ರಾಜಕೀಯ ಯಾತ್ರೆಗೂ ಮುನ್ನ ರಜನಿ ಭೇಟಿಯಾದ ಕಮಲ್
ಚೆನ್ನೈ, ಫೆಬ್ರವರಿ 18: ನಟ ಕಮಲ್ ಹಾಸನ್ ಅವರು ತಮ್ಮ ರಾಜಕೀಯ ಪ್ರವಾಸಕ್ಕೂ ಮುನ್ನ ತಮ್ಮ ಗೆಳೆಯ ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ಭೇಟಿ ಮಾಡಿದ್ದಾರೆ. ಈ ಮೂಲಕ ಮತ್ತೊಮ್ಮೆ ಇಬ್ಬರ ನಡುವೆ ರಾಜಕೀಯ ಮೈತ್ರಿ ಏರ್ಪಡುವ ಬಗ್ಗೆ ಗುಸು ಗುಸು ಆರಂಭವಾಗಿದೆ.
'ನಾವಿಬ್ಬರೂ ರಾಜಕೀಯವಾಗಿ ಒಟ್ಟಿಗೆ ಪ್ರಯಾಣ ಆರಂಭಿಸುವ ಬಗ್ಗೆ ಕಾಲವೇ ಉತ್ತರಿಸಲಿದೆ. ನಾನು ಇಂದು ನನ್ನ ರಾಜಕೀಯ ಪ್ರವಾಸದ ಬಗ್ಗೆ ರಜನಿಕಾಂತ್ ಅವರಿಗೆ ಮಾಹಿತಿ ನೀಡಲು ಇಲ್ಲಿಗೆ ಬಂದಿದ್ದೆ. ರಜನಿ ಅವರು ನನ್ನ ಪ್ರವಾಸಕ್ಕೆ ಶುಭ ಹಾರೈಸಿದರು' ಎಂದು ಕಮಲ್ ಹಾಸನ್ ಅವರು ಪೋಯಸ್ ಗಾರ್ಡನ್ ನಲ್ಲಿ ಹೇಳಿದರು.
ಕಮಲ್ ಭೇಟಿ ಬಗ್ಗೆ ಪ್ರತಿಕ್ರಿಯಿಸಿದ ರಜನಿ, 'ಕಮಲ್ ಅವರು ತಮಿಳುನಾಡಿನ ಜನತೆಗೆ ಒಳ್ಳೆಯದನ್ನು ಮಾಡಲು ಮುಂದಾಗಿದ್ದಾರೆ. ಅವರಿಗೆ ಯಶಸ್ಸು ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ರಾಜಕೀಯದಿಂದ ದುಡ್ಡು ಅಥವಾ ಹೆಸರು ಮಾಡಲು ಕಮಲ್ ಇಚ್ಛಿಸಿಲ್ಲ' ಎಂದರು.
ಕಳೆದ ವಾರ ಹಾರ್ವಡ್ ವಿಶ್ವ ವಿದ್ಯಾಲಯದ ಭಾಷಣ ವೇಳೆ ತಮಿಳುನಾಡಿನ ರಾಜಕೀಯ ಹಾಗೂ ರಜನಿಕಾಂತ್ ಅವರ ಉದ್ದೇಶಿತ ಪಕ್ಷದ ಬಗ್ಗೆ ಮಾತನಾಡುತ್ತಾ, ರಜನಿ ಅವರ ಪಕ್ಷದ ಬಣ್ಣ ಕೇಸರಿಯಲ್ಲ ಎಂದುಕೊಂಡಿದ್ದೇನೆ. ಅದು ಕೇಸರಿಯಾದರೆ(ಬಿಜೆಪಿ ಜತೆ ಕೈಜೋಡಿಸಿದರೆ) ನನ್ನ ಜತೆ ಮೈತ್ರಿ ಸಾಧ್ಯವಿಲ್ಲ ಎಂದು ಕಮಲ್ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.
#TamilNadu: Earlier visuals of Kamal Hassan leaving from Rajinikanth's residence after their meeting, in Chennai. pic.twitter.com/EpvdDMS8rb
— ANI (@ANI) February 18, 2018