ಓಖಿಗೂ ಮುನ್ನ ಭಾರತೀಯರ ನಿದ್ದೆಕೆಡಿಸಿದ್ದ 7 ಕ್ರೂರ ಚಂಡಮಾರುತ
Recommended Video
ಚೆನ್ನೈ, ಡಿಸೆಂಬರ್ 01: ಪ್ರಕೃತಿಯ ಅಪರಿಮಿತ ಶಕ್ತಿಯೆದುರು ಮನುಷ್ಯ ತೃಣಸಮಾನ ಎಂಬುದನ್ನು ಸಾಬೀತುಪಡಿಸುವುದಕ್ಕಾಗಿಯೇ ಪ್ರತಿವರ್ಷವೂ ಒಂದಿಲ್ಲೊಂದು ನೈಸರ್ಗಿಕ ವಿಕೋಪಗಳು ನಡೆಯುತ್ತಲೇ ಇರುತ್ತವೆ. ಇದೀಗ ತಮಿಳುನಾಡಿನಲ್ಲಿ ಸ್ಮಶಾನ ಮೌನ ಸೃಷ್ಟಿಸಿರುವ ಓಖಿ ಚಂಡಮಾರುತವೂ ಅದರದೇ ಒಂದು ಭಾಗ.
ತಮಿಳುನಾಡು, ಕೇರಳದಲ್ಲಿ ಓಖಿ ಅಬ್ಬರ ಜಾರಿ, ಬೆಂಗಳೂರಲ್ಲೂ ಮಳೆ
ಈಗಾಗಲೇ 8 ಜನರನ್ನು ಬಲಿತೆಗೆದುಕೊಂಡ ಓಖಿ, ತಮಿಳುನಾಡಿನ ಜನಜೀವನವನ್ನೇ ಅಸ್ತವ್ಯಸ್ತಗೊಳಿಸಿದೆ. ಹೆಚ್ಚು ಪ್ರಾಣಹಾನಿ ತಪ್ಪಿಸುವುದಕ್ಕಾಗಿ ಈಗಾಗಲೇ ಇಲ್ಲಿನ ಸರ್ಕಾರ ಕ್ರಮಕೈಗೊಂಡಿದ್ದು, ಶಾಲೆ-ಕಾಲೇಜು, ಕಚೇರಿಗಳಿಗೆ ರಜೆ ಘೋಷಿಸಿದೆ.
ಚಂಡಮಾರುತಕ್ಕೆ ಮಹಿಳೆಯರ ಹೆಸರನ್ನಿಡುತ್ತಾರೆ ಏಕೆ?
ಓಖಿಯಂಥ ಚಂಡಮಾರುತಗಳು ಭಾರತಕ್ಕೆ ಹೊಸತೇನಲ್ಲ. ಕಳೆದ ಹಲವು ವರ್ಷಗಳಿಂದ ಒಂದಿಲ್ಲೊಂದು ಅಪಾಯಕಾರಿ ಚಂಡಮಾರತಕ್ಕೆ ಭಾರತದ ಹಲವು ರಾಜ್ಯಗಳು ಮೈಯೊಡ್ಡಿವೆ, ಮರುಗಿವೆ. ಪ್ರಕೃತಿಯ ಮುನಿಸಿಗೆ ತಮ್ಮ ಬಂಧುಬಾಂಧವರನ್ನು ಕಳೆದುಕೊಂಡ ಹಲವರಿಗೆ ಈ ಚಂಡಮಾರುತಗಳು ದುಃಸ್ವಪ್ನವೆನ್ನಿಸಿವೆ.
In Pics : ಓಖಿ ಸೋಕಿದ ಊರೆಲ್ಲ ನೀರೋ ನೀರು, ನೆಲ ನೋಡಿದ ಮರಗಳು
ಜನರು ಸುಲಭವಾಗಿ ನೆನಪಲ್ಲಿಟ್ಟುಕೊಳ್ಳಬಹುದಾದ ಹಾಗೂ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲು ಸರಳವಾದ ಹೆಸರನ್ನು ಹುಡುಕಿ ಹವಾಮಾನ ಇಲಾಖೆಯೇ ಚಂಡಮಾರುತಗಳಿಗೆ ನಾಮಕರಣ ಮಾಡುತ್ತದೆ! ಹಾಗೆಯೇ ಈ ಬಾರಿಯ ಚಂಡಮಾರುತಕ್ಕೆ 'ಓಖಿ' ಎಂದು ಹೆಸರಿಡಲಾಗಿದೆ!
'ಓಖಿ' ಅಬ್ಬರಕ್ಕೆ ತಮಿಳುನಾಡು, ಕೇರಳ ತತ್ತರ
ಕಳೆದ ಕೆಲ ವರ್ಷಗಳಿಂದ ಭಾರತವನ್ನು ಕಾಡಿದ 7 ಅಪಾಯಕಾರಿ ಚಂಡಮಾರುತಗಳ ಪಟ್ಟಿ ಇಲ್ಲಿದೆ.
ಹುಢುದ್ - 2014
2014 ರಲ್ಲಿ ಒಡಿಶಾ ಮತ್ತು ಆಂಧ್ರಪ್ರದೇಶಗಳಿಗೆ ಅಪ್ಪಳಿಸಿದ ಹುಢುದ್ ಎಂಬ ಚಂಡಮಾರುತ 185 ಕಿ.ಮೀ.ವೇಗದಲ್ಲಿ ವಿಶಾಖಪಟ್ಟಣಂ ಅನ್ನು ಅಪ್ಪಳಿಸಿತ್ತು. ಈ ಚಂಡಮಾರುತದಿಂದ 61 ಜನ ಮೃತರಾಗಿದ್ದರೆ, 21,900 ಕೋಟಿ ರೂ.ಗೂ ಹೆಚ್ಚು ಹಾನಿಹಾಗಿತ್ತು. ಈ ಸಮಯದಲ್ಲಿ ಎರಡೂ ರಾಜ್ಯಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿತ್ತು. ಹಲವು ದಿನ ವಿದ್ಯುತ್ ಕೈಕೊಟ್ಟು ಜನ ಪರಿತಪಿಸಿದ್ದರು.
ಫೈಲಿನ್ - 2013
2013 ರ ಅಕ್ಟೋಬರ್ ನಲ್ಲಿ ಒಡಿಶಾಕ್ಕೆ ಅಪ್ಪಳಿಸಿದ್ದ ಫೈಲಿನ್ ಎಂಬ ಚಂಡಮಾರುತ, ದಸರಾ ಸಂಭ್ರಮವನ್ನೇ ನಾಶಗೊಳಿಸಿ 1,154,725 ಜನರನ್ನು ಬೇರೆಡೆ ಸ್ಥಳಾಂತರಿಸಲಾಗಿತ್ತು. ತಕ್ಷಣವೇ ಮುನ್ನೆಚ್ಚರಿಕೆ ತೆಗೆದುಕೊಂಡಿದ್ದರೂ 3000 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಆಸ್ತಿ ಪಾಸ್ತಿ ಹಾನಿಯಾಗಿತ್ತು.
ನೀಲಂ - 2012
2012 ಅಕ್ಟೋಬರ್ 31 ರಂದು ತಮಿಳುನಾಡಿನ ಕರಾವಳಿ ಪ್ರದೇಶವಾದ ಮಹಾಬಲಿಪುರಂ ಅನ್ನು ಅಪ್ಪಳಿಸಿದ್ದ ನೀಲಂ ಚಂಡಮಾರುತಕ್ಕೆ 12 ಜನ ಮೃತರಾಗಿದ್ದರು. 3000 ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿತ್ತು. 100 ಕೋಟಿ ರೂ.ಗೂ ಅಧಿಕ ಮೌಲ್ಯದ ಆಸ್ತಿ ಹಾನಿಯಾಗಿತ್ತು.
ಜಾಲ್ - 2010
2010 ರಲ್ಲಿ ಆಂಧ್ರಪ್ರದೇಶ ಮತ್ತು ಒಡಿಶಾಕ್ಕೆ ಅಪ್ಪಳಿಸಿದ ಜಾಲ್ ಚಂಡಮಾರುತಕ್ಕೆ 54 ಜನ ಬಲಿಯಾಗಿದ್ದರು. 70,000 ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿತ್ತು. ಈ ಚಂಡಮಾರುತಕ್ಕೆ 3,00,000 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಬೆಳೆಯೆಲ್ಲವೂ ನಾಶವಾಗಿ ರೈತರ ಬದುಕನ್ನು ಮೂರಾಬಟ್ಟೆ ಮಾಡಿತ್ತು.
ಫ್ಯಾನ್ - 2009
2009 ರಲ್ಲಿ ಸಂಭವಿಸಿದ ಫ್ಯಾನ್ ಚಂಡಮಾರುತಕ್ಕೆ 300 ಕ್ಕೂ ಹೆಚ್ಚು ಮೀನುಗಾರರು ನಾಪತ್ತೆಯಾಗಿದ್ದರು. ಮುಂಬೈ, ಡಿಯು, ದಮನ್, ಥಾಣೆ ಮುಂತಾದ ಪ್ರದೇಶಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿತ್ತು. ಅಸಂಖ್ಯ ಆಸ್ತಿ-ಪಾಸ್ತಿ ಹಾನಿಯಾಗಿತ್ತು.
ನಿಶಾ- 2008
2008 ರ ನವೆಂಬರ್ ನಲ್ಲಿ ತಮಿಳುನಾಡಿಗೆ ಅಪ್ಪಳಿಸಿದ ನಿಶಾ ಚಂಡಮಾರುತಕ್ಕೆ 180 ಕ್ಕೂ ಹೆಚ್ಚು ಜನ ಅಸುನೀಗಿದ್ದರು. ಈ ಸಮಯದಲ್ಲಿ 1280 ಮಿ.ಮೀ. ಗೂ ಹೆಚ್ಚು ಮಳೆ ಸುರಿದು ದಾಖಲೆಯಾಗಿತ್ತು. ಬಂಗಾಳಕೊಲ್ಲಿಯಲ್ಲಿ ಹುಟ್ಟಿದ ಈ ಚಂಡಮಾರುತ ತಮಿಳುನಾಡಿನ ಕರಾವಳಿ ತತ್ತರಿಸುವಂತೆ ಮಾಡಿತ್ತು.
ರಶ್ಮಿ- 2008
2008 ರಲ್ಲಿ ಆಂಧ್ರಪ್ರದೇಶದಲ್ಲಿ ಸಂಭವಿಸಿದ ರಶ್ಮಿ ಚಂಡಮಾರುತಕ್ಕೆ ಬಲಿಯಾದವರು 15 ಜನ. ಅತಿಯಾಗಿ ಮಳೆಯಾಗುವ ಎಚ್ಚರಿಕೆಯನ್ನು ಜನರಿಗೆ ಮೊದಲೇ ನೀಡಿದ್ದರೂ 15 ಜನರ ಸಾವನ್ನು ತಪ್ಪಿಸುವುದಕ್ಕೆ ಮಾತ್ರ ಸಾಧ್ಯವಾಗಲಿಲ್ಲ. ಅಕ್ಟೋಬರ್ 27 ರಂದು ಸಂಭವಿಸಿದ ಈ ಚಂಡಮಾರುತ ಕಳೆದು ಕೇವಲ ಹದಿನೈದು ದಿನಗಳಲ್ಲಿ, ಇದೇ ಪ್ರದೇಶದಲ್ಲಿ ಖಾಯ್ ಮುಕ್ ಎಂಬ ಮತ್ತೊಂದು ಚಂಡಮಾರುತ ಅಪ್ಪಳಿಸಿತ್ತು.