ ನೀಡಿದ ಬಾಲಕನಿಗೆ ಸೈಕಲ್ ಉಡುಗೊರೆ
ಚೆನ್ನೈ, ಮೇ 12: ತಮಿಳುನಾಡಿನಲ್ಲಿ ಮುಖ್ಯಮಂತ್ರಿಗಳ ಕೊವಿಡ್-19 ಪರಿಹಾರ ನಿಧಿಗೆ ನೆರವು ನೀಡಿದ 7 ವರ್ಷದ ಪುಟ್ಟ ಬಾಲಕ ಹರೀಶ್ ವರ್ಮನ್ ಅವರಿಗೆ ಸ್ವತಃ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ವಿಶೇಷ ಉಡುಗೊರೆ ಆಗಿ ಬ್ರಾಂಡೆಡ್ ಸೈಕಲ್ ಅನ್ನು ನೀಡಿದ್ದಾರೆ.
ಮಧುರೈ ಮೂಲದ ಎಲೆಕ್ಟ್ರಿಷಿಯನ್ ಅವರ ಪುತ್ರ ಹರೀಶ್ ವರ್ಮನ್ ಎರಡು ವರ್ಷಗಳಿಂದ ಸಂಗ್ರಹಿಸಿ ಇಟ್ಟಿದ್ದ 1,000 ರೂಪಾಯಿ ಹಣವನ್ನು ಸಿಎಂ ಕೊವಿಡ್-19 ಪರಿಹಾರ ನಿಧಿಗೆ ನೀಡಿದ್ದನು. ಬಾಲಕನ ಕಾರ್ಯದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿರುವ ಸಿಎಂ ಎಂ ಕೆ ಸ್ಟಾಲಿನ್ ಬಾಲಕನಿಗೆ ಸೈಕಲ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ.
ಮುತ್ತುವೇಲ್ ಕರುಣಾನಿಧಿ ಸ್ಟಾಲಿನ್ ಬಗ್ಗೆ ಒಂದಿಷ್ಟು ತಿಳಿಯಿರಿ
ಕೊರೊನಾವೈರಸ್ ಸೋಂಕಿನಿಂದ ಜನರು ನಿತ್ಯ ಅನುಭವಿಸುತ್ತಿದ್ದ ನರಕಯಾತನೆಯನ್ನು ನೋಡಿದ 7 ವರ್ಷದ ಬಾಲಕ ಹರೀಶ್ ತನ್ನ ಹಣವನ್ನು ಮುಖ್ಯಮಂತ್ರಿ ಕೊವಿಡ್-19 ಪರಿಹಾರ ನಿಧಿಗೆ ನೀಡಲು ನಿರ್ಧರಿಸಿದ್ದನು. 1,000 ರೂಪಾಯಿ ಹಣದ ಜೊತೆಗೆ ಸಿಎಂ ಎಂ ಕೆ ಸ್ಟಾಲಿನ್ ಅವರಿಗೆ ಹರೀಶ್ ವರ್ಮನ್ ಪತ್ರವೊಂದನ್ನು ಬರೆದಿದ್ದರು. ರಾಜ್ಯದಲ್ಲಿ ಕೊರೊನಾವೈರಸ್ ಸೋಂಕಿನಿಂದ ಸಮಸ್ಯೆ ಎದುರಿಸುತ್ತಿರುವ ಸಾರ್ವಜನಿಕರಿಗೆ ನೆರವು ನೀಡುವಂತೆ ಪತ್ರದಲ್ಲಿ ಬಾಲಕನು ಮನವಿ ಮಾಡಿಕೊಂಡಿದ್ದ.
ಬಾಲಕನ ಮನೆ ಬಾಗಿಲಿಗೆ ಸೈಕಲ್:
ಕಳೆದ ಮೇ 9ರ ಭಾನುವಾರ ಮಧುರೈ ಉತ್ತರ ಕ್ಷೇತ್ರದ ಶಾಸಕ ತಳಪಥಿ ಅವರು ತಮ್ಮ ಬೆಂಬಲಿಗರೊಂದಿಗೆ ಹರೀಶ್ ವರ್ಮನ್ ಅವರ ಮನೆಗೆ ಭೇಟಿ ನೀಡಿದರು. ಈ ವೇಳೆ ಬಾಲಕನಿಗಾಗಿ ಮುಖ್ಯಮಂತ್ರಿ ಸ್ಟಾಲಿನ್ ಅವರು ನೀಡಿದ ಕೆಂಪು-ನೀಲಿ ಬಣ್ಣದ ಸೈಕಲ್ ಅನ್ನು ಉಡುಗೊರೆಯಾಗಿ ನೀಡಿದರು. ಇದೇ ಸಂದರ್ಭದಲ್ಲಿ ದೂರವಾಣಿ ಮೂಲಕ ಬಾಲಕನ ಜೊತೆಗೆ ಮಾತನಾಡಿದ ಸಿಎಂ ಎಂ ಕೆ ಸ್ಟಾಲಿನ್, ಬಾಲಕನಿಗೆ ಧನ್ಯವಾದ ತಿಳಿಸಿದರು.
ஹரீஸ்வர்மன் என்ற சிறுவன் தனக்கு மிதிவண்டி வாங்குவதற்காக வைத்திருந்த உண்டியல் தொகையை #COVID19 தடுப்பிற்காக முதலமைச்சர் நிவாரண நிதிக்கு அனுப்பிய செய்தி கேட்டு நெகிழ்ந்தேன்.
— M.K.Stalin (@mkstalin) May 9, 2021
இத்தகைய உணர்வே தமிழகத்தின் வலிமை!
சிறுவனுக்கு மிதிவண்டி வாங்கிக் கொடுத்து தொலைபேசியில் அழைத்து வாழ்த்தினேன் pic.twitter.com/vNtWpj5SCe
ಸೈಕಲ್ ಪಡೆದ ಹರೀಶ್ ವರ್ಮನ್ ಸಂತಸ:
"ಅವರು ನನಗೆ ಸೈಕಲ್ ಇಷ್ಟವಾಯಿತೇ ಎಂದು ಕೇಳಿದರು. ನೀನು ಯಾವ ತರಗತಿ ವ್ಯಾಸಂಗ ಮಾಡುತ್ತಿದ್ದೀಯಾ ಎಂದು ಪ್ರಶ್ನೆ ಮಾಡದರು. ಇದರ ಜೊತೆಗೆ ಹೊರಗೆ ಓಡಾಡದಂತೆ ಹಾಗೂ ಕೊರೊನಾವೈರಸ್ ಬಗ್ಗೆ ಜಾಗೃತವಾಗಿರುವಂತೆ ಸಲಹೆ ನೀಡಿದರು" ಎಂದು ಸಿಎಂ ಜೊತೆ ಮಾತನಾಡಿದ ಹರೀಶ್ ವರ್ಮನ್ ತಿಳಿಸಿದ್ದಾರೆ.
ತಮಿಳುನಾಡು ಸಿಎಂ ಸ್ಟಾಲಿನ್ ಟ್ವೀಟ್:
"ಹರೀಶ್ ವರ್ಮನ್ ಎಂಬ ಬಾಲಕ ತಾನು ಸೈಕಲ್ ಖರೀದಿಸುವುದಕ್ಕಾಗಿ ಎರಡು ವರ್ಷದಿಂದ ಸಂಗ್ರಹಿಸಿ ಇಟ್ಟಿದ್ದ ಹಣವನ್ನು ಮುಖ್ಯಮಂತ್ರಿಗಳ ಕೊವಿಡ್-19 ಪರಿಹಾರ ನಿಧಿಗೆ ನೀಡಿದ್ದಾರೆ ಎಂಬ ಸುದ್ದಿಯನ್ನು ನಾನು ಮಾಧ್ಯಮಗಳ ಮೂಲಕ ತಿಳಿದುಕೊಂಡೆನು. ಆ ಬಾಲಕನಿಗಾಗಿ ನಾನು ಒಂದು ಸೈಕಲ್ ಅನ್ನು ಕೊಂಡುಕೊಂಡು ಆತನಿಗೆ ಉಡುಗೊರೆಯಾಗಿ ನೀಡಿದ್ದೇನೆ" ಎಂದು ಸಿಎಂ ಸ್ಟಾಲಿನ್ ಟ್ವೀಟ್ ಮಾಡಿದ್ದಾರೆ.