ವೆಲ್ಲೂರಿನ ಗೋದಾಮಿನಲ್ಲಿ ಡಿಎಂಕೆ ನಾಯಕನಿಗೆ ಸೇರಿದ 9 ಕೋಟಿ ಐಟಿ ವಶಕ್ಕೆ
ವೆಲ್ಲೂರು (ತಮಿಳುನಾಡು), ಏಪ್ರಿಲ್ 1: ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಡಿಎಂಕೆ ಪ್ರಮುಖ ನಾಯಕರಿಗೆ ಸಂಬಂಧಿಸಿದ ಸಿಮೆಂಟ್ ಗೋದಾಮಿನಿಂದ 9 ಕೋಟಿ ರುಪಾಯಿ ವಶಕ್ಕೆ ಪಡೆದಿದ್ದಾರೆ. "ನಮ್ಮ ಪಕ್ಷವನ್ನು ಬೆದರಿಸಲು ಹೀಗೆ ಮಾಡಲಾಗುತ್ತಿದೆ" ಎಂದು ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್ ಆರೋಪ ಮಾಡಿದ್ದಾರೆ.
ಕರ್ನಾಟಕದಲ್ಲಿ ಗುತ್ತಿಗೆದಾರರು, ಸರಕಾರಿ ಅಧಿಕಾರಿಗಳ ಮೇಲೆ ಆದಾಯ ತೆರಿಗೆ ದಾಳಿಯಾದ ಕೆಲವೇ ದಿನಕ್ಕೆ ತಮಿಳುನಾಡಿನಲ್ಲೂ ದಾಳಿ ನಡೆದಿದೆ. ಐಟಿ ದಾಳಿಯನ್ನು ಖಂಡಿಸಿ, ಕೇಂದ್ರದ ವಿರುದ್ಧ ಕರ್ನಾಟಕದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ನಿಂದ ಪ್ರತಿಭಟನೆ ಕೂಡ ನಡೆಸಲಾಗಿತ್ತು.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಕರೆನ್ಸಿ ನೋಟುಗಳನ್ನು ಕಾರ್ಟನ್ ಡಬ್ಬಗಳಲ್ಲಿ ಹಾಗೂ ಗೋಣಿ ಚೀಲಗಳಲ್ಲಿ ಹಾಕಿಡಲಾಗಿತ್ತು. ವಿತರಿಸಲು ಅನುಕೂಲ ಆಗುವಂತೆ ಅವುಗಳ ಮೇಲೆ ವಾರ್ಡ್ ಗಳ ಸಂಖ್ಯೆಗಳನ್ನು ಬರೆಯಲಾಗಿತ್ತು ಎಂದು ಆದಾಯ ತೆರಿಗೆ ಇಲಾಖೆ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ರಾಜಕಾರಣಿಯೊಬ್ಬರು ನೀಡಿದ ಸುಳಿವಿನ ಮೇಲೆ ನಾವು ಡಿಎಂಕೆ ನಾಯಕ ಹಾಗೂ ಆ ಪಕ್ಷದ ಖಜಾಂಚಿಯೂ ಆಗಿರುವ ದುರೈಮುರುಗನ್ ಅವರಿಗೆ ಸೇರಿದ್ದು ಎಂದು ದಾಳಿ ಮಾಡಿದೆವು. ಅವರ ಮಗ ಕದಿರ್ ಆನಂದ್ ವೆಲ್ಲೂರ್ ಲೋಕಸಭಾ ಕ್ಷೇತ್ರಕ್ಕೆ ಡಿಎಂಕೆ ಅಭ್ಯರ್ಥಿ ಆಗಿದ್ದಾರೆ. ದೊಡ್ಡ ಮೊತ್ತವನ್ನು ವಶಪಡಿಸಿಕೊಂಡಿದ್ದೇವೆ. ಅವನ್ನು ಖಾಸಗಿ ಎಂಜಿನಿಯರಿಂಗ್ ಕಾಲೇಜಿನಿಂದ ಸಿಮೆಂಟ್ ಗೋದಾಮಿಗೆ ಸಾಗಿಸಲಾಗಿತ್ತು. ಆ ಗೋದಾಮು ಶ್ರೀನಿವಾಸನ್ ಎಂಬುವವರಿಗೆ ಸೇರಿದ್ದು ಎನ್ನಲಾಗಿದೆ.
ಇದೀಗ ಡಿಎಂಕೆ ನಾಯಕರು ಮದ್ರಾಸ್ ಹೈ ಕೋರ್ಟ್ ಮೆಟ್ಟಿಲೇರಿದ್ದು, ಚುನಾವಣೆಗೆ ಸಂಬಂಧಿಸಿದ ಕೆಲಸಗಳನ್ನು ಮಾಡದಂತೆ ತಡೆಯಲು ಐಟಿ ದಾಳಿ ಮಾಡಿಸಲಾಗಿದೆ ಎಂದು ಹೇಳಿದ್ದಾರೆ. ಇದೊಂದು ರಾಜಕೀಯ ಪ್ರೇರಿತ ದಾಳಿ ಎಂದು ಸ್ಟಾಲಿನ್ ಆರೋಪ ಮಾಡಿದ್ದಾರೆ.
ರೈಲ್ವೆ ಅಧಿಕಾರಿಗಳ ಸೋಗಿನಲ್ಲಿ ಐಟಿ ಅಧಿಕಾರಿಗಳು: ಮತ್ತೊಂದು ಬಾಂಬ್ ಸಿಡಿಸಿದ ಎಚ್ಡಿಕೆ
ಡಿಎಂಕೆಯಿಂದ ಪ್ರತಿ ಲೋಕಸಭಾ ಕ್ಷೇತ್ರದಲ್ಲಿ ನೂರು ಕೋಟಿ ರುಪಾಯಿ ಹಂಚುವ ಯೋಜನೆ ಇದೆ. ಜಿಲ್ಲಾ ಮಟ್ಟದ ಪದಾಧಿಕಾರಿಗಳಿಗೆ ಅ ಹಣ ಕಳುಹಿಸಿದ್ದಾರೆ. ಈ ಕಾರ್ಯಾಚರಣೆಗೆ 'ಬ್ಲೂ ಸ್ಕೈ' (ನೀಲ ವಾನಂ) ಎಂದು ಹೆಸರಿಟ್ಟಿದ್ದಾರೆ ಎಂದು ತಿಳಿದುಬಂದಿದೆ. ಜನರಿಗೆ ಡಿಎಂಕೆ ಉದ್ದೇಶವೇನು ಎಂಬುದು ಗೊತ್ತಾಗಬೇಕು ಎಂದು ಮೀನುಗಾರಿಕೆ ಸಚಿವ ಡಿ.ಜಯಕುಮಾರ್ ಹೇಳಿದ್ದಾರೆ.
ವೆಲ್ಲೂರ್ ನಲ್ಲಿ ಚುನಾವಣೆ ಮುಂದೂಡುವ ಸಾಧ್ಯತೆ ಇದೆಯೇ ಎಂಬ ಪ್ರಶ್ನೆಗೆ, ಅದನ್ನು ಮುಖ್ಯ ಚುನಾವಣಾ ಆಯುಕ್ತರು ನಿರ್ಧರಿಸುತ್ತಾರೆ ಎಂದು ತಮಿಳುನಾಡಿನ ಅಧಿಕಾರಿ ಸತ್ಯಬ್ರತ ಸಾಹೂ ತಿಳಿಸಿದ್ದಾರೆ.