ಕಂಚಿಶ್ರೀಗಳಿಗೆ ಮೋದಿ ಸೇರಿದಂತೆ ಗಣ್ಯರ ಸಂತಾಪ ಸಂದೇಶ
ಚೆನ್ನೈ, ಫೆಬ್ರವರಿ 28: ಕಳೆದ ಎರಡು ತಿಂಗಳ ಹಿಂದೆ ಪಾರ್ಶ್ವವಾಯುವಿಗೆ ತುತ್ತಾಗಿದ್ದ ಕಂಚಿ ಶ್ರೀ ಜಯೇಂದ್ರ ಸರಸ್ವತಿ ಸ್ವಾಮೀಜಿ(82) ಚೆನ್ನೈನಲ್ಲಿ ಇಂದು(ಫೆ.28) ಇಹಲೋಕ ತ್ಯಜಿಸಿದರು.
ಅನಾರೋಗ್ಯದ ಹಿನ್ನೆಲೆಯಲ್ಲಿ ಫೆ.25 ರಂದು ಚೆನ್ನೈನ ಶ್ರೀ ರಾಮಚಂದ್ರ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಗೆ ದಾಖಲಾಗಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಕೊನೆಯುಸಿರೆಳೆದರು.
1994 ರಲ್ಲಿ ಕಂಚಿ ಕಾಮಕೋಟಿ ಪೀಠದ 69ನೇ ಜಗದ್ಗುರುಗಳಾಗಿ ಅವರು ಪೀಠಾರೋಹಣ ಮಾಡಿದ್ದರು. ಅವರ ದೇಹತ್ಯಾಗದ ನಂತರ ಶ್ರೀ ಶಂಕರ ವಿಜಯೇಂದ್ರ ಸರಸ್ವತಿಗಳು 70 ನೇ ಜಗದ್ಗುರುಗಳಾಗಿ ಪೀಠಾಲಂಕರಿಸಲಿದ್ದಾರೆ.
ಕಂಚಿ ಶ್ರೀಗಳ ಅಗಲಿಕೆಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ದೇಶದ ನಾನಾ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
|
ನರೇಂದ್ರ ಮೋದಿ
ಕಂಚಿ ಕಾಮಕೋಟಿ ಪೀಠದ ಜಗದ್ಗುರು ಪೂಜ್ಯ ಶ್ರೀ ಜಯೇಂದ್ರ ಸರಸ್ವತಿ ಶಂಕರಾಚಾರ್ಯ ಅವರ ಅಗಲಿಕೆಯಿಂದ ಬಹಳ ನೋವಾಗಿದೆ. ಅವರು ತಮ್ಮ ಅತ್ಯುನ್ನತ ಸೇವಾ ಕಾರ್ಯದಿಂದ ಎಂದಿಗೂ ನಮ್ಮೆಲ್ಲ ಹೃದಯದಲ್ಲಿ ನೆನಪಿನಲ್ಲುಳಿಯುತ್ತಾರೆ. ಓ ಶಾಂತಿ. ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
ಆರ್.ವಿ.ದೇಶಪಾಂಡೆ
"ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಮನುಕುಲದ ಸೇವೆಗೈದು ಮತ್ತು ಸಮಾಜವನ್ನು ಸರಿಯಾದ ದಿಕ್ಕಿನಲ್ಲಿ ಮುನ್ನಡೆಸಿ, ಇಂದು ದೇಹತ್ಯಾಗ ಮಾಡಿದ ಕಂಚಿ ಕಾಮಕೋಟಿ ಪೀಠದ ಶ್ರೀ ಜಯೇಂದ್ರ ಸರಸ್ವತಿಗಳ ನಿರ್ಗಮನದಿಂದ ಶೂನ್ಯಭಾವ ಸೃಷ್ಟಿಯಾಗಿದೆ. ಕಂಚಿಶ್ರೀಗಳು ತಮ್ಮ ನಿರಂತರ ಸೇವೆ ಮತ್ತು ತಪೋಬಲದ ಮೂಲಕ ಎಲ್ಲರಿಗೂ ದಾರಿದೀಪವಾಗಿದ್ದರು. ಪ್ರತೀ ಕ್ಷಣವೂ ದೀನದಲಿತರ ಒಳಿತಿನ ಬಗ್ಗೆ ಕಳಕಳಿಯಿಂದ ಯೋಚಿಸುತ್ತಿದ್ದ ಅವರು ಇಡೀ ದಕ್ಷಿಣ ಭಾರತದಲ್ಲಿ ಅಪಾರ ಭಕ್ತವೃಂದವನ್ನು ಹೊಂದಿದ್ದರು. ಶ್ರೀಗಳು ಭೌತಿಕವಾಗಿ ನಮ್ಮೊಂದಿಗಿಲ್ಲದಿದ್ದರೂ ಅವರು ನಡೆದ ಹಾದಿಯೇ ಸಮಾಜವನ್ನು ಮುನ್ನಡೆಸಲಿದೆ" ಎಂದು ಸಚಿವ ಆರ್ ವಿ ದೇಶಪಾಂಡೆ ಹೇಳಿದ್ದಾರೆ.
|
ವೆಂಕಯ್ಯ ನಾಯ್ಡು
ಮೋಕ್ಷ ಸಂಪಾದಿಸಿದ ಕಂಚಿ ಶ್ರೀಗಳಿಗೆ ನನ್ನ ಅನಂತ ಗೌರವಗಳು. ಅವರು ಮನುಕುಲಕ್ಕೆ ನೀಡಿದ ಕೊಡುಗೆ, ನಮಗೆ ಮತ್ತು ನಮ್ಮ ಮುಂದಿನ ಹಲವು ತಲೆಮಾರುಗಳಿಗೆ ಸ್ಫೂರ್ತಿ ಎಂದಿದ್ದಾರೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು.
|
ರವಿಶಂಕರ್ ಪ್ರಸಾದ್
ಶ್ರೀ ಜಯೇಂದ್ರ ಸರಸ್ವತಿ ಸ್ವಾಮೀಜಿಗಳಿಗೆ ನನ್ನ ಪ್ರಣಾಮಗಳು. ಅಧ್ಯಾತ್ಮ, ಹಿಂದು ಸಂಸ್ಕೃತಿಯನ್ನು ಶ್ರೀಮಂತಗೊಳಿಸುವಲ್ಲಿ ಅವರ ಕೊಡುಗೆ ಅಪಾರ. ಬಡವರಿಗಾಗಿ ಅವರು ಕೈಗೊಂಡ ಸೇವಾ ಕಾರ್ಯಗಳು ಎಂದಿಗೂ ನೆನಪಿನಲ್ಲುಳಿಯುವಂಥವು ಎಂದಿದ್ದಾರೆ ಕೇಂದ್ರ ಸಚಿವ ರವಿ ಶಂಕರ್ ಪ್ರಸಾದ್.
ಕಂಚಿ ಕಾಮಕೋಟಿ ಪೀಠದ ಶ್ರೀ ಜಯೇಂದ್ರ ಸರಸ್ವತಿ ಸ್ವಾಮೀಜಿ ಅಸ್ತಂಗತ
ಶಂಕರ ರಾಮನ್ ಕೊಲೆ ಕೇಸ್ ಗೆ ರಿಪಬ್ಲಿಕ್ ಟಿವಿಯ ಹೊಸ ಟ್ವಿಸ್ಟ್?