ಹಲವು ಅನುಮಾನ, ಊಹಾಪೋಹಗಳಿಗೆ ಕಾರಣವಾದ ಕೆಸಿಆರ್-ಸ್ಟಾಲಿನ್ ಭೇಟಿ
ಚೆನ್ನೈ, ಮೇ 13 : ಮೇ 23ರಂದು ಪ್ರಕಟವಾಗಲಿರುವ ಲೋಕಸಭೆ ಚುನಾವಣೆ ಫಲಿತಾಂಶಕ್ಕೂ ಮುನ್ನ ತೆಲಂಗಾಣ ರಾಷ್ಟ್ರ ಸಮಿತಿ ಅಧ್ಯಕ್ಷ ಮತ್ತು ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಮತ್ತು ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಅಧ್ಯಕ್ಷ ಸ್ಟಾಲಿನ್ ನಡುವಿನ ಭೇಟಿ ರಾಷ್ಟ್ರದ ಗಮನವನ್ನು ಸೆಳೆದಿದೆ.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ಬಿಜೆಪಿಯನ್ನು ವಿರೋಧಿಸುತ್ತಿರುವ ದಕ್ಷಿಣ ಭಾರತದ ಎಲ್ಲ ನಾಯಕರನ್ನು ಭೇಟಿ ಮಾಡುತ್ತಿರುವ ಕೆ ಚಂದ್ರಶೇಖರ್ ರಾವ್ ಅವರು ಚೆನ್ನೈನಲ್ಲಿ ಎಂಕೆ ಸ್ಟಾಲಿನ್ ಅವರ ನಿವಾಸದಲ್ಲಿ ಭೇಟಿ ಆಗಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಕೆಸಿಆರ್ ಅವರು ಈಗಾಗಲೆ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಕರ್ನಾಟಕದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರನ್ನೂ ಭೇಟಿಯಾಗಿದ್ದಾರೆ.
ಸ್ಟಾಲಿನ್ ಕೆಸಿಆರ್ ಭೇಟಿ ಮಾಡುತ್ತಿರುವುದೇಕೆ? ಡಿಎಂಕೆ ಸ್ಪಷ್ಟನೆ
ಈ ಭೇಟಿ ಏಕೆ ಕುತೂಹಲ ಮೂಡಿಸಿದೆಯೆಂದರೆ, ಡಿಎಂಕೆ ಪಕ್ಷ ತಮಿಳುನಾಡಿನಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಲೋಕಸಭೆ ಚುನಾವಣೆಯನ್ನು ಎದುರಿಸಿದೆ. ಆದರೆ, ಕೆಸಿಆರ್ ಅವರು ಕಾಂಗ್ರೆಸ್ ಜೊತೆ ಬದ್ಧ ವೈರತ್ವವನ್ನು ಹೊಂದಿದ್ದಾರೆ ಮತ್ತು ಕಾಂಗ್ರೆಸ್ಸಿನಿಂದ ಅಂತರವನ್ನು ಕಾಪಾಡಿಕೊಂಡೇ ಬಂದಿದ್ದಾರೆ. ಹಿಂದೆ, ಭೇಟಿಯ ಬಗ್ಗೆ ಪ್ರಸ್ತಾವನೆ ಇಟ್ಟಿದ್ದಾಗ, ಸ್ಟಾಲಿನ್ ಅವರು ಮುಂದೆ ಹಾಕುತ್ತಲೇ ಬಂದಿದ್ದರು.
ಕೆಸಿಆರ್ ಮತ್ತು ಸ್ಟಾಲಿನ್ ಭೇಟಿಯನ್ನು ಸೌಹಾರ್ದಯುವ ಭೇಟಿ ಎಂದು ಹೇಳಲಾಗಿದೆಯಾದರೂ, ತೆಲಂಗಾಣದಲ್ಲಿ ಪ್ರಬಲವಾಗಿರುವ ಕೆಸಿಆರ್ ಅವರು ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಸೀಟು ಗೆಲ್ಲುವ ಉಮೇದಿಯಲ್ಲಿದ್ದಾರೆ. ಅಲ್ಲದೆ, ಬಿಜೆಪಿ ಮತ್ತು ಕಾಂಗ್ರೆಸ್ಸಿನಿಂದ ಅಂತರ ಕಾಪಾಡಿಕೊಂಡಿರುವ ಅವರು, ಈ ಎರಡೂ ರಾಷ್ಟ್ರಮಟ್ಟದ ಪಕ್ಷಗಳು ಸ್ವಂತ ಶಕ್ತಿಯ ಮೇಲೆ ಸರಕಾರ ರಚಿಸುವುದು ಕಷ್ಟಕರ ಎಂದು ತಿಳಿದಿರುವ ಸಂದರ್ಭದಲ್ಲಿ, ಬಿಜೆಪಿ ಮತ್ತು ಕಾಂಗ್ರೆಸ್ಸೇತರ ಪಕ್ಷಗಳನ್ನು ಒಗ್ಗೂಡಿಸಲು ಮುಂದಾಗಿದ್ದಾರೆ.
ಬಿಜೆಪಿ ಮತ್ತು ಕಾಂಗ್ರೆಸ್ ಇಲ್ಲದ ತೃತೀಯ ರಂಗವನ್ನು ಬಲಪಡಿಸುವುದೇ ಕೆ ಚಂದ್ರಶೇಖರ ರಾವ್ ಅವರ ಉದ್ದೇಶವಾಗಿರುವುದು ಅತ್ಯಂತ ಸ್ಪಷ್ಟವಾಗಿದೆ. ಒಂದು ವೇಳೆ ಬಿಜೆಪಿ ಮತ್ತು ಕಾಂಗ್ರೆಸ್ ಗಳೆರಡಕ್ಕೆ ಸರಕಾರ ರಚಿಸಲು ಸಾಧ್ಯವಾಗದಿದ್ದರೆ, ತೆಲಂಗಾಣದಲ್ಲಿ ಹೆಚ್ಚಿನ ಸೀಟುಗಳನ್ನು ಗೆಲ್ಲಲು ಕೆಸಿಆರ್ ಅವರಿಗೆ ಸಾಧ್ಯವಾದರೆ, ಪ್ರಧಾನಿ ಪಟ್ಟದ ಕನಸು ನನಸಾಗುವ ಸಾಧ್ಯತೆ ಇದೆ ಎಂಬುದನ್ನೂ ಮನಗಂಡಿದ್ದಾರೆ. ಇದೇ ಕಾರಣಕ್ಕೆ ಈ ಕಸರತ್ತು ಎಂದು ಹೇಳಲಾಗುತ್ತಿದೆ.