ಶಸ್ತ್ರಚಿಕಿತ್ಸೆಗೆ ಚುನಾವಣಾ ಪ್ರಚಾರದಿಂದ ಬಿಡುವು ಪಡೆದ ಕಮಲ ಹಾಸನ್
ಚೆನ್ನೈ, ಜನವರಿ 18: ವಿಧಾನಸಭೆ ಚುನಾವಣೆಗೆ ತಮಿಳುನಾಡು ಸಿದ್ಧವಾಗುತ್ತಿದ್ದು, ಚುನಾವಣಾ ಪ್ರಚಾರ ಕಾರ್ಯದಿಂದ ಸ್ವಲ್ಪ ದಿನಗಳ ಕಾಲ ಬಿಡುವು ತೆಗೆದುಕೊಳ್ಳುವುದಾಗಿ ನಟ, ಮಕ್ಕಳ ನೀದಿಮಯ್ಯಂ ಮುಖಂಡ ಕಮಲ್ ಹಾಸನ್ ತಿಳಿಸಿದ್ದಾರೆ.
ಕಾಲಿನ ಶಸ್ತ್ರಚಿಕಿತ್ಸೆ ಕಾರಣ ಕೆಲವು ದಿನಗಳ ಕಾಲ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದು, ತಂತ್ರಜ್ಞಾನದ ಸಹಾಯದಿಂದ ಚುನಾವಣಾ ಕೆಲಸಗಳನ್ನು ನಿರ್ವಹಿಸುತ್ತೇನೆ. ತಮಿಳುನಾಡಿನ ಬದಲಾವಣೆಗೆ ಏನೆಲ್ಲಾ ಬೇಕಿದೆಯೋ ಅದರ ಕುರಿತು ಚಿಂತನೆ ಮಾಡುತ್ತೇನೆ ಎಂದು ಸೋಮವಾರ ಟ್ವಿಟ್ಟರ್ ನಲ್ಲಿ ಘೋಷಣೆ ಮಾಡಿದ್ದಾರೆ.
ತಮಿಳುನಾಡು ವಿಧಾನಸಭೆ ಚುನಾವಣೆ 2021; ಕಮಲ ಹಾಸನ್ ಪಕ್ಷದಿಂದ "ಉದ್ಯಮಕೆ ಕಾರ್ಯಸೂಚಿ" ಬಿಡುಗಡೆ
"ಹದಿನೈದು ದಿನಗಳ ಅವಧಿಯಲ್ಲಿ ರಾಜ್ಯದಲ್ಲಿ ಸುಮಾರು ಐದು ಸಾವಿರ ಕಿಲೋಮೀಟರ್ ಗಳಷ್ಟು ಪ್ರಯಾಣ ಮಾಡಿ ಜನರನ್ನು ಭೇಟಿ ಮಾಡಿದ್ದೇನೆ. ಇಲ್ಲಿನ ಜನರು ಬದಲಾವಣೆ ಬಯಸುತ್ತಿದ್ದಾರೆ ಎಂಬುದೇ ಈ ಸಮಯದಲ್ಲಿ ನನಗೆ ತೀವ್ರವಾಗಿ ಅನಿಸಿದ್ದು. ಜನರನ್ನು ಭೇಟಿಯಾಗಬೇಕೆಂಬ ಹಂಬಲ ನನ್ನ ವೈಯಕ್ತಿಕ ಆರೋಗ್ಯವನ್ನು ಸ್ವಲ್ಪ ಸಮಯ ಕಡೆಗಣಿಸುವಂತೆ ಮಾಡಿತು" ಎಂದು ಹೇಳಿದ್ದಾರೆ.
ಕೆಲವು ವರ್ಷಗಳ ಹಿಂದೆ ಸಂಭವಿಸಿದ ಅಪಘಾತದಲ್ಲಿ ಕಾಲಿಗೆ ಗಾಯವಾಗಿದ್ದು, ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಇದೀಗ ಅದರ ಮುಂದುವರಿದ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬೇಕಿದೆ. ಶಸ್ತ್ರಚಿಕಿತ್ಸೆ ಸಲುವಾಗಿ ವೈದ್ಯರು ವಿರಾಮ ತೆಗೆದುಕೊಳ್ಳಲು ಸೂಚಿಸಿದ್ದಾರೆ. ಕೆಲವೇ ದಿನಗಳಲ್ಲಿ ಮರಳಿ ಚುನಾವಣಾ ಕಾರ್ಯದಲ್ಲಿ ಭಾಗವಹಿಸುತ್ತೇನೆ ಎಂದು ತಿಳಿಸಿದ್ದಾರೆ.
ತಮಿಳುನಾಡಿನ 2019ರ ಲೋಕಸಭಾ ಚುನಾವಣೆಯಲ್ಲಿ ಕಮಲ ಹಾಸನ್ ಅವರ ಮಕ್ಕಳ ನೀದಿಮಯ್ಯಂ ಪಕ್ಷ ಸ್ಪರ್ಧಿಸಿದ್ದು, 4,20,83,544 ರಲ್ಲಿ ಪಕ್ಷವು 15,73,620 ಮತಗಳನ್ನು ಪಡೆದುಕೊಂಡಿತ್ತು.