ತಮಿಳುನಾಡು: ಕುತೂಹಲ ಮೂಡಿಸಿದ ಕಮಲ ಹಾಸನ್-ರಜನಿಕಾಂತ್ ಭೇಟಿ
ಚೆನ್ನೈ, ಪೆಬ್ರವರಿ 20: ನಟ ಹಾಗೂ ಮಕ್ಕಳ್ ನೀದಿ ಮೈಯಮ್ ಪಕ್ಷದ ಸಂಸ್ಥಾಪಕ ಕಮಲ್ ಹಾಸನ್ ಅವರು, ಸಹೋದ್ಯೋಗಿ ರಜನಿಕಾಂತ್ ಅವರನ್ನು ಶನಿವಾರ ಭೇಟಿ ಮಾಡಿದರು. ತಾವು ರಾಜಕೀಯ ಪ್ರವೇಶಿಸುವುದಿಲ್ಲ ಎಂದು ರಜನಿಕಾಂತ್ ಹೇಳಿಕೆ ನೀಡಿದ ಬಳಿಕ ಇದು ಮೊದಲ ಭೇಟಿಯಾಗಿದೆ.
2021ರ ತಮಿಳುನಾಡುವ ವಿಧಾನಸಭೆ ಚುನಾವಣೆಗೆ ಕಮಲ ಹಾಸನ್ ವ್ಯಾಪಕ ಪ್ರಚಾರದಲ್ಲಿ ತೊಡಗಿದ್ದು, ಅದರ ನಡುವೆ ಈ ಭೇಟಿ ನಡೆದಿದೆ. ಆದರೆ ಇಬ್ಬರೂ ಗಣ್ಯರು ರಾಜಕೀಯದ ಕುರಿತು ಚರ್ಚೆ ನಡೆಸಲಿಲ್ಲ ಎಂದು ವರದಿಯಾಗಿದೆ.
'ರಾಜಕೀಯಕ್ಕೆ ಎಂದಿಗೂ ಬರುವುದೇ ಇಲ್ಲ ಎಂದು ರಜನಿಕಾಂತ್ ಹೇಳಿಲ್ಲ'
ಜನವರಿ ಆರಂಭದಲ್ಲಿ ತಮ್ಮ ರಾಜಕೀಯ ಪಕ್ಷ ಸ್ಥಾಪಿಸುವುದಾಗಿ ರಜನಿಕಾಂತ್ ಮೊದಲು ಪ್ರಕಟಿಸಿದ್ದರು. ಆದರೆ ಡಿಸೆಂಬರ್ನಲ್ಲಿ ಅನಾರೋಗ್ಯಕ್ಕೆ ತುತ್ತಾದ ಹಿನ್ನೆಲೆಯಲ್ಲಿ ವೈದ್ಯರ ಸಲಹೆಯಂತೆ ರಾಜಕೀಯದಿಂದ ದೂರ ಉಳಿಯಲು ನಿರ್ಧರಿಸಿದರು. ಹೀಗಾಗಿ ತಮಿಳುನಾಡಿನಲ್ಲಿ ತೀವ್ರ ಸಂಚಲನ ಮೂಡಿಸಿದ್ದ ರಜನಿಕಾಂತ್ ರಾಜಕೀಯ ನಡೆ ತಣ್ಣಗಾಗಿತ್ತು.
ಇನ್ನೊಂದೆಡೆ ಕಮಲ ಹಾಸನ್ ಈ ಬಾರಿಯ ಚುನಾವಣೆಯಲ್ಲಿ ತೃತಿಯ ರಂಗವಾಗಿ ಹೊರಹೊಮ್ಮುವ ಪ್ರಯತ್ನ ನಡೆಸಿದೆ. 2018ರಲ್ಲಿ ರಾಜಕೀಯ ಪಕ್ಷ ಸ್ಥಾಪಿಸಿದ್ದ ಕಮಲ ಹಾಸನ್, ವ್ಯಾಪಕ ಪ್ರಚಾರ ನಡೆಸುತ್ತಿದ್ದಾರೆ. ತಾವು ರಜನಿಕಾಂತ್ ಬೆಂಬಲ ಪಡೆಯುವುದಾಗಿ ಅವರು ಇತ್ತೀಚೆಗೆ ಪ್ರಕಟಿಸಿದ್ದರು.