'ಪುದುಚೆರಿ ಸರಕಾರದಲ್ಲಿ ಕಿರಣ್ ಬೇಡಿ ಮಧ್ಯ ಪ್ರವೇಶಿಸುವಂತಿಲ್ಲ'
ಚೆನ್ನೈ, ಏಪ್ರಿಲ್ 30: ಕೇಂದ್ರಾಡಳಿತ ಪ್ರದೇಶವಾದ ಪುದುಚೆರಿಯ ನಿತ್ಯದ ಕಾರ್ಯ ಚಟುವಟಿಕೆಗಳಲ್ಲಿ ಅಲ್ಲಿನ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಮಧ್ಯ ಪ್ರವೇಶಿಸಬಾರದು ಎಂದು ಮಂಗಳವಾರ ಮದ್ರಾಸ್ ಹೈ ಕೋರ್ಟ್ ಹೇಳಿದೆ. ''ಕಡತಗಳನ್ನು ಕೇಳುವುದಕ್ಕಾಗಲೀ ಹಾಗೂ ಸರಕಾರಿ ಅಧಿಕಾರಿಗಳಿಗೆ ಆದೇಶ ನೀಡುವುದಕ್ಕಾಗಲೀ ಕಿರಣ್ ಬೇಡಿಗೆ ಅಧಿಕಾರ ಇಲ್ಲ" ಎಂದು ಕೋರ್ಟ್ ಹೇಳಿದೆ.
ಕಿರಣ್ ಬೇಡಿ ಪುದುಚೆರಿಯಲ್ಲಿ ಮೂರು ವರ್ಷಗಳ ಹಿಂದೆ ಅಧಿಕಾರ ವಹಿಸಿಕೊಂಡ ದಿನದಿಂದ ಅಲ್ಲಿನ ಮುಖ್ಯಮಂತ್ರಿ ವಿ.ನಾರಾಯಣಸ್ವಾಮಿ ಅವರ ಜತೆಗೆ ತಿಕ್ಕಾಟ ನಡೆಯುತ್ತಲೇ ಇದೆ. ಎರಡು ವರ್ಷಗಳ ಹಿಂದೆ ಕಾಂಗ್ರೆಸ್ ಶಾಸಕ ಲಕ್ಷ್ಮೀನಾರಾಯಣನ್ ಅವರು, ಲೆಫ್ಟಿನೆಂಟ್ ಜನರಲ್ ಅವರು ದೈನಂದಿನ ವ್ಯವಹಾರಗಳಲ್ಲಿ ಮಧ್ಯಪ್ರವೇಶಿಸುವುದನ್ನು ಪ್ರಶ್ನಿಸಿ, ಅರ್ಜಿ ಹಾಕಿದ್ದರು.
ರಾಜ್ಯಪಾಲೆ ಕಿರಣ್ ಬೇಡಿ ನಿವಾಸದ ಮುಂದೆ ರಾತ್ರಿ ಕಳೆದ ಪುದುಚೆರಿ ಸಿಎಂ
ಕಿರಣ್ ಬೇಡಿ ಅವರು ಆಡಳಿತಾತ್ಮಕ ವಿಚಾರಗಳಲ್ಲಿ ವಿಪರೀತ ಮೂಗು ತೂರಿಸುತ್ತಾರೆ ಎಂದು ಕಳೆದ ಫೆಬ್ರವರಿಯಲ್ಲಿ ಪುದುಚೆರಿ ಮುಖ್ಯಮಂತ್ರಿ ನಾರಾಯಣಸ್ವಾಮಿ ಅನಿರ್ದಿಷ್ಟಾವಧಿ ಧರಣಿ ನಡೆಸಿದ್ದರು. ರಾಜ್ ನಿವಾಸ್ ನ ಹೊರಭಾಗದ ರಸ್ತೆಯಲ್ಲಿ ಮಲಗಿ ಸಿಎಂ, ಸಚಿವರು ಪ್ರತಿಭಟನೆ ಮಾಡಿದ್ದರು.
ನವದೆಹಲಿಯಲ್ಲಿ ಸಂಸತ್ ಭವನದ ಮುಂದೆ ನಾರಾಯಣಸ್ವಾಮಿ ಪ್ರತಿಭಟನೆ ನಡೆಸಿ, ಪುದುಚೆರಿಗೆ ರಾಜ್ಯದ ಸ್ಥಾನಮಾನ ನೀಡಬೇಕು ಹಾಗೂ ಕಿರಣ್ ಬೇಡಿ ಅವರನ್ನು ಲೆಫ್ಟಿನೆಂಟ್ ಹುದ್ದೆಯಿಂದ ಇಳಿಸಬೇಕು ಎಂದು ಆಗ್ರಹಿಸಿದ್ದರು.
ಮೂವರು ಶಾಸಕರನ್ನು ವಿಧಾನಸಭೆಗೆ ನಾಮ ನಿರ್ದೇಶನ ಮಾಡಿದ ಕಿರಣ್ ಬೇಡಿ ನಡೆಯನ್ನು ಕಳೆದ ವರ್ಷ ಡಿಸೆಂಬರ್ ನಲ್ಲಿ ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿತ್ತು. ಆ ಕ್ರಮವನ್ನು ಕಾಂಗ್ರೆಸ್ ಪ್ರಶ್ನಿಸಿ, ನಾಮನಿರ್ದೇಶನಕ್ಕೂ ಮುನ್ನ ಅಡಳಿತಾರೂಢ ಪಕ್ಷವನ್ನು ಸಂಪರ್ಕಿಸಬೇಕಿತ್ತು ಎಂದು ಹೇಳಿತ್ತು.
ಕಿರಣ್ ಬೇಡಿ ಅವರಿಗೆ ನಾಮನಿರ್ದೇಶನ ಮಾಡುವ ಅಧಿಕಾರ ಇದೆಯೇ ಎಂಬ ವಿಚಾರವಾಗಿ ಆಡಳಿತಾರೂಢ ಕಾಂಗ್ರೆಸ್ ಮದ್ರಾಸ್ ಹೈ ಕೋರ್ಟ್ ಮೆಟ್ಟಿಲೇರಿತ್ತು. ಕೇಂದ್ರಾಡಳಿತ ಪ್ರದೇಶ ಕಾಯ್ದೆ ಪ್ರಕಾರ ನಾಮನಿರ್ದೇಶನವು ಕಾನೂನು ಬದ್ಧವಾಗಿದೆ ಎಂದು ಕಿರಣ್ ಬೇಡಿ ಹೇಳಿದ್ದರು.