ನೀಲಗಿರಿಯಲ್ಲಿ ಸಮಸ್ಯೆ ಸೃಷ್ಟಿಸಿರುವ ಹುಲಿಯ ಜೀವಂತ ಸೆರೆಗೆ ಮದ್ರಾಸ್ ಹೈಕೋರ್ಟ್ ಸೂಚನೆ
ಚೆನ್ನೈ, ಅಕ್ಟೋಬರ್ 06: ತಮಿಳುನಾಡಿನ ನೀಲಗಿರಿ ಜಿಲ್ಲೆಯಲ್ಲಿ ಕೆಲವು ತಿಂಗಳಿನಿಂದ ಮನುಷ್ಯರ ವಾಸಸ್ಥಾನದಲ್ಲಿ ಓಡಾಡಿಕೊಂಡು ಸಮಸ್ಯೆಯಾಗಿರುವ ಹುಲಿಯನ್ನು ಜೀವಂತವಾಗಿ ಸೆರೆಹಿಡಿಯಬೇಕು ಎಂದು ಮದ್ರಾಸ್ ಹೈಕೋರ್ಟ್ ಮಂಗಳವಾರ ಹೇಳಿದೆ.
ಇಬ್ಬರು ವ್ಯಕ್ತಿಗಳನ್ನು ಹಾಗೂ ಹಲವು ಜಾನುವಾರುಗಳನ್ನು ಕೊಂದಿದ್ದ ಹುಲಿಯನ್ನು ಬೇಟೆಯಾಡಲು ಕಳೆದ ಶುಕ್ರವಾರ ತಮಿಳುನಾಡಿನ ಮುಖ್ಯ ವನ್ಯಜೀವಿ ವಾರ್ಡನ್ ಶೇಖರ್ ಕುಮಾರ್ ನೀರಜ್ ಆದೇಶ ಹೊರಡಿಸಿದ್ದರು.
ಕರ್ನಾಟಕದಲ್ಲಿ ಮತ್ತೊಂದು ಹುಲಿ ಸಂರಕ್ಷಿತ ಪ್ರದೇಶ; ಘೋಷಣೆ ಬಾಕಿ
ಈ ಸಂಬಂಧ ಚೆನ್ನೈ ಮೂಲದ ಪ್ರಾಣಿ ಹಕ್ಕುಗಳ ಸಂಘ, ಪೀಪಲ್ ಫಾರ್ ಕ್ಯಾಟಲ್ ಇನ್ ಇಂಡಿಯಾ, MDT-23 ಗುರುತಿನ ಹುಲಿಯನ್ನು ಜೀವಂತವಾಗಿ ಹಿಡಿಯಬೇಕು. ಅದನ್ನು ಬೇಟೆಯಾಡಿ ಸಾಯಿಸಬಾರದು ಎಂದು ಮನವಿ ಮಾಡಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯ ವಿಚಾರಣೆಯನ್ನು ಮಂಗಳವಾರ ಮುಖ್ಯ ನ್ಯಾಯಮೂರ್ತಿ ಸಂಜೀವ್ ಬ್ಯಾನರ್ಜಿ ಹಾಗೂ ನ್ಯಾಯಮೂರ್ತಿ ಪಿಡಿ ಆದಿಕೇಶವಾಲು ಅವರನ್ನೊಳಗೊಂಡ ನ್ಯಾಯಪೀಠ ಕೈಗೆತ್ತಿಕೊಂಡಿದೆ.
ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿ ಪಿ ಮುತ್ತುಕುಮಾರ್, ಈ ಹುಲಿಯನ್ನು ಕೊಲ್ಲುವ ಯಾವುದೇ ಯೋಜನೆ ಇಲ್ಲ ಎಂಬುದನ್ನು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. 'ಮದುಮಲೈ ಪ್ರದೇಶದಲ್ಲಿ ಹುಲಿಯನ್ನು ಜೀವಂತವಾಗಿ ಸೆರೆಹಿಡಿಯಲು ಹಾಗೂ ಅದಕ್ಕೆ ಯಾವ ರೀತಿಯ ಚಿಕಿತ್ಸೆ ನೀಡಬಹುದು ಎಂಬ ಕುರಿತು ಹುಲಿಯ ನಡವಳಿಕೆಯನ್ನು ಅಧ್ಯಯನ ಮಾಡುವ ಪ್ರಯತ್ನಗಳನ್ನು ನಡೆಸಲಾಗುತ್ತಿದೆ' ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ.
ಸುಮಾರು 13 ವರ್ಷದ್ದೆಂದು ಅಂದಾಜಿಸಿರುವ ಗಂಡು ಹುಲಿಯನ್ನು ಕಳೆದ ಶನಿವಾರದಿಂದ ಸೆರೆಹಿಡಿಯುವ ಪ್ರಯತ್ನ ಮುಂದುವರೆದಿದೆ. ಇದಾಗ್ಯೂ ಹುಲಿಯನ್ನು ಸೆರೆಹಿಡಿಯಲು ಸಾಧ್ಯವಾಗಿಲ್ಲ.
ಕರ್ನಾಟಕದಲ್ಲಿ ಹುಲಿ ಸಂತತಿ ಹೆಚ್ಚಳ; ಸಮೀಕ್ಷೆ ಪ್ರಾಥಮಿಕ ವರದಿ ಮಾಹಿತಿ...
ಮುದುಮಲೈ ಹುಲಿ ಸಂರಕ್ಷಿತ ಪ್ರದೇಶಕ್ಕೆ ಸೇರಿದ ಹುಲಿಯು ಗುಡಲೂರಿನ ಮನುಷ್ಯರ ವಾಸಸ್ಥಳದಲ್ಲಿ ಸಕ್ರಿಯವಾಗಿದೆ ಹಾಗೂ ಜುಲೈ ತಿಂಗಳಿನಿಂದ ಹಾವಳಿ ಮಾಡುತ್ತಿದೆ.
ಪ್ರಾಣಿಯನ್ನು ಸೆರೆ ಹಿಡಿಯಲು ಆ ಪ್ರದೇಶದಲ್ಲಿ ದೊಡ್ಡ ಬಂದೋಬಸ್ತ್ ಏರ್ಪಡಿಸಲಾಗಿದೆ ಎಂಬುದರ ಕುರಿತ ಪತ್ರಿಕೆಗಳ ವರದಿಯನ್ನು ನ್ಯಾಯಾಲಯ ಪತ್ರಿಕೆಗಳ ಗಮನಿಸಿದ್ದು, ಹೆಚ್ಚು ಜನರು ಅರಣ್ಯ ಪ್ರವೇಶಿಸಿದರೆ ನೈಸರ್ಗಿಕ ಆವಾಸಸ್ಥಾನ ನಾಶವಾಗುತ್ತದೆ. ಹೀಗಾಗಿ ಈ ವಿಚಾರದಲ್ಲಿ ಅತ್ಯುತ್ತಮ ವಿವೇಚನೆ ಬಳಸಿ ಹುಲಿ ಸೆರೆ ಹಿಡಿಯಬೇಕು ಎಂದು ಪ್ರಧಾನ ಅರಣ್ಯಾಧಿಕಾರಿಗಳಿಗೆ ಸೂಚಿಸಿದೆ.
ಹುಲಿಯ ಚಿಕಿತ್ಸೆ ಹಾಗೂ ಅದರ ನಡವಳಿಕೆಯ ಪರಿಶೀಲನೆಯನ್ನು ಸಂಬಂಧಿತ ತಂಡ ನೋಡಿಕೊಳ್ಳಲಿದೆ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ.
ಹುಲಿ ಸೆರೆಹಿಡಿಯುವ ಕಾರಣಕ್ಕಾಗಿ ಅರಣ್ಯದಲ್ಲಿ ವಾಸಿಸುತ್ತಿರುವ ಬೇರೆ ಪ್ರಾಣಿಗಳಿಗೆ ತೊಂದರೆಯಾಗಬಹುದು. ಇದಕ್ಕಾಗಿ ಕೆಲವು ಪ್ರತ್ಯೇಕ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಪ್ರಾಣಿಗಳ ಕಾಡಿನಲ್ಲಿ ವಾಸಿಸುವ ಹಕ್ಕನ್ನು ಗೌರವಿಸಬೇಕಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ. ಈ ಸಂಬಂಧ ಸ್ಥಿತ್ಯಂತರ ವರದಿ ಸಲ್ಲಿಸಲು ನ್ಯಾಯಾಲಯ ತಿಳಿಸಿದೆ.
ಹುಲಿಯನ್ನು ಜೀವಂತವಾಗಿ ಸೆರೆಹಿಡಿಯಲು 75ಕ್ಕೂ ಹೆಚ್ಚು ಅರಣ್ಯಾಧಿಕಾರಿಗಳು ಪ್ರಯತ್ನ ನಡೆಸುತ್ತಿದ್ದಾರೆ. ಐದು ಬೋನ್ಗಳನ್ನು ಇಟ್ಟಿದ್ದಾರೆ. ಅರಣ್ಯ ಸಂರಕ್ಷಣಾಧಿಕಾರಿಗಳ ನೇತೃತ್ವದಲ್ಲಿ ವಿಶೇಷ ತಂಡಗಳನ್ನು ರಚಿಸಲಾಗಿದೆ.
ಅಂತಾರಾಷ್ಟ್ರೀಯ ಹುಲಿ ದಿನ 2021: ಇತಿಹಾಸ, ಮಹತ್ವ, ಘೋಷಣೆಗಳು
ಮುದುಮಲೈ ಹುಲಿ ರಕ್ಷಿತಾರಣ್ಯದ ಕ್ಷೇತ್ರ ನಿರ್ದೇಶಕ ಹಾಗೂ ಕೇರಳದ ವೈನಾಡು ಜಿಲ್ಲೆಯ ಅರಣ್ಯ ವಿಭಾಗದ ಅಧಿಕಾರಿಗಳನ್ನು ಕೂಡ ಕರೆತರಲಾಗಿದೆ. ಡ್ರೋಣ್, ಎರಡು ಕುಮ್ಕಿ ಆನೆಗಳು, ಶ್ವಾನಗಳು ಶೋಧ ಕಾರ್ಯಾಚರಣೆಯ ಭಾಗವಾಗಿದೆ.
ಹಲವು ದಿನಗಳಿಂದ ಶೋಧ ಕಾರ್ಯ ನಡೆಯುತ್ತಿದ್ದರೂ ಹುಲಿಯ ಸುಳಿವು ಪತ್ತೆಯಾಗಿಲ್ಲ. ಆದರೆ ಆಗಾಗ್ಗೆ ಜನವಸತಿ ಸ್ಥಳದಲ್ಲಿ ಕಾಣಿಸಿಕೊಳ್ಳುವ ಹುಲಿ ಜನರಲ್ಲಿ ಭೀತಿ ಮೂಡಿಸಿದೆ. ಹುಲಿ ಪತ್ತೆಗೆ ಅರಣ್ಯ ಇಲಾಖೆ ಹರಸಾಹಸ ಪಡುತ್ತಿದೆ. ಜುಲೈನಿಂದ ಕಾಣಿಸಿಕೊಳ್ಳುತ್ತಿರುವ ಹುಲಿ ಸೆರೆಗೆ ಪ್ರಯತ್ನ ಮುಂದುವರೆದಿದ್ದು, ಅದಕ್ಕೆ ಸೂಕ್ತ ಚಿಕಿತ್ಸೆ ನೀಡಲು ಸಿದ್ಧತೆ ಸಾಗಿದೆ.