ಕೊರೊನಾ: ಲಾಕ್ಡೌನ್ ನಿರ್ಧಾರ ಟೀಕಿಸಿದ ಕಮಲ್ ಹಾಸನ್
ಚೆನ್ನೈ, ಏಪ್ರಿಲ್ 6: ಈ ಮೊದಲು ನೋಟು ಅಮಾನ್ಯೀಕರಣ ಮಾಡಿ ಎಲ್ಲರ ಕಾಲು ಕಟ್ಟಿಹಾಕಿದಂತಾಗಿತ್ತು. ಇದೀಗ ಲಾಕ್ಡೌನ್ ಮಾಡಿ ಅದರದ್ದೇ ಪುನರಾವರ್ತನೆಯಾದಂತೆ ಅನಿಸುತ್ತಿದೆ ಎಂದು ನಟ, ರಾಜಕಾರಣಿ ಕಮಲ್ ಹಾಸನ್ ಟೀಕಿಸಿದ್ದಾರೆ.
ಮಕ್ಕಳ್ ನಿಧಿ ಮೈಯಂ ಪಕ್ಷದ ಸ್ಥಾಪಕರು ಆಗಿರುವ ಕಮಲ್ ಹಾಸನ್, ಪ್ರಧಾನಿ ನರೇಂದ್ರ ಮೋದಿಗೆ ಅವರಿಗೆ ಬಹಿರಂಗ ಪತ್ರ ಬರೆದಿದ್ದು, ನೋಟ್ ಅಮಾನ್ಯೀಕರಣದ ತಪ್ಪನ್ನು ಪುನರಾವರ್ತನೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಕೋವಿಡ್-19 ಸಾಂಕ್ರಾಮಿಕ ಕಾಯಿಲೆ ಹರಡದಂತೆ ತೆಡೆಗಟ್ಟುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ 21 ದಿನಗಳ ಕಾಲ ದೇಶಾದ್ಯಂತ ಹೇರಲಾದ ನಿರ್ಬಂಧ ಅವರ ತಪ್ಪು ನಿರ್ಧಾರಗಳಲ್ಲಿ ಒಂದಾಗಿದೆ ಎಂದು ನಟ, ರಾಜಕಾರಣಿ ಕಮಲ್ ಹಾಸನ್ ಟೀಕಿಸಿದ್ದಾರೆ.
ನೋಟು ಅಮಾನ್ಯೀಕರಣದ ತಪ್ಪಿನ ಪುನರಾವರ್ತನೆಯಾಗುತ್ತಿದೆ ಎಂಬುದೇ ನನ್ನ ಆತಂಕಕ್ಕೆ ಕಾರಣವಾಗಿದೆ. ನೋಟು ಅಮಾನ್ಯೀಕರಣದಿಂದ ಬಡವರ ಸಣ್ಣ ಉಳಿತಾಯ ಹಾಗೂ ಜೀವನೋಪಾಯದ ಮೇಲೆ ಕೆಟ್ಟ ಪರಿಣಾಮ ಬೀರಿದಂತೆ ಲಾಕ್ ಡೌನ್ ಕೂಡಾ ಅವರ ಜೀವನದ ಮೇಲೆ ಮಾರಕ ಪರಿಣಾಮ ಬೀರುತ್ತಿದ್ದು, ನಿಮ್ಮನ್ನು ಹೊರತುಪಡಿಸಿ ಬಡವರಿಗೆ ಯಾರು ಕಾಣಿಸಲ್ಲ ಸರ್ ಎಂದು ಕಮಲ್ ಹಾಸನ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಜವಾಬ್ದಾರಿಯುತ ದೇಶದ ನಾಗರಿಕನಾಗಿ ಮಾರ್ಚ್ 23 ರಂದು ಬರೆದ ಮೊದಲ ಪತ್ರದಲ್ಲಿ ಸಮಾಜದ ದೀನ ದಲಿತರು, ದುರ್ಬಲರು ಮತ್ತು ಅವಲಂಬಿತರ ಬಗ್ಗೆಗಿನ ದೂರದೃಷ್ಟಿಯನ್ನು ಕಳೆದುಕೊಳ್ಳದಂತೆ ಕೋರಲಾಗಿತ್ತು.
ಮಾರನೇ ದಿನವೇ ನೋಟು ಅಮಾನ್ಯೀಕರಣದ ಶೈಲಿಯಲ್ಲಿ ದಿಢೀರನೆ ದೇಶಾದ್ಯಂತ ಲಾಕ್ ಡೌನ್ ಘೋಷಣೆ ಮಾಡಲಾಯಿತು.ಅಮಾನ್ಯೀಕರಣ ಘೋಷಣೆ ಮಾಡಿದಾಗಲೂ ನಿಮ್ಮ ಮೇಲೆ ನಂಬಿಕೆ ಇಟ್ಟಿದೆ. ಆದರೆ, ಅದು ತಪ್ಪು ಎಂಬುದನ್ನು ಸಮಯ ನಿರ್ಧರಿಸಿತು.ನೀವು ಕೂಡಾ ತಪ್ಪು ಮಾಡಿದ್ದೀರಿ ಎಂಬುದು ಸಮಯ ಸಾಕ್ಷಿಕರಿಸಿದೆ ಎಂದು ಪತ್ರದಲ್ಲಿ ಹೇಳಿದ್ದಾರೆ.
ನಿಮ್ಮ ಸುತ್ತಮುತ್ತಲಿನವರು ಬಾಲ್ಕನಿಗಳಲ್ಲಿ ನಿಂತು ದೀಪಗಳನ್ನು ಬೆಳಗಿಸುತ್ತಿದ್ದರೆ ಬಡವರು ಮುಂದಿನ ಊಟಕ್ಕಾಗಿ ರೊಟ್ಟಿ ತಯಾರಿಸಲು ಸಾಕಾಗುವಷ್ಟು ತೈಲವನ್ನು ಸಂಗ್ರಹಿಸಲು ಹೆಣಗಾಡುತ್ತಿದ್ದಾರೆ ಎಂದು ದೂರಿದ್ದಾರೆ.