ದೇವರಿಗೆ ಅರ್ಚನೆಗೆ ತಮಿಳು ಮಂತ್ರ ಬಳಕೆ ತಪ್ಪೇನಿಲ್ಲ: ಕೋರ್ಟ್
ಚೆನ್ನೈ, ಸೆಪ್ಟೆಂಬರ್ 5: ದೇಗುಲಗಳಲ್ಲಿ ಸ್ಥಳೀಯ ಭಾಷೆ ಬಳಸಿ ದೇವರುಗಳಿಗೆ ಅರ್ಚನೆ ಮಾಡುವ ಬಗ್ಗೆ ಮೆಚ್ಚುಗೆ, ಪ್ರತಿರೋಧ ಎರಡು ಆಗಾಗ ಕೇಳಿ ಬರುತ್ತಿರುತ್ತವೆ. ಆದರೆ, ತಮಿಳುನಾಡಿನ ಹಿಂದೂ ದೇವಾಲಯಗಳಲ್ಲಿ ತಮಿಳು ಭಾಷೆಯಲ್ಲಿ ಅರ್ಚನೆ ಮಾಡುವುದರ ಬಗ್ಗೆ ಸರ್ಕಾರ ನೀಡಿರುವ ಆದೇಶವನ್ನು ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಲಾಗಿತ್ತು.
ಸಂಸ್ಕೃತವಲ್ಲದೆ, ತಮಿಳಿನಲ್ಲೂ ಪೂಜೆ ಮಾಡಲು ತಮಿಳುನಾಡು ಧಾರ್ಮಿಕ ಮತ್ತು ದತ್ತಿ ಇಲಾಖೆ ಸೂಚಿಸಿರುವುದಕ್ಕೆ ಎಂದು ಆಕ್ಷೇಪಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಪರಿಗಣಿಸಲು ಮದ್ರಾಸ್ ಹೈಕೋರ್ಟ್ ನಿರಾಕರಿಸಿದೆ. ''ತಮ್ಮ ಇಷ್ಟದ ಭಾಷೆಯಲ್ಲಿ ಮಂತ್ರ ಹೇಳಲು ಭಕ್ತರು ಸ್ವತಂತ್ರರು,ಮಂತ್ರವನ್ನು ತಮಿಳು ಅಥವಾ ಸಂಸ್ಕೃತದಲ್ಲಿ ಹೇಳಬೇಕೋ, ಬೇಡವೋ ಎಂಬುದು ಭಕ್ತರ ಆಯ್ಕೆಯಾಗಿದೆ'' ಎಂದು ಮುಖ್ಯ ನ್ಯಾಯಮೂರ್ತಿ ಬ್ಯಾನರ್ಜಿ ಮೌಖಿಕವಾಗಿ ಹೇಳಿದರು.
8 ಶತಮಾನದ ಹಿಂದಿನ ದೇಗುಲದ ಇತಿಹಾಸ ಬಗೆದ ಕನ್ನಡತಿ
2008ರಲ್ಲಿ ವಿ ಎಸ್ ಶಿವಕುಮಾರ್ ವರ್ಸಸ್ ಎಂ ಪಿಚ್ಚೈ ಬತ್ತಾರ್ ಪ್ರಕರಣದಲ್ಲಿ ದೇಗುಲದಲ್ಲಿ ಭಾಷೆ ಬಳಕೆ ವಿಚಾರದ ಬಗ್ಗೆ ಆದೇಶ ನೀಡಲಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಸಂಜೀಬ್ ಬ್ಯಾನರ್ಜಿ ಮತ್ತು ನ್ಯಾಯಮೂರ್ತಿ ಪಿ ಡಿ ಆದಿಕೇಶವಲು ಅವರಿದ್ದ ವಿಭಾಗೀಯ ಪೀಠ ಹೇಳಿದೆ.
ವಿ ಎಸ್ ಶಿವಕುಮಾರ್ ಪ್ರಕರಣದ ತೀರ್ಪಿನಲ್ಲಿ ಆಗಮ ಶಾಸ್ತ್ರ ಅಥವಾ ಧರ್ಮ ಗ್ರಂಥಗಳಲ್ಲಿ ತಮಿಳಿನಲ್ಲಿ ಮಂತ್ರ ಪಠಿಸಬಾರದು ಎಂದು ಹೇಳಿಲ್ಲ ಎಂದು ನ್ಯಾಯಾಲಯ ಹೇಳಿದೆ. ''ಅರ್ಚನೆ ಮಾಡುವಾಗ ತಮಿಳು ಅಥವಾ ಸಂಸ್ಕೃತದಲ್ಲಿ ಮಂತ್ರ ಹೇಳಬೇಕೆಂದು ಕೇಳುವ ಆಯ್ಕೆ ಭಕ್ತರಿಗೆ ಬಿಟ್ಟದ್ದಾಗಿದೆ'' ಎಂದೂ ಪೀಠ ಹೇಳಿದೆ.
''ದೇವಾಲಯದಲ್ಲಿ ಸಂಸ್ಕೃತದಲ್ಲಿ ಮಂತ್ರ ಹೇಳುವುದರ ಜೊತೆಗೆ ಭಕ್ತರ ಸೂಚನೆಯಂತೆ ಮಂತ್ರವನ್ನು ತಮಿಳಿನಲ್ಲಿ ಹೇಳಬೇಕು ಎಂಬುದನ್ನು ವಿ ಎಸ್ ಶಿವಕುಮಾರ್ ಪ್ರಕರಣದ ಆಧಾರದಲ್ಲಿ ನಿರ್ಧರಿಸಬೇಕಾಗುತ್ತದೆ. ವಿ ಎಸ್ ಶಿವಕುಮಾರ್ ಪ್ರಕರಣಕ್ಕೆ ವಿರುದ್ಧವಾಗಿ ಅರ್ಜಿದಾರರು ಹೇಳುವಂತೆ ನ್ಯಾಯಾಲಯವು ನಿಲುವು ತಳೆಯಲಾಗದು... ಅದನ್ನು ಪುನರ್ಪರಿಶೀಲಿಸಬೇಕು ಎಂದು ಅರ್ಜಿದಾರರು ಹೇಳಿದರೆ ಇಡೀ ಪ್ರಕರಣವೇ ಮತ್ತೊಂದು ಮಜಲಿಗೆ ಒಯ್ಯಬೇಕಾಗುತ್ತದೆ'' ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.
ತಮಿಳುನಾಡಿನ ದೇಗುಲಗಳಲ್ಲಿ ಹೊಸ ವರ್ಷದಿಂದ ವಸ್ತ್ರ ಸಂಹಿತೆ
ಅರ್ಜಿದಾರ ರಂಗರಾಜನ್ ನರಸಿಂಹನ್ ಪ್ರತಿಕ್ರಿಯಿಸಿ, ''ಅನಾದಿ ಕಾಲದಿಂದಲೂ ದೇವಾಲಯಗಳಲ್ಲಿ ಸಂಸ್ಕೃತದಲ್ಲಿ ಅರ್ಚನೆ ಮಾಡಿಸುವುದು ವಾಡಿಕೆಯಾಗಿದೆ. ಆಗಮನ ಶಾಸ್ತ್ರದ ಪ್ರಕಾರ ಮಂತ್ರ ಹೇಳುವಾಗ ನಿರ್ದಿಷ್ಟ ವಿಧಾನ ಅನುಸರಿಸಬೇಕು. ಪರಿಚಿತವಿಲ್ಲದ ಭಾಷೆಯಲ್ಲಿ ಮಂತ್ರ ಹೇಳುವಂತೆ ದೇವಾಲಯಗಳನ್ನು ಒತ್ತಾಯಿಸುವ ಮೂಲಕ ತಮಿಳುನಾಡು ಸರ್ಕಾರ ಮತ್ತು ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆ ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿವೆ'' ಎಂದು ವಾದಿಸಿದ್ದರು.
''ಜಾತ್ಯತೀತವಾದ ದೇಶವಾಗಿರುವುದರಿಂದ ಧರ್ಮದ ವಿಚಾರದಲ್ಲಿ ಸರ್ಕಾರ ಅಥವಾ ಸರ್ಕಾರದ ವಿಚಾರದಲ್ಲಿ ಧರ್ಮ ಮಧ್ಯಪ್ರವೇಶಿಸುವಂತಿಲ್ಲ. ಪ್ರಾರ್ಥನಾ ಕೇಂದ್ರಗಳ ಕಾಯಿದೆಯ ಪ್ರಕಾರ ದೇವಸ್ಥಾನಗಳ ಧಾರ್ಮಿಕ ನೀತಿ-ನಿಯಮಗಳನ್ನು ಬದಲಿಸುವಂತಿಲ್ಲ. ಹೀಗಾಗಿ, ಈ ವಿಚಾರದಲ್ಲಿ ಸರ್ಕಾರದ ನಿಲುವು ಕಾನೂನಿಗೆ ವಿರುದ್ಧವಾಗಿದೆ'' ಎಂದರು.
ಆಧಾರರಹಿತ ಆರೋಪಗಳನ್ನು ಪೀಠ ಒಪ್ಪುವುದಿಲ್ಲ. ಮಂತ್ರ ಹೇಳುವುದು ನ್ಯಾಯಿಕ ಪರಿಧಿಯ ಆಚೆಗಿನ ವಿಚಾರವಾಗಿ ಉಳಿದಿಲ್ಲ ಎಂದು ಪೀಠ ಹೇಳಿದೆ.
ತಮಿಳುನಾಡಲ್ಲಿ 'ಕೊರೊನಾ ದೇವಿ' ದೇವಾಲಯ; ವಿಶೇಷ ಪೂಜೆ
ಇದಕ್ಕೆ ನರಸಿಂಹನ್ ಅವರು ''ಇದು ಭಕ್ತರ ಆಯ್ಕೆಯಲ್ಲ. ಇದು ಧಾರ್ಮಿಕ ಅವಶ್ಯಕತೆಯಾಗಿದೆ. ವಿ ಎಸ್ ಶಿವಕುಮಾರ್ ಪ್ರಕರಣವು ಸರ್ಕಾರದ ಪರಮಾಧಿಕಾರವನ್ನು ಪ್ರಶ್ನಿಸುವುದಿಲ್ಲ. ಈ ವಿಧಾನವನ್ನು (ತಮಿಳಿನಲ್ಲಿ ಅರ್ಚನೆ ಮಾಡುವುದು) ಸರ್ಕಾರ ಜಾರಿ ಮಾಡಿದೆ. ಈ ವಿಚಾರದಲ್ಲಿ ಸರ್ಕಾರಕ್ಕೆ ಇರುವ ಅಧಿಕಾರವಾದರೂ ಏನು?'' ಎಂದು ಪ್ರಶ್ನಿಸಿದರು.
''ಲಸಿಕೆಯಿಂದ ರೋಗಮುಕ್ತವಾಗಬಹುದು ಎಂಬುದು ಹೇಗೋ ನಂಬಿಕೆಯಾಗಿದೆಯೋ ಅದೇ ರೀತಿ ಸೂಕ್ತ ಭಾಷೆ, ವಿಧಾನ ಹಾಗೂ ಉಚ್ಚಾರಣೆ ಮೂಲಕವೇ ದೇವರಿಗೆ ಭಕ್ತರ ಮನವಿ ತಲುಪಬಹುದು ಎಂಬ ನಂಬಿಕೆಯಿದೆ. ನಂಬಿಕೆಗೆ ಕೊಡಲಿ ಪೆಟ್ಟು ಬೀಳಲಾರದು'' ಎಂದು ನರಸಿಂಹನ್ ಹೇಳಿದರು.
ಅಂತಿಮವಾಗಿ ಪೀಠವು ಪ್ರಕರಣದ ಮರುಪರಿಶೀಲಿಸುವಂತಹ ಯಾವುದೇ ಸನ್ನಿವೇಶ ಉದ್ಭವಿಸಿಲ್ಲ ಎಂದು ಮನವಿಯನ್ನು ವಜಾ ಮಾಡಿದೆ.(ಮಾಹಿತಿ ಕೃಪೆ: ಬಾರ್ ಅಂಡ್ ಬೆಂಚ್)