ಲಕ್ಷಾಂತರ ಲೀಟರ್ ನೀರು ಆಫರ್ ತಿರಸ್ಕರಿಸಿದ ತಮಿಳುನಾಡು
ಕೊಚ್ಚಿ, ಜೂನ್ 21: ಕುಡಿಯುವ ನೀರಿಗೆ ಹಾಹಾಕಾರ ಎದ್ದಿದ್ದರೂ ಅಕ್ಕ ಪಕ್ಕ ರಾಜ್ಯದ ನೆರವು ಪಡೆಯದಿರಲು ತಮಿಳುನಾಡಿನ ಎಐಎಡಿಎಂಕೆ ಸರ್ಕಾರ ನಿರ್ಧರಿಸಿದೆ.
ತೀವ್ರ ಬರ ಪರಿಸ್ಥಿತಿ ಎದುರಿಸುತ್ತಿರುವ ತಮಿಳುನಾಡಿನ ಕುಡಿಯುವ ನೀರಿನ ದಾಹ ತೀರಿಸಲು ಸುಮಾರು 20 ಲಕ್ಷ ಲೀಟರ್ ಕುಡಿಯುವ ನೀರು ಒದಗಿಸಲು ಸಿದ್ಧ ಎಂದು ಕೇರಳದ ಪಿಣರಾಯಿ ವಿಜಯನ್ ಸರ್ಕಾರ ಆಫರ್ ನೀಡಿತ್ತು. ಆದರೆ, ತಮಿಳುನಾಡಿನ ಪಳನಿಸ್ವಾಮಿ ಸರ್ಕಾರವು ಆಫರ್ ತಿರಸ್ಕರಿಸಿದೆ. ಆದರೆ, ಕಾವೇರಿ ನದಿ ನೀರಿನ ಜೂನ್ ತಿಂಗಳಿನ ಪಾಲು ಬೇಕೆಂದು ಕೇಂದ್ರ ಸರ್ಕಾರವನ್ನು ಕೇಳುವುದನ್ನು ಮಾತ್ರ ಬಿಟ್ಟಿಲ್ಲ.
ಚೆನ್ನೈನಲ್ಲಿ 'ನೀರಿಗಾಗಿ ಯುದ್ಧ' ಬಿಸಿಲಿನ ಬೇಗೆ, ಆತಂಕದಲ್ಲಿ ಜನತೆ
ತಿರುವನಂತಪುರಂನಿಂದ ಚೆನ್ನೈಗೆ ರೈಲಿನ ಮೂಲಕ 20 ಲಕ್ಷ ಲೀಟರ್ ನೀರು ಪೂರೈಸಲು ಕೇರಳ ಸರ್ಕಾರ ಮುಂದಾಗಿತ್ತು. ಚೆನ್ನೈಗೆ ಪ್ರತಿನಿತ್ಯ 830 ದಶಲಕ್ಷ ಲೀಟರ್ ನ ಅಗತ್ಯ ಹೊಂದಿದೆ. ತಮಿಳುನಡಿಗೆ ನಿತ್ಯ 2 ದಶಲಕ್ಷ ಲೀಟರ್ ಅಗತ್ಯವಿದೆ ಎಂದು ತಮಿಳುನಾಡಿನ ನಗರಾಭಿವೃದ್ಧಿ ಖಾತೆ ಸಚಿವ ಎಸ್ ಪಿ ವೇಲುಮಣಿ ಹೇಳಿದ್ದಾರೆ.
ತಮಿಳುನಾಡಿನಲ್ಲಿ ಮುಂಗಾರು ಪೂರ್ವ ಮಳೆ ಕೂಡಾ ಕೈಕೊಟ್ಟಿದ್ದರಿಂದ ರಾಜ್ಯದ ಪ್ರಮುಖ ನೀರಿನ ಮೂಲಗಳಾದ ರೆಡ್ ಹಿಲ್, ಶೋಲಾವರಂ ಮತ್ತು ಚೆಂಬರಂಬಕ್ಕಂನ ಕೆರೆಗಳು ಬತ್ತಿ ಹೋಗಿವೆ. ಕೆಲ ಕೆರೆಗಳಲ್ಲಿ ಮಾತ್ರ ಅಲ್ಪಪ್ರಮಾಣದ ನೀರಿದ್ದು, ನೀರಿನ ಪೂರೈಕೆ ಮಾಡಬೇಕಾಗಿದೆ.
ಪ್ರಸಕ್ತ ವರ್ಷದ ಕುಡಿಯುವ ನೀರಿನ ಪೂರೈಕೆಗಾಗಿ ಆಡಳಿತರೂಢ ಎಐಎಡಿಎಂಕೆ ಸರ್ಕಾರವು 500 ಕೋಟಿ ರು ವೆಚ್ಚದ ಯೋಜನೆ ರೂಪಿಸಿದೆ. 29 ಜಿಲ್ಲೆಗಳ ಅಂತರ್ಜಲ ಮಟ್ಟ ಕಾಯ್ದುಕೊಳ್ಳುವುದು, ಕೆರೆಗಳ ಪುನಶ್ಚೇತನ, ಪರ್ಯಾಯ ಮಾರ್ಗಗಳಿಗೆ ಬೆಂಬಲ ಮುಂತಾದ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿತ್ತು. ಆದರೆ, ಸಮಸ್ಯೆ ಉಲ್ಬಣವಾಗಿದೆ. ಸದ್ಯಕ್ಕೆ ಚೆನ್ನೈ ನಗರ ಪೂರೈಕೆಗೆ 525 ಎಂಎಲ್ ಡಿ ನೀರುಮಾತ್ರ ಇದೆ.