ಸುದೀಪ್, ಕೊಹ್ಲಿ, ತಮನ್ನಾ, ಗಂಗೂಲಿಗೆ ಹೈಕೋರ್ಟ್ ನೋಟಿಸ್!
ಚೆನ್ನೈ, ನ.03: ಆನ್ ಲೈನ್ ಜೂಜು ಪರ ಪ್ರಚಾರ ಕೈಗೊಂಡ ಅನೇಕ ಸೆಲೆಬ್ರಿಟಿಗಳಿಗೆ ಮದ್ರಾಸ್ ಹೈಕೋರ್ಟಿನ ಮದುರೈ ನ್ಯಾಯಪೀಠ ಇಂದು ನೋಟಿಸ್ ಜಾರಿ ಮಾಡಿದೆ. ಐಪಿಎಲ್ ಸಂದರ್ಭದಲ್ಲಿ ಆನ್ಲೈನ್ ಜೂಜು ಪ್ರಚಾರ ಮಾಡುತ್ತಿರುವ ಈ ಸೆಲೆಬ್ರಿಟಿಗಳಿಂದ ಜನ ಸಾಮಾನ್ಯರಿಗೆ ತೊಂದರೆಯಾಗಿವೆ ಸಾವು ನೋವು ಸಂಭವಿಸಿದೆ. ಆಪ್ ಆಧಾರಿತ ಜೂಜು ನಿಲ್ಲಿಸಬೇಕು ಎಂದು ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಲಾಗಿತ್ತು.
ಆನ್ಲೈನ್ ಜೂಜು ಪರ ಪ್ರಚಾರ ಮಾಡುವ ಕ್ರಿಕೆಟರ್ಸ್ , ನಟ, ನಟಿಯರ ವಿರುದ್ಧದ ಈ ಪಿಐಎಲ್ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್ ಎಲ್ಲರಿಗೂ ನೋಟಿಸ್ ಜಾರಿ ಮಾಡಿದೆ. ನೋಟಿಸ್ ಪಡೆದ ಎಲ್ಲಾ ಸೆಲೆಬ್ರಿಟಿಗಳು ನವೆಂಬರ್ 19 ರೊಳಗೆ ಪ್ರತಿಕ್ರಿಯಿಸಲು ಕೋರ್ಟ್ ಆದೇಶಿಸಿದೆ.
ಆಂಧ್ರಪ್ರದೇಶದಲ್ಲಿ ಆನ್ಲೈನ್ ಗೇಮಿಂಗ್, ಬೆಟ್ಟಿಂಗ್ ನಿಷೇಧ!
ಬಹುಭಾಷಾ ನಟ ಸುದೀಪ್, ಪ್ರಕಾಶ್ ರಾಜ್, ರಾಣಾ ದಗ್ಗುಬಾಟಿ, ನಟಿ ತಮನ್ನಾ ಭಾಟಿಯಾ, ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮುಂತಾದವರಿಗೆ ನೋಟಿಸ್ ಜಾರಿ ಮಾಡಲಾಗಿದೆ.
ತಮಿಳುನಾಡಿನಲ್ಲಿ ಇತ್ತೀಚೆಗೆ ಆನ್ ಲೈನ್ ಜೂಜಿನಲ್ಲಿ ಹಣ ಕಳೆದುಕೊಂಡ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾಗಿದ್ದ ಘಟನೆ ನಡೆದಿತ್ತು. ಜೂಜೂಟ ಒಂದು ಸಾಮಾಜಿಕ ಪಿಡುಗಾಗಿದ್ದು, ಬೇರೆ ಬೇರೆ ರೂಪದಲ್ಲಿ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತಿದೆ. ಸೆಲೆಬ್ರಿಟಿಗಳು ಆನ್ಲೈನ್ ಜೂಜಾಟದ ಪರ ಪ್ರಚಾರ ಮಾಡಿ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರಿಂದ ಪಿಡುಡು ಹೆಚ್ಚಾಗುತ್ತಿದೆ. ಈ ಸೆಲೆಬ್ರಿಟಿಗಳನ್ನು ಬಂಧಿಸಬೇಕು ಹಾಗೂ ಜೂಜಾಟವನ್ನು ನಿಷೇಧಿಸುವಂತೆ ಕೋರಿ ವಕೀಲರೊಬ್ಬರು ಮದ್ರಾಸ್ ಹೈಕೋರ್ಟ್ನಲ್ಲಿ ಸಲ್ಲಿಸಿರುವ ಅರ್ಜಿಯಲ್ಲಿ ಹೇಳಿದ್ದಾರೆ.
ಅದಲ್ಲದೆ, ಚೆನ್ನೈ ಸೂಪರ್ ಕಿಂಗ್ಸ್, ರಾಜಸ್ಥಾನ್ ರಾಯಲ್ಸ್ ಎಂದು ಊರಿನ ಹೆಸರು ಇಟ್ಟುಕೊಂಡಿರುವ ಫ್ರಾಂಚೈಸಿಗಳ ಪರ ಆಡುವ ಆಟಗಾರರು ಇಂಥ ಪ್ರಚಾರಕ್ಕೆ ಇಳಿದರೆ ಸಹಜವಾಗಿ ಆ ಊರು, ರಾಜ್ಯಕ್ಕೂ ಕೆಟ್ಟ ಹೆಸರು ಎಂದು ವಕೀಲ ಮೊಹಮ್ಮದ್ ರಿಜ್ವಿ ಹೇಳಿದ್ದಾರೆ.
ಕೊಹ್ಲಿ ಹಾಗೂ ತಮನ್ನಾ ಮೊಬೈಲ್ ಪ್ರೀಮಿಯರ್ ಲೀಗ್ ಪರ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುತ್ತಾರೆ. ಸುದೀಪ್, ಗಂಗೂಲಿ ಮೈ11 ಸರ್ಕಲ್ ಪರ ಪ್ರಚಾರ ಮಾಡಿದ್ದಾರೆ. ಎಂಪಿಎಲ್ ಸದ್ಯ ಟೀಂ ಇಂಡಿಯಾದ ಕಿಟ್ ಪ್ರಾಯೋಜಕತ್ವ ಕೂಡಾ ಪಡೆದಿದೆ. ಫ್ಯಾಂಟಸಿ ಲೀಗ್ ಡ್ರೀಮ್11 ಸದ್ಯ ಐಪಿಎಲ್ ನ ಶೀರ್ಷಿಕೆ ಪ್ರಾಯೋಜಕತ್ವ ಪಡೆದುಕೊಂಡಿದೆ.