ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಭಿಮಾನದ ಅತಿರೇಕವೊ, ಹುಚ್ಚುತನದ ಪರಮಾವಧಿಯೊ

By ಪ್ರಸಾದ ನಾಯಿಕ
|
Google Oneindia Kannada News

ಬೆಂಗಳೂರು, ಸೆ. 29 : ಇದು ಅಭಿಮಾನವೋ, ಅಂಧಾಭಿಮಾನವೋ, ಅಭಿಮಾನದ ಅತಿರೇಕವೋ, ಹುಚ್ಚುತನವೋ, ಹುಚ್ಚಾಟದ ಪರಮಾವಧಿಯೋ? ಬುದ್ಧಿಗೇಡಿತನವೋ, ವಶೀಕರಣವೋ, ಸಮೂಹಸನ್ನಿಯೋ, ಮೌಢ್ಯತನವೋ, ಅಮಾಯಕತೆಯೋ ಅಥವಾ ಕಾಕತಾಳೀಯವೋ?

ಒಂದೂ ತಿಳಿಯದಂತಹ ಸಂದಿಗ್ಧ ಪರಿಸ್ಥಿತಿ. ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಜಯರಾಂ ಅವರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಸಿಬಿಐನ ವಿಶೇಷ ನ್ಯಾಯಾಲಯ ನಾಲ್ಕು ವರ್ಷಗಳ ಕಾಲ ಜೈಲಿಗಟ್ಟುತ್ತಿದ್ದಂತೆ ಜಯಲಲಿತಾ ಅಭಿಮಾನಿಗಳು ತಮ್ಮ ಜೀವನವೇ ಮುಗಿದುಹೋಯಿತು ಎಂಬಂತೆ ವರ್ತಿಸುತ್ತಿದ್ದಾರೆ.

ಒಬ್ಬರಲ್ಲ ಇಬ್ಬರಲ್ಲ ಬರೋಬ್ಬರಿ ಹದಿನೈದು ಅಭಿಮಾನಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಹತ್ತಕ್ಕೂ ಹೆಚ್ಚು ಜನರು, ಜಯಲಲಿತಾ ಜೈಲಿಗೆ ಹೋದ ನೋವನ್ನು ಭರಿಸಲಾರದೆ ಹೃದಯಾಘಾತಕ್ಕೆ ಈಡಾಗಿ ಅಸುನೀಗಿದ್ದಾರೆ. ತಮಿಳುನಾಡು ತಮಿಳುನಾಡಾಗಿ ಉಳಿದಿಲ್ಲ. ಇದ್ಯಾಕೆ ಹೀಗೆ? ಮನೋವಿಜ್ಞಾನಿಗಳು ಇದಕ್ಕೇನಂತಾರೋ? [ಅಮ್ಮನಿಗಾಗಿ ಪ್ರಾಣ ಬಿಟ್ಟ ಅಭಿಮಾನಿಗಳು]


ಇದೇ ತರಹದ ವಿದ್ಯಮಾನ ಅಂದಿನ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಡಾ. ವೈಎಸ್ ರಾಜಶೇಖರ ರೆಡ್ಡಿ ಅವರು ಅಪಘಾತದಲ್ಲಿ ತೀರಿಕೊಂಡಾಗಲೂ ನಡೆದಿತ್ತು. ಆಗ ಕೂಡ, 60ಕ್ಕೂ ಹೆಚ್ಚು ಅಭಿಮಾನಿಗಳು ಪ್ರಾಣ ಕಳೆದುಕೊಂಡಿದ್ದರು. ಆಂಧ್ರಪ್ರದೇಶ ಮತ್ತು ತಮಿಳುನಾಡು ಹೊರತುಪಡಿಸಿದರೆ ಉಳಿದ ರಾಜ್ಯಗಳಲ್ಲಿ ಇಂತಹ ಘಟನೆಗಳು ಅಪರೂಪ.

ದಕ್ಷಿಣ ಭಾರತದಲ್ಲಿ ವ್ಯಕ್ತಿಪೂಜೆ ಹೊಸದೇನಲ್ಲ. ತಮಿಳುನಾಡಿನಲ್ಲಿ ಮತ್ತು ಆಂಧ್ರದಲ್ಲಿ ಹೆಚ್ಚಾಗಿ ಸಿನೆಮಾ ತಾರೆಯರೇ ರಾಜ್ಯವನ್ನು ಆಳಿರುವುದು ಕೂಡ ಇದಕ್ಕೆ ಕಾರಣವಿದ್ದರೂ ಇರಬಹುದು. ತಮಿಳುನಾಡಿನಲ್ಲಿ ಪೆರಿಯಾರ್, ಎಂಜಿಆರ್, ಆಂಧ್ರದಲ್ಲಿ ಎನ್ಟಿಆರ್ ಕಾಲದಿಂದಲೂ ವ್ಯಕ್ತಿ ಆರಾಧನೆ ಅತಿರೇಕದಲ್ಲಿದೆ.

ತಮಿಳುನಾಡಿನಲ್ಲಿ ಇರುವುದು ಎರಡೇ ಪಕ್ಷ. ಡಿಎಂಕೆ ಮತ್ತು ಎಐಎಡಿಎಂಕೆ. ಇವೆರಡು ಪಕ್ಷಗಳ ಪ್ರತಿಷ್ಠೆಗಳ ತಾಕಲಾಟದಲ್ಲಿ ಅಮಾಯಕ ಬಡ ತಮಿಳರು ಅಪ್ಪಚ್ಚಿಯಾಗಿದ್ದಾರೆ. ಸಬ್ಸಿಡಿಗಳ ಆಸೆತೋರಿಸಿ ಅವರ ಜೀವನವನ್ನೇ ಬಸಿದುಹಾಕಿದ್ದಾರೆ. ಅತಿಯಾಗಿ ಪ್ರೀತಿಸುವ ಆರಾಧ್ಯ ದೇವತೆ ಸಂಕಷ್ಟಕ್ಕೀಡಾದಾಗ ನೋವಾಗುವುದು ಸಹಜ. ಆದರೆ, ಇವರಿಗೆ ವಿವೇಚನೆ ಇರಬೇಡವೆ? [ಪರಪ್ಪನ ಅಗ್ರಹಾರಕ್ಕೆ ಜಯಲಲಿತಾ]


ತಮಿಳುನಾಡಿನಲ್ಲಂತೂ ಅಭಿಮಾನಿಗಳ ಅತಿರೇಕ ಒಂದು ಹೆಜ್ಜೆ ಮುಂದೆಯೇ ಎಂದು ಹೇಳಬಹುದು. 'ಅಯ್ಯೋ ಅಮ್ಮಾ ಎಚ್ಚಾಚ್ಚ' ಎಂದು ಎದೆಬಿರಿಯುವ ಹಾಗೆ, ಆಕಾಶವೇ ಕಿತ್ತುಬೀಳುವ ಹಾಗೆ, ಎದೆಎದೆ ಬಡಿದುಕೊಂಡು ಅಳುವುದನ್ನು ನೋಡಿದರೆ ಕನಿಕರ ಬರುವುದಿಲ್ಲ, ಸಿಕ್ಕಾಪಟ್ಟೆ ಸಿಟ್ಟುಬರುತ್ತದೆ ಎಂದು ಓದುಗರೊಬ್ಬರು ವ್ಯಾಖ್ಯಾನಿಸಿದ್ದಾರೆ.

ಅಲ್ಲಿ ಅಭಿಮಾನಿಗಳು 'ಎಲ್ಲ ಮುಗಿದೇ ಹೋಯಿತು' ಎಂಬಂತೆ ರೋದಿಸುತ್ತಿದ್ದರೆ, ಇಲ್ಲಿ ಪರಪ್ಪನ ಅಗ್ರಹಾರದಲ್ಲಿ ಜಯಲಲಿತಾ ಮತ್ತು ಆಕೆ ಸಹಅಪರಾಧಿಗಳು, ಜೈಲಿನಲ್ಲಿ ಕೊಟ್ಟ ರಾಗಿ ಮುದ್ದೆ, ಚಪಾತಿಯನ್ನು ಧಿಕ್ಕರಿಸಿ, ಮನೆಯಿಂದ ಬಿಸಿಬಿಸಿ ಇಡ್ಲಿ, ವಡಾ, ಚಟ್ನಿ, ಸಾಂಬಾರು, ಪೊಂಗಲ್... ನಾನಾ ಬಗೆಯ ತಿಂಡಿಗಳನ್ನು ತರಿಸಿಕೊಂಡು ಜಮಾಯಿಸುತ್ತಿದ್ದಾರೆ.

Jayalalithaa jail and height of fanaticism

ಅಮ್ಮನೇನೋ ಇವರಿಗೆ 1 ರು.ಗೆ ಇಡ್ಲಿ, ಕೆಜಿ ಅಕ್ಕಿ ಎಲ್ಲ ಕಡುತ್ತಿರಬಹುದು. ಆದರೆ ಈ ಅಂಧಾಭಿಮಾನಿಗಳಿಗೆ ಕನಿಷ್ಠಪಕ್ಷ 50 ಪೈಸೆಯಷ್ಟಾದರೂ ಬುದ್ಧಿ ಇರಬೇಡವೆ ಎಂದು ಮತ್ತೊಬ್ಬರು ಓದುಗರು ಕಟಕಿಯಾಡಿದ್ದಾರೆ. ಜಯಲಲಿತಾ ಭ್ರಷ್ಟಾಚಾರ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಈ ಅಭಿಮಾನಿಗಳಿಗೆ ತಿಳಿಯದ ವಿಷಯವೆ? ಅಥವಾ ಆಪರಿಯ ಮೌಢ್ಯವೆ?

'ಅಮ್ಮ' ಜೈಲಿಗೆ ಹೋಗಿದ್ದಕ್ಕೆ ಅಳುತ್ತಿರುವವರು ಒಂದೆಡೆಯಾದರೆ, ಮತ್ತೊಂದೆಡೆ ಅವರು ಬೇಗನೆ ಜೈಲಿನಿಂದ ಹೊರಬರಲೆಂದು ಹರಕೆ ಹೊತ್ತವರೆಷ್ಟೋ, ಅನ್ನ ನೀರು ಮುಟ್ಟದೆ ಉಪವಾಸವಿದ್ದವರೆಷ್ಟೋ, ಪ್ರಾಣ ಕಳೆದುಕೊಳ್ಳಲು ತಯಾರಾಗಿ ನಿಂತವರೆಷ್ಟೋ? ಜೈಲಿಗೆ ಹೋಗಿದಕ್ಕೇ ಈಪರಿಯ ರಂಪಾಟವಾದರೆ, ಜೈಲಿನಲ್ಲೇನಾದರೂ ಜಯಲಲಿತಾಗೆ ಹೆಚ್ಚೂಕಡಿಮೆಯಾದರೆ ಗತಿಯೇನು? [ಪಿಟಿಐ ಚಿತ್ರಗಳು]

English summary
Fans of Jayalalithaa have been wailing, committing suicide, dying due to heart attack, ever since she was sent to jail by CBI special court in Bangalore. Why are they behaving like this? Why is it common in Tamil Nadu and Andhra Pradesh? Extreme hero worship and dirty political game played by these heroes has made these innocent Tamil people pawn of political game.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X