ಜಯಾ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಮದ್ರಾಸ್ ಹೈಕೋರ್ಟ್
ಚೆನ್ನೈ, ಡಿಸೆಂಬರ್ 29: ಮದ್ರಾಸ್ ಹೈ ಕೋರ್ಟ್ ನ್ಯಾಯಮೂರ್ತಿ ವೈದ್ಯನಾಥನ್ ಅವರು ಜಯಲಲಿತಾ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ತಮಿಳುನಾಡಿನ ದಿವಂಗತ ಮುಖ್ಯಮಂತ್ರಿ ಜಯಲಲಿತಾ ಸಾವಿನ ಬಗ್ಗೆ ತನಿಖೆಗಾಗಿ ಸಲ್ಲಿಸಿದ ಅರ್ಜಿ ವಿಚಾರಣೆ ವೇಳೆಯಲ್ಲಿ ನ್ಯಾಯಮೂರ್ತಿ ವೈದ್ಯನಾಥನ್ ಮೌಖಿಕವಾಗಿ ಈ ಅಂಶದ ಬಗ್ಗೆ ಗಮನ ಸೆಳೆದಿದ್ದಾರೆ.
ಜಯಲಲಿತಾ ಸಾವು ನಿಗೂಢವಾದ ರೀತಿಯಲ್ಲಿ ಸಂಭವಿಸಿದೆ. ಆದ್ದರಿಂದ ಆ ಬಗ್ಗೆ ತನಿಖೆಯಾಗಬೇಕು ಎಂದು ಅರ್ಜಿದಾರ ಜೋನ್ಸ್ ಮನವಿ ಮಾಡಿದ್ದಾರೆ. ನ್ಯಾಯಮೂರ್ತಿಗಳು ತಮ್ಮ ವೈಯಕ್ತಿಕ ಅಭಿಪ್ರಾಯ ಹೇಳುತ್ತಾ, ಹಲವು ಮಾಧ್ಯಮಗಳು ಈ ಬಗ್ಗೆ ಅನುಮಾನ ವ್ಯಕ್ತಪಡಿಸಿವೆ ಎಂದರು.[ಅಮ್ಮನಿಗೆ ನೊಬೆಲ್, ಮ್ಯಾಗ್ಸೆಸ್ಸೆ, ಭಾರತ ರತ್ನ ಸಿಗಬೇಕು!]
ಜಯಲಲಿತಾ ಅವರಿಗೆ ನೀಡಿದ್ದ ಚಿಕಿತ್ಸೆ ಬಗ್ಗೆ ಎಲ್ಲ ಮಾಹಿತಿ ಇದ್ದರೂ ಕೇಂದ್ರ ಸರಕಾರ ಈ ಬಗ್ಗೆ ಏಕೆ ಸುಮ್ಮನಿದೆ ಎಂದು ಪ್ರಶ್ನಿಸಿದರು. ಜಯಲಲಿತಾ ಆರೋಗ್ಯದ ಬಗ್ಗೆ ಗೊಂದಲಮಯ ಹೇಳಿಕೆಗಳನ್ನು ನೀಡಲಾಯಿತು. ಆದ್ದರಿಂದ ಆಕೆ ಸಾವಿನ ನಂತರವಾದರೂ ಜನರಿಗೆ ಸತ್ಯ ಬಹಿರಂಗ ಮಾಡಬೇಕು ಎಂದರು.
ನ್ಯಾಯಮೂರ್ತಿಗಳು ಈ ವಿಚಾರವನ್ನು ಕೈಗೆತ್ತಿಕೊಳ್ಳಲಿಲ್ಲ ಮತ್ತು ಸಂಬಂಧಪಟ್ಟ ಪೀಠಕ್ಕೆ ವಹಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿಗಳಿಗೆ ಮನವಿ ಮಾಡಿದರು. ಮುಂದಿನ ವಿಚಾರಣೆ ಜನವರಿ 9ರಂದು ನಡೆಯಲಿದೆ. ಖಾಸಗಿ ವ್ಯಕ್ತಿಯೊಬ್ಬರು ಜಯಲಲಿತಾ ನಿಗೂಢ ಸಾವಿನ ಬಗ್ಗೆ ತನಿಖೆಗೆ ಆದೇಶಿಸಬೇಕು ಎಂದು ಕೋರಿ ಮದ್ರಾಸ್ ಹೈ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.