ರಾಜಕೀಯದಲ್ಲಿ ರಜನಿ ಜತೆಗೆ ಕೆಲಸ ಮಾಡಲು ಖುಷಿ: ಕಮಲ್
Recommended Video
ಚೆನ್ನೈ, ಸೆಪ್ಟೆಂಬರ್ 15: ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನೀಕಾಂತ್ ಅವರು ರಾಜಕೀಯಕ್ಕೆ ಬಂದರೆ, ಅವರ ಜತೆಗೆ ಸಮಾಜ ಸೇವೆ ಮಾಡಲು ನಾನು ಸಿದ್ಧ ಎಂದು ನಟ ಕಮಲ ಹಾಸನ್ ತಿಳಿಸಿದ್ದಾರೆ.
ಚೆನ್ನೈನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ನನಗೂ ರಜನೀ ಅವರಿಗೆ ಚಿತ್ರರಂಗದಲ್ಲಿ ಪೈಪೋಟಿಯಿದೆ ನಿಜ. ಆದರೆ, ಸಮಯ ಬಂದರೆ ನಮ್ಮ ನಡುವಿನ ವಿಚಾರಗಳನ್ನು ನಾವು ಚರ್ಚಿಸಲು ನಾವು ಹಿಂಜರಿಯೆವು'' ಎಂದು ಅವರು ತಿಳಿಸಿದರು.
''ರಜನೀಕಾಂತ್ ಅವರು ರಾಜಕೀಯಕ್ಕೆ ಬರುವುದು ಖಚಿತವಾದರೆ ನನ್ನಲ್ಲೂ ರಾಜಕೀಯಕ್ಕೆ ಬರುವ ಉತ್ಸಾಹ ಹೆಚ್ಚುತ್ತದೆ. ಆದರೆ, ಚಿತ್ರರಂಗದಲ್ಲಿರುವ ಪೈಪೋಟಿ ರಾಜಕೀಯ ರಂಗದಲ್ಲಿ ಇರುವುದಿಲ್ಲ. ನಾವಿಬ್ಬರೂ ಒಟ್ಟಿಗೇ ಸಮಾಜ ಸೇವೆಗೆ ನಿಲ್ಲುತ್ತೇವೆ'' ಎಂದು ಅವರು ತಿಳಿಸಿದ್ದಾರೆ.
ಕಮಲ ಹಾಸನ್ ಅವರು ಇತ್ತೀಚೆಗೆ ಸಂದರ್ಶನವೊಂದರಲ್ಲಿ ತಮ್ಮ ರಾಜಕೀಯ ಪ್ರವೇಶದ ಬಗ್ಗೆ ಹೇಳಿಕೊಂಡಿದ್ದರು. ಕಳೆದ ತಿಂಗಳು ನಡೆದಿದ್ದ ಡಿಎಂಕೆಯ ಬೃಹತ್ ಸಮಾರಂಭವೊಂದರಲ್ಲಿ ಅವರು ವೇದಿಕೆಯಲ್ಲಿ ಕೂತಿದ್ದು ಹಾಗೂ ಇದೇ ತಿಂಗಳ ಮೊದಲ ವಾರದಲ್ಲಿ ಅವರು ತಿರುವನಂತಪುರದಲ್ಲಿ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮನೆಯಲ್ಲಿ ಆತಿಥ್ಯ ಸ್ವೀಕರಿಸಿದ್ದು ಅವರು ರಾಜಕೀಯಕ್ಕೆ ಧುಮುಕುವ ಊಹಾಪೋಹಗಳಿಗೆ ರೆಕ್ಕೆ ಕಟ್ಟಿದ್ದವು.