ಜಯಾ ವಿಡಿಯೋ : ವೆಟ್ರಿವೇಲನ್ ವಿರುದ್ಧ ಕ್ರಮವೇಕಿಲ್ಲ?
ಚೆನ್ನೈ, ಡಿಸೆಂಬರ್ 20 : "ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಅವರ ಆರೋಗ್ಯದ ಸ್ಥಿತಿಗತಿಯನ್ನು ತಿಳಿಯುವ ಹಕ್ಕು ಎಲ್ಲ ನಾಗರಿಕರದಾಗಿತ್ತು. ಎಷ್ಟೊಂದು ಆರೋಪ ಕೇಳಿಬರುತ್ತಿದ್ದರೂ ಆವಾಗ ಏಕೆ ಈ ವಿಡಿಯೋವನ್ನು ಬಿಡುಗಡೆ ಮಾಡಲಿಲ್ಲ?"
ವಿರೋಧಿಗಳನ್ನು ಬೆಚ್ಚಿಬೀಳಿಸುವ ಜಯಲಲಿತಾ ವಿಡಿಯೋ!
ಹೀಗೆಂದು ಪ್ರಶ್ನಿಸಿದವರು ದ್ರಾವಿಡ ಮುನ್ನೇತ್ರ ಕಳಗಂ ಪಕ್ಷದ ಸಂಸದ ಟಿಕೆಎಸ್ ಇಳಗೋವನ್ ಅವರು. ಈ ಕುರಿತು ಚುನಾವಣಾ ಆಯೋಗಕ್ಕೆ ದೂರು ನೀಡುವುದಾಗಿ ಬುಧವಾರ ಹೇಳಿದ್ದಾರೆ. ಜನರ ಭಾವನೆಯೊಂದಿಗೆ ಆಟವಾಡಲು ಹೋಗಿ ದಿನಕರನ್ ಅವರಿಗೇ ವಿಡಿಯೋ ಮುಳುವಾಗಿದೆ.
ಆಸ್ಪತ್ರೆಯ ಹಾಸಿಗೆಯ ಮೇಲೆ ಮಲಗಿದ್ದ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರು ತಾವೇ ಸ್ವತಃ ಹಣ್ಣಿನ ರಸವನ್ನು ಸೇವಿಸುವ ವಿಡಿಯೋವನ್ನು ಟಿಟಿವಿ ದಿನಕರನ್ ಬಳಗ ಬಿಡುಗಡೆ ಮಾಡಿದ್ದು, ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಆಸ್ಪತ್ರೆಗೆ ದಾಖಲಿಸುವ ಮುನ್ನವೇ ಅವರು ಜ್ಞಾನ ಕಳೆದುಕೊಂಡಿದ್ದರು ಎಂದು ಆರೋಪ ಬಂದಿರುವ ಹಿನ್ನೆಲೆಯಲ್ಲಿ ಈ ವಿಡಿಯೋ ಭಾರೀ ಮಹತ್ವ ಪಡೆದುಕೊಂಡಿದೆ.
ಡಿಸೆಂಬರ್ 21ರಂದು ಆರ್ ಕೆ ನಗರ ವಿಧಾನಸಭಾ ಕ್ಷೇತ್ರದಲ್ಲಿ ಉಪ ಚುನಾವಣೆ ಇರುವುದರಿಂದ ಶಶಿಕಲಾ ನಟರಾಜನ್ ಬಣದವರು ರಾಜಕೀಯ ಲಾಭ ಪಡೆಯಲು ಈ ವಿಡಿಯೋ ಬಿಡುಗಡೆ ಮಾಡಿದ್ದು ನಾಚಿಕೆಗೇಡಿನ ಸಂಗತಿ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬದುಕಿರುವ ಶಶಿಕಲಾರನ್ನು 'ಸಾಯಿಸಿ' ನಗೆಪಾಟಲಾದ ಇಮ್ರಾನ್!
ಡಾ. ರಾಧಾಕೃಷ್ಣನಗರ (ಆರ್ ಕೆ ನಗರ) ಕ್ಷೇತ್ರದಲ್ಲಿ ಚುನಾವಣೆ ಇರುವುದರಿಂದ, ಚುನಾವಣಾ ಆಯೋಗದಿಂದ ನಿರ್ಬಂಧ ಹೇರಲಾಗಿದ್ದು, ಈ ವಿಡಿಯೋ ಬಿಡುಗಡೆ ಮಾಡಿದ ಪಿ ವೆಟ್ರಿವೇಲನ್ ಅವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಎಡಿಎಂಕೆ ಪಕ್ಷದ ಧುರೀಣ ಡಿ. ಜಯಕುಮಾರ್ ಅವರು ಆಗ್ರಹಿಸಿದ್ದಾರೆ.
ಆರ್ ಕೆ ನಗರದ ಚುನಾವಣಾಧಿಕಾರಿ ಸುತ್ತೋಲೆ ಹೊರಡಿಸಿದ್ದು, ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಯಾವುದೇ ಟಿವಿ ಸಂಸ್ಥೆಯಾಗಲಿ, ಸುದ್ದಿಪತ್ರಿಕೆಗಳಾಗಲಿ, ದಿ ರೆಪ್ರೆಸೆಂಟೇಶನ್ ಆಫ್ ಪೀಪಲ್ಸ್ ಆಕ್ಟ್ ಕಾಯ್ದೆಯ 126(1) ಪ್ರಕಾರ, ವಿಡಿಯೋವನ್ನು ಪ್ರಕಟಿಸುವಂತಿಲ್ಲ ಎಂದು ತಿಳಿಸಿದ್ದಾರೆ.
ಹಾಗಿದ್ದರೆ, ಟಿಟಿವಿ ದಿನಕರನ್ ಬಳಗದವರು ಬಿಡುಗಡೆ ಮಾಡಿರುವ ಈ ವಿಡಿಯೋ, ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದಂತೆ ಆಗುವುದಿಲ್ಲವೆ? ವೆಟ್ರಿವೇಲನ್ ಮತ್ತು ಆರ್ ಕೆ ನಗರದಲ್ಲಿ ಸ್ಪರ್ಧಿಸುತ್ತಿರುವ ದಿನಕರನ್ ವಿರುದ್ಧ ಏನು ಕ್ರಮ ಜರುಗಿಸುತ್ತೀರಿ ಎಂದು ಜಯಕುಮಾರ್ ಪ್ರಶ್ನಿಸಿದ್ದಾರೆ.