ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದಕ್ಕೆ ಕಾರಣ ನೀಡಿದ ಖುಷ್ಬೂ
ಚೆನ್ನೈ, ಅಕ್ಟೋಬರ್ 13: ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾದ ಮರುದಿನವೇ ನಟಿ ಖುಷ್ಬೂ, ತಮ್ಮ ಮಾಜಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಬುದ್ಧಿವಂತ ಮಹಿಳೆಯನ್ನು ಬಯಸುವುದಿಲ್ಲ ಮತ್ತು ಪಕ್ಷದೊಳಗೆ ಸತ್ಯವನ್ನು ಹೇಳುವ ಸ್ವಾತಂತ್ರ್ಯವಿಲ್ಲ ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್ನ ರಾಷ್ಟ್ರೀಯ ವಕ್ತಾರರಾಗಿದ್ದ ಖುಷ್ಬೂ, ಪಕ್ಷವು ನಿಯಮಗಳನ್ನು ಹೇರುತ್ತಿತ್ತು ಮತ್ತು ತಮ್ಮನ್ನು ಹತ್ತಿಕ್ಕುತ್ತಿತ್ತು ಎಂದು ಆರೋಪಿಸಿದ್ದಾರೆ. ಕಾಂಗ್ರೆಸ್ ಪಕ್ಷವು ತಕ್ಷಣದಿಂದ ಜಾರಿಗೆ ಬರುವಂತೆ ಪಕ್ಷದ ವಕ್ತಾರರ ಸ್ಥಾನದಿಂದ ಖುಷ್ಬೂ ಅವರನ್ನು ಸೋಮವಾರ ಕಿತ್ತುಹಾಕಿತ್ತು. ಕೆಲವೇ ನಿಮಿಷಗಳಲ್ಲಿ ಖುಷ್ಬೂ ತಮ್ಮ ರಾಜೀನಾಮೆ ಪತ್ರ ಬಿಡುಗಡೆ ಮಾಡಿದ್ದರು. ಪಕ್ಷದ ಹಿರಿಯರು ಕೆಟ್ಟದಾಗಿ ನೋಡಿಕೊಂಡಿಕೊಂಡಿರುವುದರಿಂದ ಪಕ್ಷಕ್ಕೆ ಗುಡ್ ಬೈ ಹೇಳುವ ಒತ್ತಡಕ್ಕೆ ಸಿಕುವಂತಾಯಿತು ಎಂದು ಹೇಳಿದ್ದರು.
ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಖ್ಯಾತನಟಿ ಖುಷ್ಬೂ
ಮಂಗಳವಾರ ಚೆನ್ನೈ ವಿಮಾನ ನಿಲ್ದಾಣಕ್ಕೆ ಬಂದಿಳಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಕಾಂಗ್ರೆಸ್ ಮುಖಂಡರ ಹೇಳಿಕೆಗಳನ್ನು ಉಲ್ಲೇಖಿಸಿ, ಪಕ್ಷವು ಮಾನಸಿಕ ಅಸ್ವಸ್ಥರಿಂದ ಕೂಡಿದೆ ಎಂದು ಟೀಕಿಸಿದರು. ಮುಂದೆ ಓದಿ.
ಅಗೌರವ ತೋರಿಸಿದ ಕಾಂಗ್ರೆಸ್
'ನಾನು ಕಾಂಗ್ರೆಸ್ಗೆ ನಿಷ್ಠಳಾಗಿದ್ದೆ. ಆದರೆ ಕಾಂಗ್ರೆಸ್ ನನಗೆ ಅಗೌರವ ತೋರಿಸಿತು. ಅವರಿಗೆ ಬುದ್ಧಿವಂತ ಮಹಿಳೆ ಬೇಕಾಗಿಲ್ಲ. ನನ್ನನ್ನು ಅವರು ನಟಿಯಾಗಿಯಷ್ಟೇ ನೋಡಿದ್ದರು. ಇದು ಕಾಂಗ್ರೆಸ್ನ ಕೀಳು ಚಿಂತನೆಗಳನ್ನು ತೋರಿಸಿತು' ಎಂದಿದ್ದಾರೆ.
ಮೋದಿ ಮೇಲೆ ವಿಶ್ವಾಸ
"ಬಿಜೆಪಿಯಿಂದ ನನಗೇನು ಸಿಗುತ್ತದೆ ಎಂಬ ನಿರೀಕ್ಷೆಯನ್ನು ಇಟ್ಟುಕೊಂಡಿಲ್ಲ. ಬದಲಿಗೆ ಬಿಜೆಪಿಯಿಂದ ದೇಶಕ್ಕೇನು ಸಿಗುತ್ತದೆ ಎನ್ನುವುದರ ಬಗ್ಗೆ ನಾನು ಆಲೋಚಿಸುತ್ತೇನೆ. ದೇಶದ 128 ಕೋಟಿ ಜನರು ಒಬ್ಬ ವ್ಯಕ್ತಿಯ ಮೇಲೆ ಭರವಸೆಯಿಟ್ಟುಕೊಂಡಿದ್ದಾರೆ ಎಂದರೆ ಅದು ಪ್ರಧಾನಮಂತ್ರಿ ನರೇಂದ್ರ ಮೋದಿ ಒಬ್ಬರೇ. ಹಾಗಿದ್ದ ಮೇಲೆ ಅವರಿಂದ ಖಂಡಿತವಾಗಿಯೂ ದೇಶಕ್ಕೆ ಒಳಿತು ಆಗುತ್ತದೆ" ಎಂದು ನಟಿ ಖುಷ್ಬೂ ಅವರು ವಿಶ್ವಾಸ ವ್ಯಕ್ತಪಡಿಸಿದ್ದರು.
ಶಿಕ್ಷಣ ನೀತಿ ಬೆಂಬಲಿಸಿದ್ದ ಖುಷ್ಬೂ
ಬಿಜೆಪಿ ಮತ್ತು ಆರೆಸ್ಸೆಸ್ನ ಕಟು ಟೀಕಾಕಾರರಾಗಿದ್ದ ಖುಷ್ಬೂ, ಇತ್ತೀಚೆಗೆ ಕೇಂದ್ರ ಸರ್ಕಾರದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಬೆಂಬಲಿಸಿದ್ದು, ಕಾಂಗ್ರೆಸ್ ನಾಯಕರ ಕೆಂಗಣ್ಣಿಗೆ ಕಾರಣವಾಗಿತ್ತು. ಪಕ್ಷದಲ್ಲಿ ಅಶಿಸ್ತಿನ ನಡವಳಿಕೆಯ ಆರೋಪಕ್ಕೆ ಒಳಗಾಗಿದ್ದರು. ಬಳಿಕ ಅವರು ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಕ್ಷಮೆ ಕೋರಿದ್ದರು.
ಡಿಎಂಕೆ, ಕಾಂಗ್ರೆಸ್
ಖುಷ್ಬೂ 2010 ರಿಂದ 2014ರ ಅವಧಿಯಲ್ಲಿ ಡಿಎಂಕೆಯಲ್ಲಿದ್ದರು. ಆಗ ತಮಿಳುನಾಡಿನಲ್ಲಿ ಡಿಎಂಕೆ ಅಧಿಕಾರದಲ್ಲಿತ್ತು. ಪಕ್ಷದ ನಾಯಕತ್ವದ ಜತೆಗಿನ ಜಗಳದ ಬಳಿಕ 2014ರಲ್ಲಿ ಕಾಂಗ್ರೆಸ್ ಸೇರಿಕೊಂಡಿದ್ದರು. 2001-2004ರ ಅವಧಿಯಲ್ಲಿ ಎಐಎಡಿಎಂಕೆ ಪರವೂ ಪ್ರಚಾರ ನಡೆಸಿದ್ದರು.