'ಅಮ್ಮಾ' ಕೊನೆಯ ಕ್ಷಣದ ಬಗ್ಗೆ 'ಚಿನ್ನಮ್ಮ' ಬಿಚ್ಚಿಟ್ಟ ಸ್ಫೋಟಕ ಸತ್ಯ!
Recommended Video
ಚೆನ್ನೈ, ಮಾರ್ಚ್ 22: ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ನಿಗೂಢ ಸಾವು ಸೃಷ್ಟಿಸಿದ ಕುತೂಹಲ ಇನ್ನೂ ತಣ್ಣಗಾಗಿಲ್ಲ. ಅವರಿಲ್ಲವಾದರೂ, 'ಅಂತೆ, ಕಂತೆ' ಎಂಬ ಗಾಳಿಸುದ್ದಿಗಳಲ್ಲಿ ಅವರಿನ್ನೂ ಜೀವಂತವಾಗಿದ್ದಾರೆ! ಇತ್ತೀಚೆಗಷ್ಟೇ ಜಯಾ ಅವರ ಸಾವಿನ ಕುರಿತು ಅವರ ಡ್ರೈವರ್ ಒಂದಷ್ಟು ಮಾಹಿತಿ ನೀಡಿದ್ದರು. ಇದೀಗ ಶಶಿಕಲಾ ಸರದಿ!
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಎಐಎಡಿಎಂಕೆ ನಾಯಕಿಯಾಗಿದ್ದ ಜಯಲಲಿತಾ ಸಾವಿನ ಕುರಿತು ವಿಚಾರಣೆ ನಡೆಸುತ್ತಿರುವ ನ್ಯಾ.ಆರ್ಮುಗಂಸ್ವಾಮಿ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್ ನಲ್ಲಿ ಶಶಿಕಲಾ ನಟರಾಜನ್, ಜಯಾ ಅವರ ಅಂತಿಮ ಕ್ಷಣಗಳ ಕುರಿತು ಕೆಲವು ಮಾಹಿತಿ ನೀಡಿದ್ದಾರೆ.
ಜಯಲಲಿತಾ ಆರೋಗ್ಯ ಹದಗೆಟ್ಟಿದ್ದು ಏಕೆ? ಶಶಿಕಲಾ ನೀಡಿದ ಕಾರಣ...
ಸೆ.22, 2016 ರಂದು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಆಗಿನ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಅವರನ್ನು ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಂದಿನಿಂದ ಅವರ ನಿಧನವಾರ್ತೆಯನ್ನು ಘೋಷಿಸಿದ ದಿನದವರೆಗೆ ಅಂದರೆ ಡಿ.5ರವರೆಗೆ(ಕೆಲವೆಡೆ ಡಿ.4 ರಂದೇ ಜಯಲಲಿತಾ ಅವರು ಮೃತರಾಗಿದ್ದರು ಎನ್ನಲಾಗಿದೆ. ಶಶಿಕಲಾ ನೀಡಿದ ವಿವರದಲ್ಲೂ ಡಿ.4 ಎಂದೇ ಇರುವುದು ಗಮನಾರ್ಹ) ಜಯಲಲಿತಾ ಅವರ ಆರೋಗ್ಯದ ಸ್ಥಿತಿಯ ಬಗ್ಗೆ ಸಾರ್ವಜನಿಕರಿಗೆ ಯಾವುದೇ ಮಾಹಿತಿ ದೊರಕಿರಲಿಲ್ಲ. ಆಸ್ಪತ್ರೆಗೆ ಪ್ರಭಾವಿಗಳನ್ನೇ ಬಿಟ್ಟಿರಲಿಲ್ಲ. ಇದು ಕೋಟ್ಯಂತರ ಅಮ್ಮಾ ಅಭಿಮಾನಿಗಳಲ್ಲಿ ಆಕ್ರೋಶವನ್ನುಂಟುಮಾಡಿತ್ತು.
ಜಯಲಲಿತಾ ಕೊನೆಯ ದಿನಗಳ ಬಗ್ಗೆ ಕಾರು ಡ್ರೈವರ್ ಬಿಚ್ಚಿಟ್ಟ ಸತ್ಯ
ಅಷ್ಟಕ್ಕೂ ಆರ್ಮುಗಂಸ್ವಾಮಿ ಆಯೋಗಕ್ಕೆ ಶಶಿಕಲಾ ಸಲ್ಲಿಸಿದ ಅಫಿಡವಿಟ್ ನಲ್ಲಿ ಏನಿದೆ...?
ಧಾರಾವಾಹಿ ವೀಕ್ಷಿಸುತ್ತಿದ್ದ ಜಯಲಲಿತಾ!
"ಜಯಲಲಿತಾ ಅವರು ಸಾಯುವ ಕೆಲವೇ ಕ್ಷಣಗಳ ಮೊದಲು, ಡಿ.4, 2016 ರಂದು ಅಪರಾಹ್ನ ಸುಮಾರು 4.20 ರ ಸಮಯದಲ್ಲಿ ಜೈ ವೀರ ಹನುಮಾನ್ ಧಾರಾವಾಹಿ ನೋಡುತ್ತಿದ್ದರು. ಧಾರಾವಾಹಿಯ ಅಂದಿನ ಕಂತು ಮುಗಿಯುತ್ತಿದ್ದಂತೆಯೇ ರಿಮೋಟ್ ನಿಂದ ಟಿವಿ ಆರಿಸಿದ ಅಕ್ಕ (ಜಯಲಲಿತಾ), ನರ್ಸ್ ಬಳಿ ಕಾಫಿ ಮತ್ತು ಬನ್ ತರುವಂತೆ ಮನವಿ ಮಾಡಿದ್ದರು. ನರ್ಸ್ ಒಂದು ಟ್ರಾಲಿಯಲ್ಲಿ ಅವನ್ನು ತರುತ್ತಿದ್ದರು."
"ಅಷ್ಟರಲ್ಲಿ ಇದ್ದಕ್ಕಿದ್ದಂತೆ ಅಕ್ಕನ ದೇಹ ಕಂಪಿಸುವುದಕಕೆ ಶುರುವಾಯ್ತು. ಹಲ್ಲು ಕಚ್ಚಿಕೊಳ್ಳುವುದಕ್ಕೆ ತೊಡಗಿತು. ನಾಲಿಗೆ ಹೊರಚಾಚುವುದಕ್ಕೆ ಶುರುವಾಯ್ತು. ಅಕ್ಕ ಏನನ್ನೋ ಹೇಳಲು ಪ್ರಯತ್ನಿಸುತ್ತಿದ್ದಾರೆ ಎನ್ನಿಸಿತು. ಅವರು ನನ್ನನ್ನೇ ನೋಡುತ್ತಿದ್ದರು. ನಾನು ತಕ್ಷಣವೇ ಅವರತ್ತ ಓಡಿ ಅವರನ್ನು ಹಿಡಿದುಕೊಂಡೆ. ಅಷ್ಟರಲ್ಲಿ ವೈದ್ಯರು ಬಂದರು."
ಅಕ್ಕ ಕಣ್ಣು ಮುಚ್ಚಿಬಿಟ್ಟರು!
"ಅಕ್ಕ ಕೈ ಎತ್ತಿ ನನಗೆ ಏನನನ್ನೋ ಹೇಳಲು ಪ್ರಯತ್ನಿಸುತ್ತಿದ್ದರು. ತಕ್ಷಣವೇ ವೈದ್ಯರು ಪ್ರಥಮ ಚಿಕಿತ್ಸೆಗೆ ಮುಂದಾದರು. ಅಕ್ಕನನ್ನು ಜೋರಾಗಿ ಕರೆಯುವಂತೆ ವೈದ್ಯರು ನನಗೆ ಸೂಚಿಸಿದರು. ನಾನು ಅವರ ಕಿವಿ ಬಳಿ ಜೋರಾಗಿ 'ಅಕ್ಕ, ಅಕ್ಕ' ಎಂದು ಕೂಗಿದೆ. ಅಕ್ಕ ನನ್ನತ್ತ ನೋಡುತ್ತಿದ್ದರು.ಅವರ ನಾಲಿಗೆ ಹೊರಚಾಚುತ್ತಿತ್ತು. ವೈದ್ಯರ ಪ್ರಯತ್ನ ಫಲನೀಡಲಿಲ್ಲ. ಕೆಲವೇ ಸೆಕೆಂಡ್ ಗಳಲ್ಲಿ ಅವರ ಕಣ್ಣು ಮುಚ್ಚಿಕೊಂಡಿತು. ತೀವ್ರ ಹೃದಯಾಘಾತದಿಂದ ಅವರು ಮರಣಹೊಂದಿದ್ದಾರೆ ಎಂದು ವೈದ್ಯರು ನಂತರ ತಿಳಿಸಿದರು" ಎಂದು ಶಶಿಕಲಾ ಅಫಿಡವಿಟ್ ನಲ್ಲಿ ಹೇಳಿದ್ದಾರೆ.
ಜಯಲಲಿತಾ ಅವರು ನಿಧನರಾಗಿದ್ದು ಡಿ.5 ರಂದು ಎಂದು ಅಪೋಲೋ ಆಸ್ಪತ್ರೆ ತನ್ನ ಪ್ರಕಟಣೆಯಲ್ಲಿ ತಿಳಿಸಿತ್ತು. ಆದರೆ ಶಶಿಕಲಾ ಅವರು ಹೇಳುವ ಪ್ರಕಾರ ಜಯಲಲಿತಾ ಅವರು ಹೃದಯಾಘಾತದಿಂದ ಡಿ.4 ರಂದೇ ನಿಧನ ಹೊಂದಿದ್ದಾರೆ! ಇದರಲ್ಲಿ ಯಾವುದು ಸತ್ಯ? ಯಾವುದು ಸುಳ್ಳು ಎಂಬುದು ಇನ್ನೂ ನಿಖರವಾಗಿ ತಿಳಿದಿಲ್ಲ.
ಒತ್ತಡ ಅನುಭವಿಸುತ್ತಿದ್ದ ಅಕ್ಕ
"ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಜಯಲಲಿತಾ ಅವರನ್ನು ದೋಷಿ ಎಂದು ಪರಿಗಣಿಸಿದ್ದ ಬಗ್ಗೆ ಅಕ್ಕನಿಗೆ ತೀವ್ರ ಆಘಾತವಾಗಿತ್ತು. ಅವರು ಸದಾ ಅದೇ ಒತ್ತಡದಲ್ಲಿ ಇರುತ್ತಿದ್ದರು. ಸೆ.22 ರಂದು ಬೆಳಗ್ಗಿನಿಂದ ಅನಾರೋಗ್ಯದಿಂದ ಪರಿತಪಿಸುತ್ತಿದ್ದ ಅವರನ್ನು ಆಸ್ಪತ್ರೆಗೆ ಹೋಗೋಣ, ಅಥವಾ ವೈದ್ಯರನ್ನೇ ಕರೆಸೋಣ ಎಂದು ನಾನು ಹಲವು ಬಾರಿ ಹೇಳಿದರೂ ಅವರು ನನ್ನ ಮಾತನ್ನು ನಿರಾಕರಿಸಿದರು."
"ರಾತ್ರಿ ಬಾತ್ ರೂಮಿನಿಂದ ತಮ್ಮ ಬೆಡ್ ಬಳಿ ಬಂದ ಅಕ್ಕ ತುಂಬಾ ಸುಸ್ತಾದಂತೆ ಕಂಡರು. ನಾನೇ ಅವರನ್ನು ಕೈಹಿಡಿದು ಬೆಡ್ ಮೇಲೆ ಮಲಗಿಸಲು ಪ್ರಯತ್ನಿಸಿದೆ. ಆದರೆ ಅಷ್ಟರಲ್ಲೇ ಅವರು ಪ್ರಜ್ಞೆ ಕಳೆದುಕೊಂಡರು. ನಂತರ ಅವರನ್ನು ಅಂಬುಲೆನ್ಸ್ ನ್ಲಿ ಆಸ್ಪತ್ರೆಗೆ ಸೇರಿಸಲಾಯಿತು. ಅಂಬುಲೆನ್ಸ್ ನಲ್ಲಿದ್ದಾಗ ಅವರಿಗೆ ಪ್ರಜ್ಞೆ ಮರಳಿತ್ತು. 'ನಾವು ಎಲ್ಲಿಗೆ ಹೋಗುತ್ತಿದ್ದೇವೆ' ಎಂದು ಅವರು ನನ್ನನ್ನು ಕೇಳಿದ್ದರು. ನಾನು, 'ಆಸ್ಪತ್ರೆಗೆ' ಎಂದು ಉತ್ತರಿಸಿದ್ದೆ" ಎಂದು ಸಹ ಶಶಿಕಲಾ ತಿಳಿಸಿದ್ದಾರೆ.
ಪನ್ನೀರ್ ಸೆಲ್ವಂ ಬಿಜೆಪಿಗೆ ಶರಣಾಗಿದ್ದಾರೆ!
ಜಯಲಲಿತಾ ಅವರ ಮರಣದ ನಂತರ ಹಂಗಾಮಿ ಮುಖ್ಯಮಂತ್ರಿಯಾಗಿದ್ದ ಒ ಪನ್ನೀರ್ ಸೆಲ್ವಂ, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ನನ್ನನ್ನು ಎಐಎಡಿಎಂಕೆ ಪಕ್ಷದ ನಾಯಕಿಯನ್ನಾಗಿ ನನ್ನನ್ನು ಆಯ್ಕೆ ಮಾಡಲಾಯ್ತು. ಆದರೆ ಅಧಿಕಾರ ಕಳೆದುಕೊಂಡ ಕಾರಣಕ್ಕೆ ಪನ್ನೀರ್ ಸೆಲ್ವಂ ಕೇಂದ್ರ ಬಿಜೆಪಿ ಸರ್ಕಾರಕ್ಕೆ ಶರಣಾದರು. ಅಷ್ಟೇ ಅಲ್ಲ, ಆಗಿನ ಕೇಂದ್ರ ಮಂತ್ರಿಗಳಾಗಿದ್ದ ಈಗಿನ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಸಹ ಜಯಲಲಿತಾ ಅವರ ಸಾವನ್ನು ಟೀಕಿಸಿದ್ದರು ಎಂದು ಶಶಿಕಲಾ ಈ ಅಫಿಡವಿಟ್ ನಲ್ಲಿ ಹೇಳಿದ್ದಾರೆ.