ಕನ್ಯಾಕುಮಾರಿ ಸಂಸದ ವಸಂತಕುಮಾರ್ ಕೋವಿಡ್ನಿಂದ ಸಾವು
ಚೆನ್ನೈ, ಆಗಸ್ಟ್ 28: ತಮಿಳುನಾಡು ಕಾಂಗ್ರೆಸ್ ಸಮಿತಿ ಕಾರ್ಯಾಧ್ಯಕ್ಷ ಮತ್ತು ಕನ್ಯಾಕುಮಾರಿ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಸಂಸದ ಎಚ್. ವಸಂತಕುಮಾರ್ (70) ಕೊರೊನಾ ವೈರಸ್ ಸೋಂಕಿನಿಂದಾಗಿ ಶುಕ್ರವಾರ ಸಂಜೆ ಮೃತಪಟ್ಟರು.
Recommended Video
ಅವರು ಚೆನ್ನೈನ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆಗಸ್ಟ್ 10ರಂದು ವಂಸತ್ ಕುಮಾರ್ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಬಳಿಕ ಅವರ ದೇಹದ ಸ್ಥಿತಿ ತೀವ್ರ ಹದಗೆಟ್ಟಿದ್ದರಿಂದ ಅವರನ್ನು ಇಸಿಎಂಒ ಮತ್ತು ವೆಂಟಿಲೇಟರ್ನಲ್ಲಿ ಇರಿಸಲಾಗಿತ್ತು. ಅವರ ಪತ್ನಿ ಕೂಡ ಕೋವಿಡ್ 19 ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಅವರ ಮಗ ವಿಜಯ್ ವಸಂತ್ ತಮಿಳು ಚಿತ್ರರಂಗದ ನಟ.
ಮಾಜಿ ಸಚಿವ ಎಚ್ಡಿ ರೇವಣ್ಣಗೆ ಕೊರೊನಾ ಸೋಂಕು ದೃಢ
ತಮಿಳುನಾಡು ಕಾಂಗ್ರೆಸ್ ಸಮಿತಿಯ ಮಾಜಿ ಅಧ್ಯಕ್ಷ ಕುಮಾರಿ ಅನಂತನ್ ಅವರ ಕಿರಿಯ ಸಹೋದರರಾಗಿದ್ದ ವಸಂತಕುಮಾರ್, ಆರಂಭದಲ್ಲಿ ಉದ್ಯಮ ಕ್ಷೇತ್ರದಲ್ಲಿದ್ದರು. ತಮಿಳುನಾಡಿನ ಅತ್ಯಂತ ದೊಡ್ಡ ಚಿಲ್ಲರೆ ಮಾರಾಟ ಸಮೂಹ ವಸಂತ್ ಆಂಡ್ ಕೋ ಅನ್ನು 1978ರಲ್ಲಿ ಪ್ರಾರಂಭಿಸಿದ್ದರು. ಈ ಸಂಸ್ಥೆ ತಮಿಳುನಾಡು ಮಾತ್ರವಲ್ಲದೆ ಕೇರಳ ಹಾಗೂ ಕರ್ನಾಟಕ ಸೇರಿದಂತೆ 70 ಶಾಖೆಗಳನ್ನು ಹೊಂದಿದೆ.
ತೆಲಂಗಾಣದ ರಾಜ್ಯಪಾಲ ತಮಿಳ್ ಸಾಯಿ ಸೌಂದರ್ ರಾಜನ್ ಇವರ ಸೋದರ ಸಂಬಂಧಿಯಾಗಿದ್ದಾರೆ. 1950ರ ಏಪ್ರಿಲ್ 14ರಂದು ಕನ್ಯಾಕುಮಾರಿಯ ಅಗದೀಶ್ವರಮ್ನಲ್ಲಿ ಜನಿಸಿದ ವಸಂತಕುಮಾರ್, ಡಿಎಂಕೆ ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರವಿದ್ದಾಗ 2006ರಲ್ಲಿ ನಂಗುನೇರಿ ವಿಧಾನಸಭೆ ಕ್ಷೇತ್ರದಿಂದ ತಮಿಳುನಾಡು ವಿಧಾನಸಭೆಗೆ ಮೊದಲ ಬಾರಿ ಆಯ್ಕೆಯಾಗಿದ್ದರು. 2011ರ ವಿಧಾನಸಭೆ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದರು.
ಗಮನಿಸಿ: ಟಿಬಿ-ಕೋವಿಡ್ ಪರೀಕ್ಷೆ ಕುರಿತು ಆರೋಗ್ಯ ಸಚಿವಾಲಯದ ಮಹತ್ವದ ಸೂಚನೆ
2014ರ ಲೋಕಸಭೆ ಚುನಾವಣೆಯಲ್ಲಿ ಡಿಎಂಕೆಯಿಂದ ಬೇರ್ಪಟ್ಟು ಪ್ರತ್ಯೇಕವಾಗಿ ಕಾಂಗ್ರೆಸ್ ಸ್ಪರ್ಧಿಸಿತ್ತು. ಆಗ ಕನ್ಯಾಕುಮಾರಿ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿಯ ಪೊನ್ ರಾಧಾಕೃಷ್ಣನ್ ಎದುರು ಸೋಲುಂಡಿದ್ದರು. 2016ರ ವಿಧಾನಸಭೆ ಚುನಾವಣೆಯಲ್ಲಿ ಡಿಎಂಕೆ ಮೈತ್ರಿಯೊಂದಿಗೆ ಕಾಂಗ್ರೆಸ್ನಿಂದ ಮತ್ತೆ ಸ್ಪರ್ಧಿಸಿ ನಂಗುನೆರಿ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಬಳಿಕ 2019ರ ಲೋಕಸಭೆ ಚುನಾವಣೆಯಲ್ಲಿ ಕನ್ಯಾಕುಮಾರಿ ಕ್ಷೇತ್ರದಲ್ಲಿ ಪೊನ್ ರಾಧಾಕೃಷ್ಣನ್ ಅವರನ್ನು ಸೋಲಿಸಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ವಸಂತಕುಮಾರ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ. ವಸಂತಕುಮಾರ್ ಅವರ ಉದ್ಯಮ ಮತ್ತು ಸಾಮಾಜಿಕ ಸೇವೆಯ ಪ್ರಯತ್ನಗಳು ಗಮನಾರ್ಹ. ಅವರೊಂದಿಗಿನ ನನ್ನ ಮಾತುಕತೆಯಲ್ಲಿ ಅವರು ತಮಿಳುನಾಡಿನ ಅಭಿವೃದ್ಧಿ ಬಗ್ಗೆಯೇ ತಮ್ಮ ಒಲವು ತೋರಿಸುತ್ತಿದ್ದರು ಎಂದು ಪ್ರಧಾನಿ ಸ್ಮರಿಸಿದ್ದಾರೆ.