ಡಿಎಂಕೆ ಮುಖವಾಣಿಗೆ 75: ವೇದಿಕೆಯಲ್ಲಿ ಕಮಲ್, ಪ್ರೇಕ್ಷಕರ ನಡುವೆ ರಜನಿ
ಚೆನ್ನೈ, ಆಗಸ್ಟ್ 10: ದ್ರಾವಿಡ ಮುನ್ನೇತ್ರ ಕಳಗಂ(ಡಿಎಂಕೆ)ನ ಮುಖವಾಣಿ ಮುರಸೋಳಿ ಪತ್ರಿಕೆಯ 75ನೇ ವಾರ್ಷಿಕೋತ್ಸವ ಸಮಾರಂಭ ಗುರುವಾರ ಸಂಜೆ ಚೆನ್ನೈನಲ್ಲಿ ಸಂಭ್ರಮದಿಂದ ಸಾಗಿದೆ.
ಸೂಪರ್ ಸ್ಟಾರ್ ರಜನಿ ಕಾಂತ್, ಯೂನಿವರ್ಸಲ್ ಸ್ಟಾರ್ ಕಮಲ್ ಹಾಸನ್ ಸೇರಿದಂತೆ ಅನೇಕ ಗಣ್ಯರು ಈ ಸಮಾರಂಭದಲ್ಲಿ ಉಪಸ್ಥಿತರಿದ್ದಾರೆ.
ಕಮಲ್ ಅವರು ವೇದಿಕೆ ಮೇಲೆ ಸ್ಟಾಲಿನ್ ಹಾಗೂ ಮಾರನ್ ಬ್ರದರ್ಸ್, ಸಾಹಿತಿ ವೈರಮುತ್ತು ಜತೆಗೆ ಕುಳಿತ್ತಿದ್ದರೆ, ರಜನಿ ಅವರು ಪ್ರೇಕ್ಷಕರ ಸಾಲಿನಲ್ಲಿ ಕೆಳಗಡೆ ಕುಳಿತ್ತಿದ್ದಾರೆ. ಬಿಸಿಸಿಐನ ಮಾಜಿ ಅಧ್ಯಕ್ಷ ಎನ್ ಶ್ರೀನಿವಾಸನ್, ನಟ ಶಿವಾಜಿ ಪ್ರಭು ಅವರು ರಜನಿ ಅವರ ಅಕ್ಕ ಪಕ್ಕದಲ್ಲಿ ಆಸೀನರಾಗಿದ್ದಾರೆ.
ಗಣ್ಯಾತಿಗಣ್ಯರು ಉಪಸ್ಥಿತರಿರುವ ಈ ಸಮಾರಂಭದಲ್ಲಿ ಕಮಲ್ ಹಾಸನ್ ಹಾಗೂ ರಜನಿಕಾಂತ್ ಅವರು ತಮ್ಮ ರಾಜಕೀಯ ಪ್ರವೇಶದ ಬಗ್ಗೆ ಏನಾದರೂ ಹೇಳಿಕೆ ನೀಡಬಹುದೇ? ತಮಿಳು ಸಂಸ್ಕೃತಿ, ಜನ, ಭಾಷೆ ಬಗ್ಗೆ ತಮ್ಮ ಕನಸನ್ನು ಹಂಚಕೊಳ್ಳಬಹುದೇ ಎಂಬ ಕುತೂಹಲ ಮನೆ ಮಾಡಿದೆ...
ಸಮಾರಂಭದಲ್ಲಿ ರಜಿನಿ
ಎರಡನೇ ಮಹಾಯುದ್ಧದ ಸಂದರ್ಭದಲ್ಲಿ 1942ರಲ್ಲಿ 18ರ ಹರೆಯ ಎಂ ಕರುಣಾನಿಧಿ ಅವರು ಚೇರನ್ ಎಂಬ ಹೆಸರಿನಲ್ಲಿ 'ಮುರುಸೋಳಿ' ಪತ್ರಿಕೆ ಆರಂಭಿಸಿದರು. ಸಣ್ಣ ಭಿತ್ತಿ ಪತ್ರವಾಗಿದ್ದ ಮುರುಸೋಳಿ ಈಗ ದಿನಪತ್ರಿಕೆಯಾಗಿ 75ನೇ ವಸಂತಕ್ಕೆ ಕಾಲಿರಿಸಿದೆ. ಚಿತ್ರದಲ್ಲಿ: ರಜನಿಕಾಂತ್
ಮುರಸೋಳಿ ಬೆಳವಣಿಗೆ
ಮುರಸೋಳಿ ತನ್ನ ಬೆಳವಣಿಗೆಯ ಕಾಲದಲ್ಲಿ ಪೆರಿಯಾರ್ ಇ.ವಿ ರಾಮಸ್ವಾಮಿ ಅವರ ದ್ರಾವಿಡ ಚಳವಳಿ, ತುರ್ತು ಪರಿಸ್ಥಿತಿ ಖಂಡಿಸಿ ಇಂದಿರಾ ಗಾಂಧಿಯನ್ನು ಹಿಟ್ಲರ್ ಗೆ ಹೋಲಿಸಿದ್ದು, ಬ್ರಾಹ್ಮಣ ವಿರೋಧಿ ಲೇಖನ, ತಮಿಳು ಸಂಸ್ಕೃತಿ ಪರ ಚಿಂತನೆ, ಡಿಎಂಕೆ ಉದಯ, ಸಿ.ಎನ್ ಅಣ್ಣಾದೊರೈ, ಕಲೈನರ್ ಕರುಣಾನಿಧಿಯಂಥ ನಾಯಕರ ಬೆಳವಣಿಗೆಯನ್ನು ಕಂಡಿದೆ.
ಕರುಣಾನಿಧಿ ಅವರ ಪತ್ರಿಕೆ
ಕರುಣಾನಿಧಿ ಅವರ ಊರು ತಿರುವರೂರ್ ನಿಂದ ಪ್ರಕಟಗೊಳ್ಳುವ ಮುರುಸೋಳಿ ಸದ್ಯ 60 ಸಾವಿರಕ್ಕೂ ಅಧಿಕ ಪ್ರಸಾರ(ಸರ್ಕ್ಯುಲೇಷನ್) ಹೊಂದಿದೆ. ಆನ್ ಲೈನ್ ವರ್ಷನ್ ಕೂಡಾ ಲಭ್ಯವಿದೆ.
93 ವರ್ಷ ವಯಸ್ಸಿನ ಕರುಣಾನಿಧಿ ಅವರ ವಯೋಸಹಜ ಅನಾರೋಗ್ಯದಿಂದಾಗಿ ಪತ್ರಿಕೆಯ ಜವಾಬ್ದಾರಿಯನ್ನು ಪುತ್ರ, ಪಕ್ಷದ ಕಾರ್ಯಕಾರಿ ಅಧ್ಯಕ್ಷ ಎಂಕೆ ಸ್ಟಾಲಿನ್ ಗೆ ವಹಿಸಿದ್ದಾರೆ. 'ನಿಮ್ಮಲ್ಲಿ ನಾನು ಒಬ್ಬ' ಎಂಬ ಶೀರ್ಷಿಕೆಯಡಿಯಲ್ಲಿ ಸಂಪಾದಕೀಯ ಪ್ರಕಟವಾಗುತ್ತಿದೆ.
|
ಡಿಎಂಕೆ ಸಮಾರಂಭದಲ್ಲಿ
ಡಿಎಂಕೆ ಸಮಾರಂಭದಲ್ಲಿ ಕಮಲ್ ಹಾಗೂ ರಜನಿಕಾಂತ್ ಅವರು ಒಟ್ಟಿಗೆ ಕಾಣಿಸಿಕೊಂಡಿರುವುದು ಹಲವರ ಹುಬ್ಬೇರಿಸಿದೆ. ಇತ್ತೀಚೆಗೆ ಕಮಲ್ ಅವರು ರಾಜಕೀಯದ ಬಗ್ಗೆ ಟ್ವೀಟ್ ಮಾಡಿದ್ದು, ರಜನಿ ಅವರ ರಾಜಕೀಯ ಪ್ರವೇಶಕ್ಕೆ ವೇದಿಕೆ ಸಿದ್ಧವಾಗುತ್ತಿರುವುದು ಎಲ್ಲವೂ ಕುತೂಹಲವನ್ನು ಹೆಚ್ಚಿಸಿದೆ.