ಜಯಲಲಿತಾ ಕೊನೆಯ ದಿನಗಳ ಬಗ್ಗೆ ಕಾರು ಡ್ರೈವರ್ ಬಿಚ್ಚಿಟ್ಟ ಸತ್ಯ
Recommended Video
ಚೆನ್ನೈ, ಮಾರ್ಚ್ 09: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಒಂದು ಕಾಲು ಮತ್ತು ಅವರ ಬೆರಳುಗಳನ್ನು ಕತ್ತರಿಸಲಾಗಿತ್ತು ಎಂಬ ವದಂತಿಗೆ ಸಂಬಂಧಿಸಿದಂತೆ, ಜಯಲಲಿತಾ ಅವರ ಕಾರ್ ಡ್ರೈವರ್ ಅಯ್ಯಪ್ಪನ್ ಮಾತನಾಡಿದ್ದಾರೆ.
ಜಯಲಲಿತಾ ಸಾವಿನ ಕುರಿತಂತೆ ಸಾಕ್ಷಿಗಳನ್ನು ದಾಖಲಿಸಿಕೊಳ್ಳುತ್ತಿರುವ ತನಿಖಾ ಆಯೋಗ ಮಾ.8 ರಂದು ಜಯಲಲಿತಾ ಅವರ ಕಾರಿನ ಡ್ರೈವರ್ ಅಯ್ಯಪ್ಪನ್ ಅವರ ವಿಚಾರಣೆ ನಡೆಸಿತು.
'ಅಮ್ಮಾ' ಉಸಿರಾಡುವ ಸ್ಥಿತಿಯಲ್ಲಿರಲಿಲ್ಲ! ಜಯಾ ಸಾವು ಬಗೆದಷ್ಟೂ ನಿಗೂಢ!
1991 ರಿಂದ ಜಯಲಲಿತಾ ಅವರ ಕಾರ್ ಚಾಲಕನಾಗಿ, ನಿಷ್ಠಾವಂತರಾಗಿ ಕೆಲಸ ಮಾಡುತ್ತಿರುವ ಅಯ್ಯಪ್ಪನ್, ಅವರ ಕಾಲು ಮತ್ತು ಕೈ ಬೆರಳುಗಳನ್ನು ಕತ್ತರಿಸಲಾಗಿತ್ತು ಎಂಬ ವದಂತಿಯನ್ನು ಸಾರಾಸಗಟು ಅಲ್ಲಗಳೆದರು. ವಿಚಾರಣೆಯ ಸಮಯದಲ್ಲಿ ಜಯಲಲಿತಾ ಆಸ್ಪತ್ರೆಗೆ ದಾಖಲಾದಾಗಿನಿಂದ, ಸಾಯುವವರೆಗಿನ ಕೆಲವು ವಿಷಯಗಳನ್ನು ಅವರು ತೆರೆದಿಟ್ಟರು.
ಬೆರಳು ಕತ್ತರಿಸಲಾಗಿದ್ದು ನಿಜವೇ?
"ಅವರ ಮರಣಾನಂತರ ಅವರ ಪಾರ್ಥಿವ ಶರೀರವನ್ನು ಕಟ್ಟುವಾಗ ಪೊಲೀಸ್ ಅಧಿಕಾರಿ ಕರುಪ್ಪಸಾಮಿ ಅವರೊಂದಿಗೆ ನಾನೂ ಇದ್ದೆ. ನಾನೇ ಅವರ ಕಾಲು, ಕೈಗಳನ್ನು ಕಟ್ಟಿದ್ದೆ. ಆ ಸಮಯದಲ್ಲಿ ಅವರ ಬೆರಳುಗಳನ್ನು ಗಮನಿಸಿದ್ದೇನೆ. ಅವರ ಕಾಲನ್ನಾಗಲೀ, ಕಾಲ್ಬೆರಳು, ಕೈಬೆರಳುಗಳನ್ನಾಗಲೀ ಕತ್ತರಿಸಲಾಗಿರಲಿಲ್ಲ. ಈ ಕುರಿತು ವದಂತಿ ಹಬ್ಬುತ್ತಿರುವುದೆಲ್ಲ ಸುಳ್ಳು" ಎಂದು ಅಯ್ಯಪ್ಪನ್ ಹೇಳಿದ್ದಾರೆ. ಅಮ್ಮ ಅವರ ಗೌರವಕ್ಕೆ ಮಸಿ ಬಳಿಯಲು ಕೆವರು ಇಂಥ ಸುದ್ದಿಯನ್ನು ಸೃಷ್ಟಿಸುತ್ತಿದ್ದಾರೆ. ಚಿನ್ನಮ್ಮ(ಶಶಿಕಲಾ) ಅಮ್ಮನನ್ನು ಕೊನೆಯವರೆಗೂ ಬಹಳ ಚೆನ್ನಾಗಿ ನೋಡಿಕೊಂಡರು. ಅವರ ವಿರುದ್ಧ ಆರೋಪ ಮಾಡುತ್ತಿರುವುದೆಲ್ಲ ಸುಳ್ಳು ಎಂದು ಇದೇ ಸಂದರ್ಭದಲ್ಲಿ ಅವರು ಹೇಳಿದರು.
ಸೆ.21 ರಂದು ನಡೆದಿದ್ದೇನು?
ಸೆ.21 ರಂದು ಅಂದರೆ ಅಮ್ಮಾ ಆಸ್ಪತ್ರೆಗೆ ಸೇರುವ ಮುನ್ನಾದಿನ ಮುಖ್ಯಮಂತ್ರಿಯಾಗಿ ಅವರು ಭಾಗವಹಿಸಬೇಕಿದ್ದ ಹಲವು ಕಾರ್ಯಕ್ರಮಗಳನ್ನು ಮಧ್ಯದಲ್ಲೇ ರದ್ದುಗೊಳಿಸಿದ್ದರು. ಯಾಕೋ ಆರೋಗ್ಯ ಸರಿಯಿಲ್ಲ ಎಂದು ಅವರ ಆಪ್ತ ಕಾರ್ಯದರ್ಶಿಗೆ ಹೇಳಿದರು. ನಾಲ್ಕು ಬಸ್ ಮತ್ತು ಮೆಟ್ರೋ ರೈಲ್ ಅನ್ನು ಅಂದು ಅಮ್ಮಾ ವಿಡಿಯೋ ಕಾನ್ಫಿರೆನ್ಸ್ ಮೂಲಕವೇ ಉದ್ಘಾಟನೆ ಮಾಡಿದರು. ನಂತರ ಮತ್ತೆ ತಮ್ಮ ಚೇಂಬರ್ ಗೆ ಹೋಗದ ಅಮ್ಮ, ತಕ್ಷಣವೇ ಮನೆಗೆ ಹೋಗಬೇಕು ಎಂದರು. ನಾನೇ ಅವರನ್ನು ಮನೆಗೆ ಬಿಟ್ಟೆ. ನಂತರ ಮರುದಿನವೂ ನಾನು ಡ್ಯೂಟಿ ಮುಗಿಸಿ ಮನೆಗೆ ಬಂದೆ. ಅಂದು(ಸೆ.22) ರಾತ್ರಿ ಸುಮಾರು 10.10 ರ ಸಮಯಕ್ಕೆ ನನಗೆ ಫೋನ್ ಬಂತು. ಅಮ್ಮಾ ಅವರಿಗೆ ಹುಷಾರಿಲ್ಲ. ಆಸ್ಪತ್ರೆಗೆ ಸೇರಿಸಲಾಗಿದೆ ಅಂತ. ತಕ್ಷಣ ನಾನು ಪೊಯಸ್ ಗಾರ್ಡನ್ ಗೆ ತೆರಳಿದೆ ಎಂದು ಅಯ್ಯಪ್ಪನ್ ವಿವರಿಸಿದ್ದಾರೆ.
ತುರ್ತುನಿಗಾ ಘಟಕದಲ್ಲಿದ್ದ ಅಮ್ಮಾ
ಪೋಯಸ್ ಗಾರ್ಡನ್ನಿಗೆ ಹೋಗುತ್ತಿದ್ದಂತೆಯೇ, ಅಮ್ಮಾ ಅವರಿಗೆ ಸಂಬಂಧಿಸಿದ ಕೆಲವು ವಸ್ತುಗಳನ್ನು ಅಪೊಲೋ ಆಸ್ಪತ್ರೆಯಲ್ಲಿ ದಾಖಲಾಗಿರುವ ಅವರಿಗೆ ಕೊಟ್ಟು ಬರುವಂತೆ ನನಗೆ ಹೇಳಿದರು. ನಾನು ಸುಮಾರು ರಾತ್ರಿ 11 ಗಂಟೆಗೆ ಅಲ್ಲಿಗೆ ತೆರಳಿದೆ. ಅಮ್ಮಾ ಆಗ ತುರ್ತುನಿಗಾ ಘಟಕದಲ್ಲಿದ್ದರು. ಅವರಿಗೆ ಪ್ರಜ್ಞೆ ಮರಳಿತ್ತು. ವೈದ್ಯರ ಬಳಿ ಅವರು ಮಾತನಾಡುತ್ತಿದುದನ್ನು ನಾನು ನೋಡಿದೆ. ಸೆ.22 ರಂದು ಅಮ್ಮಾ ಅವರು ಭಾಗವಹಿಸಬೇಕಿದ್ದ ಕಾರ್ಯಕ್ರಮಗಳನ್ನೆಲ್ಲ ಸೆ.23ಕ್ಕೆ ಮುಂದೂಡಲಾಗಿತ್ತು. ಅಮ್ಮಾ ಮನೆಗೇ ವೈದ್ಯರನ್ನು ಕರೆಸಬೇಕೆಂದುಕೊಂಡಿದ್ದರು. ಆದರೆ ಅವರು ಇದ್ದಕ್ಕಿದ್ದಂತೆ ಪ್ರಜ್ಞಾಹೀನರಾಗಿದ್ದರಿಂದ ಆಸ್ಪತ್ರೆಗೆ ಸೇರಿಸಲಾಗಿತ್ತು ಎಂದು ಅಯ್ಯಪ್ಪನ್ ಹೇಳಿದರು.
ಜಯಲಲಿತಾ ತಲೆಯಲ್ಲಿ ಗಾಯವಾಗಿತ್ತಾ?
ಜಯಲಲಿತಾ ಅವರ ತೆಲೆಗೆ ಗಾಯವಾಗಿತ್ತಾ? ಎಂಬ ತನಿಖಾ ಆಯೋಗದ ಪ್ರಶ್ನೆಯನ್ನು ಅಲ್ಲಗಳೆದ ಅಯ್ಯಪ್ಪನ್, ಅವರನ್ನು ಆಸ್ಪತ್ರೆಗೆ ದಾಖಲಿಸಿದ ನಾಲ್ಕನೇ ದಿನ ಅವರನ್ನು ಸಿಟಿ ಸ್ಕ್ಯಾನ್ ಗಾಗಿ ಕರೆದೊಯ್ಯಲಾಗಿತ್ತು. ಒಂದು ಗಂಟೆಯ ಒಳಗೆ ಅವರು ತಮ್ಮ ರೂಮ್ ಗೆ ಮರಳಿದರು. ಆದರೆ ಅವರ ತಲೆಯಲ್ಲಿ ಗಾಯವಾಗಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ನಂತರ ಅವರನ್ನು ನಾನು ನೋಡಿದ್ದು, ಅವರನ್ನು ವಾರ್ಡಿಗೆ ಶಿಫ್ಟ್ ಮಾಡಿದ ದಿನ. ಅಂದರೆ ನ.19. ಆ ದಿನ ನಾನು ಅವರಿಗೆ 'ಅಭಿನಂದನೆ' ಸಲ್ಲಿಸಿದೆ. ಅದಕ್ಕೆ ಅವರು ತಲೆಯಲ್ಲಾಡಿಸಿ, ಧನ್ಯವಾದ ಅರ್ಪಿಸಿದ್ದರು ಎಂದು ಭಾವುಕರಾಗಿ ಹೇಳಿದರು.
ಕಾಲು, ಬೆರಳನ್ನು ಕತ್ತರಿಸಲಾಗಿರಲಿಲ್ಲ!
ಡಿ.5 ರಂದು ಅಮ್ಮಾ ಕೊನೆಯುಸಿರೆಳೆದಾಗ, ಅವರ ಪಾರ್ಥಿವ ಶರೀರವನ್ನು ಬೆಳಗ್ಗಿನ ಜಾವ ಸುಮಾರು 3.15(ಡಿ.6)ರ ಸಮಯದಲ್ಲಿ ಪೋಯಸ್ ಗಾರ್ಡನ್ ಗೆ ಕರೆತರಲಾಗಿತ್ತು. ನಂತರ ಅವರ ಅಂತ್ಯ ಸಂಸ್ಕಾರದ ಸಮಯದಲ್ಲಿ ನಾನು ಮತ್ತು ಪೊಲೀಸ್ ಅಧಿಕಾರಿ ಕರುಪ್ಪಸಾಮಿ ಅವರ ಕಾಲು, ಕೈಗಳನ್ನು ಕಟ್ಟುವುದಕ್ಕೆ ನೆರವಾಗಿದ್ದೆವು. ಆ ಸಮಯದಲ್ಲಿ ನಾನು ಅವರ ಬೆರಳುಗಳನ್ನು ಗಮನಿಸಿದ್ದೇನೆ. ಅವರ ಕಾಲನ್ನು ಕತ್ತರಿಸಲಾಗಿತ್ತು ಮತ್ತು ಕಾಲ್ಬೆರಳು, ಕೈಬೆರಳುಗಳನ್ನು ಕತ್ತರಿಸಲಾಗಿತ್ತು ಎಂಬ ವದಂತಿಯೆಲ್ಲ ಸುಳ್ಳು ಎಂದು ಅವರು ಹೇಳಿದರು.