ಎಐಎಡಿಎಂಕೆ ವಿರುದ್ಧ ಲಂಚದ ಪಟ್ಟಿ ಬಿಡುಗಡೆ ಮಾಡಿದ ಕಮಲ್ ಹಾಸನ್
ಚೆನ್ನೈ, ಡಿಸೆಂಬರ್ 28: ಮುಂದಿನ ತಮಿಳುನಾಡು ವಿಧಾನಸಭೆ ಚುನಾವಣೆಗೆ ಪ್ರಚಾರ ಕಾರ್ಯದಲ್ಲಿರುವ ಮಕ್ಕಳ್ ನೀತಿ ಮಯ್ಯಂ (ಎಂಎನ್ಎಂ) ಮುಖ್ಯಸ್ಥ, ನಟ ಕಮಲ ಹಾಸನ್ ಎಐಎಡಿಎಂಕೆ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ್ದಾರೆ. ತಮಿಳುನಾಡು ಸರ್ಕಾರಿ ಕಚೇರಿಗಳಲ್ಲಿನ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಲಂಚದ ಪಟ್ಟಿ ಬಿಡುಗಡೆ ಮಾಡಿದ್ದಾರೆ.
ಸೋಮವಾರ ಆಡಳಿತ ಸರ್ಕಾರದ ವಿರುದ್ಧ ಭ್ರಷ್ಟಾಚಾರದ "ರೇಟ್ ಕಾರ್ಟ್" ಬಿಡುಗಡೆಗೊಳಿಸಿದ ಅವರು, ಸರ್ಕಾರಿ ಕಚೇರಿಯಲ್ಲಿ ವಿವಿಧ ಸೇವೆಗಳಿಗೆ ಸಂಗ್ರಹಿಸಿದ ಲಂಚದ ಮಾಹಿತಿಯನ್ನು ಓದಿ ಹೇಳಿದರು. ತಮಿಳುನಾಡಿನಲ್ಲಿ ಲಂಚ ತೆಗೆದುಕೊಂಡ ನಂತರವಷ್ಟೇ ಎಲ್ಲಾ ಕೆಲಸಗಳು ನಡೆಯುವುದು ಎಂದು ಆರೋಪಿಸಿದರು.
ಎಐಎಡಿಎಂಕೆ, ಡಿಎಂಕೆ ಜತೆ ಬಿಲ್ಕುಲ್ ಮೈತ್ರಿ ಇಲ್ಲ ಎಂದು ಸ್ಪಷ್ಟಪಡಿಸಿದ ಕಮಲ್ ಹಾಸನ್
ಜನನ ಪತ್ರದಿಂದ ಹಿಡಿದು ಮರಣ ಪತ್ರ ಪಡೆಯುವವರೆಗೂ ತಮಿಳುನಾಡಿನಲ್ಲಿ ಲಂಚ ನೀಡಬೇಕಾಗುತ್ತದೆ. ಯಾವುದೇ ಕೆಲಸ ಆಗಬೇಕೆಂದರೂ ಎಲ್ಲರಿಗೂ ಲಂಚ ಕೊಡುವ ಒತ್ತಾಯ ಕೇಳಿಬಂದಿದೆ ಎಂದರು. ಜನರೇ ಈ ವಿಷಯವನ್ನು ರಾಜ್ಯಪಾಲರವರೆಗೆ ಕೊಂಡೊಯ್ಯಬೇಕು ಎಂದು ಹೇಳಿದರು. ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ, ಸರ್ಕಾರದ ಪ್ರತಿ ಕಾರ್ಯವನ್ನೂ ಡಿಜಿಟಲೈಸ್ ಹಾಗೂ ಕಾಗದರಹಿತ ಮಾಡಿ ಈ ಪರಿಸ್ಥಿತಿಯನ್ನು ಬದಲಾಯಿಸುತ್ತೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭ, ರಜನಿಕಾಂತ್ ಅವರ ಪಕ್ಷದೊಂದಿಗೆ ಮೈತ್ರಿ ಸಾಧ್ಯತೆ ಕುರಿತು ಪ್ರತಿಕ್ರಿಯಿಸಿದ ಕಮಲ ಹಾಸನ್, "ರಾಜಕೀಯ ಪ್ರವೇಶಿಸಿದ ನಂತರವೂ ನಾವು ಸ್ನೇಹಿತರಾಗಿ ಮುಂದುವರೆಯುತ್ತೇವೆ" ಎಂದಿದ್ದಾರೆ. ದೆಹಲಿಯಲ್ಲಿ ರೈತರ ನಿರಂತರ ಪ್ರತಿಭಟನೆ ಕುರಿತೂ ಮಾತನಾಡಿ, ರೈತರನ್ನು ಗೌರವಿಸದ ಸರ್ಕಾರ ಬೀಳುವುದು ಖಚಿತ ಎಂದು ಹೇಳಿದರು.