ಪಟಾಕಿ ಸಿಡಿಸಿ ಕೊಲ್ಲಲು ಯತ್ನ: ಸಚಿವನ ಗಂಭೀರ ಆರೋಪ
ಚೆನ್ನೈ, ಮಾರ್ಚ್ 22: ತಮ್ಮ ಕಾರಿನ ಮುಂಭಾಗದಲ್ಲಿ ಪಟಾಕಿ ಸಿಡಿಸುವ ಮೂಲಕ ಎಎಂಎಂಕೆ ಕಾರ್ಯಕರ್ತರು ತಮ್ಮನ್ನು ಕೊಲೆ ಮಾಡಲು ಪ್ರಯತ್ನಿಸಿದ್ದಾರೆ ಎಂದು ತಮಿಳುನಾಡಿನ ಮಾಹಿತಿ ಮತ್ತು ಪ್ರಸಾರ ಸಚಿವ ಕಡಂಬೂರ್ ರಾಜು ಆರೋಪಿಸಿದ್ದಾರೆ.
ಕಡಂಬೂರ್ ರಾಜು ಅವರು ಕೋವಿಲ್ಪಟ್ಟಿಯಲ್ಲಿ ಭಾನುವಾರ ಚುನಾವಣಾ ಪ್ರಚಾರ ನಡೆಸುತ್ತಿದ್ದರು. ಆಗ ಎಎಂಎಂಕೆ ಕಾರ್ಯಕರ್ತರು ಅವರ ವಾಹನದ ಮುಂಭಾಗದಲ್ಲಿ ಪಟಾಕಿ ಸರ ಹೊತ್ತಿಸಿದ್ದಾರೆ. ಇದರಿಂದ ಹಲವು ನಿಮಿಷಗಳವರೆಗೆ ಸತತವಾಗಿ ಪಟಾಕಿ ಸಿಡಿದಿದೆ. ಪಟಾಕಿಗಳ ರಾಶಿಯಿಂದಾಗಿ ತಮ್ಮ ವಾಹನಕ್ಕೆ ಬೆಂಕಿ ತಗುಲುವ ಸಾಧ್ಯತೆ ಇತ್ತು. ತಾವು ಸ್ವಲ್ಪದರಲ್ಲಿಯೇ ಅಪಾಯದಿಂದ ಪಾರಾಗಿರುವುದಾಗಿ ಅವರು ತಿಳಿಸಿದ್ದಾರೆ.
ರಾಜಕೀಯದಲ್ಲಿ ಹೊರಗಿನವರೆಂಬುದೇ ಇಲ್ಲ; ಕಮಲ್ ಹಾಸನ್
'ಯಾವುದೇ ಅನಗತ್ಯ ವಿವಾದಗಳು ಎದುರಾಗುವುದನ್ನು ತಡೆಯಲು ನಾನು ಒಬ್ಬಂಟಿಯಾಗಿ ನನ್ನ ಕಾರಿನಲ್ಲಿ ಪ್ರಚಾರಕ್ಕಾಗಿ ತೆರಳುತ್ತಿದ್ದೆ. ಒಂದು ಕಡೆ ಎಎಂಎಂಕೆ ಕಾರ್ಯಕರ್ತರು ತಮ್ಮ ಕಾರುಗಳ ಮೂಲಕ ನನ್ನ ಕಾರನ್ನು ಅಡ್ಡಗಟ್ಟಿದರು. ಬಳಿಕ ಸುಮಾರು 5000 ಪಟಾಕಿಗಳಿರುವ ಸರಗಳನ್ನು ನನ್ನ ಕಾರಿನ ಪಕ್ಕದಲ್ಲಿಯೇ ಹೊಡೆದರು. ಅವರು ಎರಡು ನಿಮಿಷ ತಡೆದು ಬಳಿಕ ಪಟಾಕಿ ಹೊಡೆಯಬಹುದಾಗಿತ್ತು. ಆದರೆ ನಾನು ಅಲ್ಲಿ ಸಾಗುವಾಗಲೇ ಉದ್ದೇಶಪೂರ್ವಕವಾಗಿ ಪಟಾಕಿ ಸಿಡಿಸಿದರು. ನಾನು ಒಳಗೆ ಇರುವಂತೆಯೇ ನನ್ನ ಕಾರು ಬೆಂಕಿಗೆ ಆಹುತಿಯಾಗುವ ಅಪಾಯವಿತ್ತು. ನಾನು ಜೀವವನ್ನೇ ಕಳೆದುಕೊಳ್ಳುವಂತಾಗುತ್ತಿತ್ತು' ಎಂದು ಕಡಂಬೂರ್ ರಾಜು ಆರೋಪಿಸಿದ್ದಾರೆ.
ಈ ವಿಚಾರವಾಗಿ ಎಐಎಡಿಎಂಕೆ ಕೇಂದ್ರ ಕಾರ್ಯದರ್ಶಿಯು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ. ಇದುವರೆಗೂ ಪೊಲೀಸರು ಯಾರನ್ನೂ ಬಂಧಿಸಿಲ್ಲ.