ಮಹಾಭಾರತ ವಿವಾದ: ನಟ ಕಮಲ್ ಹಾಸನ್ಗೆ ಸಮನ್ಸ್
ಇತ್ತೀಚೆಗೆ ವಾಹಿನಿಯೊಂದರ ಸಂದರ್ಶನದಲ್ಲಿ ಮಹಾಭಾರತದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆಂದು ನಟ ಕಮಲ್ ಹಾಸನ್ ವಿರುದ್ಧ ಹಿಂದೂ ಮಕ್ಕಳ್ ಕಟ್ಚಿ ಸಂಘಟನೆ ದೂರಿನ ಮೇರೆಗೆ ಶುಕ್ರವಾರ ವಲ್ಲಿಯೂರ್ ಕೋರ್ಟ್ ಸಮನ್ಸ್ ಜಾರಿ ಮಾಡಿದೆ.
ಚೆನ್ನೈ, ಏಪ್ರಿಲ್ 21 : ಮಹಾಭಾರತದ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎನ್ನಲಾದ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಕಮಲ್ ಹಾಸನ್ ಅವರ ವಿರುದ್ಧ ವಲ್ಲಿಯೂರ್ ಕೋರ್ಟ್ ಶುಕ್ರವಾರ ಸಮನ್ಸ್ ಜಾರಿ ಮಾಡಿದೆ.
ಕಮಲ್ ಹಾಸನ್ ಅವರು ಮೇ 5ರಂದು ವಿಚಾರಣೆಗೆ ಹಾಜರಾಗುವಂತೆ ನ್ಯಾಯಾಲಯ ಸೂಚಿಸಿದೆ. ಮಾರ್ಚ್ 12ರಂದು ಖಾಸಗಿ ವಾಹಿನಿಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಕಮಲ್, ಮಹಾಭಾರತದಲ್ಲಿ ಹೆಣ್ಣನ್ನು ಕೀಳಾಗಿ ನಡೆಸಿಕೊಳ್ಳಲಾಗಿದೆ. ಜೂಜಾಟದಲ್ಲಿ ದಾಳದಂತೆ ಬಳಸಿಕೊಳ್ಳಲಾಗಿದೆ. ಇಂಥ ಕೀಳುಕಥೆಗಳನ್ನು ನಾವು ಪಠ್ಯದಲ್ಲಿ ಮಕ್ಕಳಿಗೆ ಹೇಳಿಕೊಡಬೇಕಾಗಿದೆ ಎಂದಿದ್ದರು.[ಮಹಾಭಾರತ ವಿರುದ್ಧ ಹೇಳಿಕೆ, ಕಮಲ್ ವಿರುದ್ಧ ಪಿಐಎಲ್]
ಮಹಾಭಾರತದ ಕುರಿತು ಅವಹೇಳನಕಾರಿಯಾಗಿ ಹೇಳಿಕೆ ನೀಡಿರುವ ಕಮಲ್ ಹಾಸನ್ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ಹಿಂದೂ ಮಕ್ಕಳ್ ಕಟ್ಚಿ ಸಂಘಟನೆಯು ಚೆನ್ನೈ ಪೊಲೀಸರಿಗೆ ದೂರು ನೀಡಿತ್ತು.
ಇದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿ ಜಿಲ್ಲೆ ಅರೆಮಲ್ಲಾಪುರದ ಶರಣಬಸವೇಶ್ವರ ದೇವಸ್ಥಾನದ ಪೀಠಾಧಿಪತಿ ಪ್ರಣವಾನಂದ ಸ್ವಾಮೀಜಿ ಅವರು ಇತ್ತೀಚೆಗೆ ಕಮಲ್ ಹಾಸನ್ ವಿರುದ್ಧ ಬೆಂಗಳೂರಿನ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಣವಾನಂದ ಸ್ವಾಮೀಜಿ ದೂರು ದಾಖಲಿಸಿರುವುದನ್ನು ಇಲ್ಲಿ ಸ್ಮರಿಸಬಹುದು.