ಜಯಲಲಿತಾ ಸಾವಿನ ತನಿಖೆಗೆ ತಿರುವು; ಆಡಿಯೋ ಕ್ಲಿಪ್ಪಿಂಗ್ ಬಿಡುಗಡೆ
ಚೆನ್ನೈ, ಮೇ 26 : ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ವೇಳೆ ತಮಿಳುನಾಡಿನ ಮುಖ್ಯಮಂತ್ರಿ ಆಗಿದ್ದ ಜೆ.ಜಯಲಲಿತಾ ಅವರೇ ಬರೆದುಕೊಂಡಿದ್ದ ಪಥ್ಯದ ಪಟ್ಟಿ ಹಾಗೂ ಐವತ್ತೆರಡು ಸೆಕೆಂಡ್ ಗಳ ಆಡಿಯೋ ಕ್ಲಿಪ್ಪಿಂಗ್ ವೊಂದನ್ನು ಶನಿವಾರ ಬಿಡುಗಡೆ ಮಾಡಲಾಗಿದೆ.
ಜಯಲಲಿತಾ ಸಾವಿನ ತನಿಖೆ ನಡೆಸುತ್ತಿರುವ ಏಕವ್ಯಕ್ತಿ ಆಯೋಗದ ಮುಖ್ಯಸ್ಥ, ನಿವೃತ್ತ ನ್ಯಾಯಮೂರ್ತಿ ಎ ಆರ್ಮುಗಸ್ವಾಮಿ ಅವರು ಕೈ ಬರಹದ ಪಟ್ಟಿ ಹಾಗೂ ಆಡಿಯೋ ಕ್ಲಿಪ್ ಬಿಡುಗಡೆ ಮಾಡಿದ್ದಾರೆ. ಆ ಆಡಿಯೋ ಕ್ಲಿಪ್ ನಲ್ಲಿ ತಮ್ಮ ರಕ್ತದೊತ್ತಡದ ಪ್ರಮಾಣ ಎಷ್ಟಿದೆ ಎಂದು ವೈದ್ಯರನ್ನು ಜಯಲಲಿತಾ ಕೇಳಿದ್ದಾರೆ.
ಜಯಾ ಆಸ್ಪತ್ರೆಯಲ್ಲಿದ್ದಾಗ 75 ದಿನಗಳೂ ಸಿಸಿಟಿವಿ ಸ್ವಿಚ್ಡ್ ಆಫ್ ಆಗಿದ್ದೇಕೆ?
ಅಂದ ಹಾಗೆ ಈ ಆಡಿಯೋ ಕ್ಲಿಪ್ಪಿಂಗ್ ಅನ್ನು ಜಯಲಲಿತಾ ಅವರ ಫಿಜಿಷಿಯನ್ ಪಿ.ಶಿವಕುಮಾರ್ ಅವರು ಆಯೋಗಕ್ಕೆ ಸಲ್ಲಿಸಿದ್ದಾರೆ. ಪಥ್ಯದ ಪಟ್ಟಿಯನ್ನು ಆಗಸ್ಟ್ 2, 2016ರಂದು ಹಸಿರು ಬಣ್ಣದ ಶಾಯಿಯಲ್ಲಿ ಬರೆಯಲಾಗಿದೆ. ಇನ್ನು ಆಡಿಯೋ ಟೇಪ್ ಅನ್ನು ಸೆಪ್ಟಂಬರ್ ಇಪ್ಪತ್ತೇಳು, ಅಂದರೆ ಉಸಿರಾಟದ ತೊಂದರೆಯಿಂದ ಆಕೆ ಆಸ್ಪತ್ರೆಗೆ ದಾಖಲಾದ ಐದು ದಿನಗಳ ನಂತರ ಮಾಡಿಕೊಳ್ಳಲಾಗಿದೆ.
ದೇಹದ ತೂಕ 106.9 ಕೇಜಿ ಇತ್ತು
ಆಹಾರದ ಪಥ್ಯದಲ್ಲಿ ಬೆಳಗಿನ ತಿಂಡಿ, ಮಧ್ಯಾಹ್ನದ ಊಟ ಹಾಗೂ ರಾತ್ರಿ ಊಟದ ವಿವರಗಳಿವೆ. ಆಕೆ ನಿರಂತರ ಚಿಕಿತ್ಸೆ ಪಡೆಯುತ್ತಿದ್ದರು ಎಂಬುದನ್ನು ಅದು ಸೂಚಿಸುತ್ತದೆ. ಆ ದಿನದಂದು ಜಯಲಲಿತಾ ಅವರ ದೇಹದ ತೂಕ 106.9 ಕೇಜಿ ಇತ್ತು. ಅವರಿಗೆ ಸೂಚಿಸಿದ್ದ ಆಹಾರ ಪಥ್ಯದ ಪ್ರಕಾರ ಬೆಳಗ್ಗೆ 5 ರಿಂದ 5.35ರ ಮಧ್ಯ ತಿಂಡಿ, ಅದು ಒಂದೂವರೆ ಇಡ್ಲಿ, ನಾಲ್ಕು ಸ್ಲೈಸ್ ಬ್ರೆಡ್, 400 ಮಿಲೀ ಕಾಫಿ ಹಾಗೂ 230 ಮಿಲೀ ಎಳನೀರು.
ಊಟ, ನಂತರ ಮಾತ್ರೆಗಳು
200 ಮಿಲೀ ಹಸಿರು ಟೀ 5.45ಕ್ಕೆ ತೆಗೆದುಕೊಳ್ಳಬಹುದು ಮತ್ತು ಆ ನಂತರ ಒಂದು ಸೇಬು. 120 ಮಿಲೀ ಕಾಫಿ ಮತ್ತು ಐದು ಬೋರ್ ಬನ್ ಬಿಸ್ಕತ್, 11.35ಕ್ಕೆ ಒಂದು ಕಪ್ ಬಾಸ್ಮತಿ ಅನ್ನ, ಮಧ್ಯಾಹ್ನದ ಊಟ (2ರಿಂದ 2.35ರ ಮಧ್ಯ). ಅದರಲ್ಲಿ ಒಂದೂವರೆ ಕಪ್ ಬಾಸ್ಮತಿ ಅನ್ನ, ಒಂದು ಕಪ್ ಮೊಸರು ಮತ್ತು ಅರ್ಧ ಕಪ್ ಕರಬೂಜ, ಆ ನಂತರ ಮಾತ್ರೆಗಳು. 200 ಮಿಲೀ ಕಾಫಿ ಸಂಜೆ 5.45ಕ್ಕೆ ತೆಗೆದುಕೊಳ್ಳಬಹುದು. ಸಂಜೆ 6.30ರಿಂದ 7.15ರ ಮಧ್ಯೆ ರಾತ್ರಿ ಊಟಕ್ಕೆ ಅರ್ಧ ಕಪ್ ವಾಲ್ ನಟ್ಸ್ ಮತ್ತು ಒಣ ಹಣ್ಣುಗಳು, ಒಂದು ಕಪ್ ಉಪ್ಪಿಟ್ಟು- ಇಡ್ಲಿ, ಒಂದು ದೋಸೆ, ಎರಡು ಸ್ಲೈಸ್ ಬ್ರೆಡ್ ಮತ್ತು 200 ಮಿಲೀ ಹಾಲು, ಆ ನಂತರ ಮಾತ್ರೆಗಳು.
ಜಯಲಲಿತಾ ಆರೋಗ್ಯ ಹದಗೆಟ್ಟಿದ್ದು ಏಕೆ? ಶಶಿಕಲಾ ನೀಡಿದ ಕಾರಣ...
ರಕ್ತದೊತ್ತಡದ ಮಾಹಿತಿ ಕೇಳಿರುವ ಜಯಲಲಿತಾ
ಇನ್ನು ಆಡಿಯೋ ಕ್ಲಿಪ್ ನಲ್ಲಿ ಪದೇಪದೇ ಕೆಮ್ಮುವ ಜಯಲಲಿತಾರ ಧ್ವನಿ ಕೇಳಿಬಂದು, ತಮ್ಮ ರಕ್ತದೊತ್ತಡದ ಬಗ್ಗೆ ಮಾಹಿತಿ ಕೇಳುತ್ತಾರೆ. ಅದಕ್ಕೆ ಪ್ರತಿಯಾಗಿ ವೈದ್ಯರು 140 ಇದೆ, ಸ್ವಲ್ಪ ಹೆಚ್ಚಿದೆ ಎಂದು ಉತ್ತರಿಸುತ್ತಾರೆ. ಅದಕ್ಕೆ ಪ್ರತಿಯಾಗಿ ಜಯಲಲಿತಾ, ಇದು ನನಗೆ ಸಹಜ ಎಂದು ಉತ್ತರಿಸುತ್ತಾರೆ.
75 ದಿನಗಳ ಕಾಲ ಆಸ್ಪತ್ರೆಯಲ್ಲಿ
ಅಂದಹಾಗೆ ಜಯಲಲಿತಾ ಅವರು ಸೆಪ್ಟೆಂಬರ್ 22, 2016ರಂದು ಉಸಿರಾಟದ ಸಮಸ್ಯೆಯಿಂದ ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಾದರು. 75 ದಿನಗಳ ಕಾಲ ಆಸ್ಪತ್ರೆಯಲ್ಲಿ ಕಳೆದ ಅವರು, ಡಿಸೆಂಬರ್ 5ರಂದು ಸಾವನ್ನಪ್ಪಿದರು. ಅವರ ಸಾವಿನ ಬಗ್ಗೆ ನಾನಾ ಅನುಮಾನಗಳು ವ್ಯಕ್ತವಾಗಿದ್ದರಿಂದ ನಿವೃತ್ತ ನ್ಯಾಯಮೂರ್ತಿ ಆರ್ಮುಗಸ್ವಾಮಿ ಅವರನ್ನು ನೇಮಿಸಿ, ಸಾವಿನ ಬಗ್ಗೆ ತನಿಖೆಗೆ ತಮಿಳುನಾಡು ಸರಕಾರ ಆದೇಶ ನೀಡಿದೆ.