ಕೇಂದ್ರದ ಹಿಂದಿ ಹೇರಿಕೆ ವಿರುದ್ಧ ಗುಡುಗಿದ ಸ್ಟಾಲಿನ್
ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರಕಾರ ಬಲವಂತವಾಗಿ ಹಿಂದಿ ಹೇರಲು ಯತ್ನಿಸುತ್ತಿದೆ ಎಂದು ಡಿಎಂಕೆ ಮುಖಂಡ ಎಂಕೆ ಸ್ಟಾಲಿನ್ ಆರೋಪಿಸಿದ್ದಾರೆ. ಇದೇ ಧೋರಣೆ ಮುಂದುವರಿಸಿದರೆ ಚಳವಳಿ ಆರಂಬಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಚೆನ್ನೈ, ಮಾರ್ಚ್ 31: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಇಂಗ್ಲಿಷ್ ಗೆ ಪರ್ಯಾಯವಾಗಿ ಹಿಂದಿ ಬಳಸುವ ಕೇಂದ್ರ ಸರಕಾರದ ನಿರ್ಧಾರಕ್ಕೆ ಡಿಎಂಕೆ ಮುಖಂಡ ಎಂಕೆ ಸ್ಟಾಲಿನ್ ಆಕ್ರೋಶ ವ್ಯಕ್ತಪಡಿಸಿದ್ದು, ಹಿಂದಿ ವಿರೋಧಿ ಚಳವಳಿ ಆರಂಭಿಸುವ ಬೆದರಿಕೆಯೊಡ್ಡಿದ್ದಾರೆ. ಕೇಂದ್ರ ಸರಕಾರದ ನಿರ್ಧಾರವು ತಮಿಳುನಾಡಿನ ಮೇಲೆ ಹಿಂದಿ ಹೇರುವ ಪ್ರಯತ್ನ ಎಂದು ಆರೋಪಿಸಿದ್ದಾರೆ.
ತಮಿಳುನಾಡಿನಲ್ಲಿ ಹಿಂಬಾಗಿಲಿನಿಂದ ಹಿಂದಿಯನ್ನು ಹೇರುವ ಪ್ರಯತ್ನ ನಡೆಯುತ್ತಿದೆ. "ಒಂದು ವೇಳೆ ಬಿಜೆಪಿ ಸರಕಾರ ಹಿಂದಿಗೆ ಪ್ರಾಮುಖ್ಯ ಕೊಟ್ಟು, ತಮಿಳನ್ನು ಮೂಲೆಗುಂಪು ಮಾಡಲು ಯತ್ನಿಸಿದರೆ ಹಿಂದಿ ವಿರುದ್ಧ ಹೊಸ ಚಳವಳಿ ಆರಂಭಿಸಲಾಗುವುದು" ಎಂದು ಸ್ಟಾಲಿನ್ ಎಚ್ಚರಿಕೆ ನೀಡಿದ್ದಾರೆ.[ಹಿಂದಿ ದಿವಸ್ ವಿರುದ್ಧ ಕನ್ನಡಿಗರ ಟ್ವಿಟ್ಟರ್ ಟ್ರೆಂಡ್ ವಾರ್!]
ವೆಲ್ಲೂರು ಹಾಗೂ ಕೃಷ್ಣಗಿರಿ ಜಿಲ್ಲೆಗಳ ರಾಷ್ಟ್ರೀಯ ಹೆದ್ದಾರಿಗಳ ಮೈಲುಗಲ್ಲುಗಳ ಮೇಲೆ, ಇತರ ಕಡೆ ಹಿಂದಿ ಬಳಸಲಾಗಿದೆ ಎಂದು ಸ್ಟಾಲಿನ್ ಹೇಳಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಸಂಸ್ಕೃತ ಹಾಗೂ ಹಿಂದಿ ಬಳಕೆಯನ್ನು ಹೆಚ್ಚು ಮಾಡಿದೆ. ಹಿಂದಿಯನ್ನು ಬಲವಂತವಾಗಿ ಹೇರುವುದನ್ನು, ಇಂಗ್ಲಿಷ್ ಬದಲಿಗೆ ಹಿಂದಿ ಬಳಸುವುದನ್ನು ನಿಲ್ಲಿಸಬೇಕು ಎಂದು ಅವರು ಹೇಳಿದ್ದಾರೆ.[ಸುಧೀಂದ್ರ ಕುಲಕರ್ಣಿಯವರಿಂದ ಕನ್ನಡಿಗರಿಗೆ ಹಿಂದೀ ಪಾಠ!]
1960ರಲ್ಲಿ ಹಿಂದಿ ಹೇರಿಕೆ ವಿರುದ್ಧ ತಮಿಳುನಾಡಿನಲ್ಲಿ ಕೇಂದ್ರ ಸರಕಾರದ ವಿರುದ್ಧ ಭಾರೀ ಪ್ರತಿಭಟನೆ ನಡೆದಿತ್ತು. ದ್ರಾವಿಡ ಚಳವಳಿಗೆ ಬಲತಂದಿತ್ತು. ಅಂಥದ್ದೇ ಚಳವಳಿ ಆರಂಭಿಸುವುದಾಗಿ ಸ್ಟಾಲಿನ್ ಎಚ್ಚರಿಸಿದ್ದಾರೆ.