ಜಯಲಲಿತಾ ಅಕ್ರಮ ಆಸ್ತಿ ಪ್ರಕರಣದ ಕಂಪ್ಲೀಟ್ ಡಿಟೇಲ್ಸ್
ಬೆಂಗಳೂರು, ಸೆ. 26 : ಜಯಲಲಿತಾ ಅಕ್ರಮ ಆಸ್ತಿ ಸಂಪಾದನೆ ಪ್ರಕರಣಕ್ಕೆ 18 ವರ್ಷ ಪ್ರಾಯ. ಪ್ರಕರಣದ ಅಂತಿಮ ತೀರ್ಪು ಬೆಂಗಳೂರಿನಲ್ಲಿಯೇ ಹೊರಬೀಳಲಿದ್ದು ಖುದ್ದು ಆರೋಪಿ ಜಯಲಲಿತಾ ಅವರೆ ಆಗಮಿಸಬೇಕಿದೆ. ಈ ಹಿನ್ನೆಲೆಯಲ್ಲಿ ಅಗತ್ಯ ಭದ್ರತೆ ತೆಗೆದುಕೊಳ್ಳುವಂತೆ ರಾಜ್ಯದ ಗೃಹ ಸಚಿವ ಜಾರ್ಜ್ ಆದೇಶ ನೀಡಿದ್ದಾರೆ.
ನ್ಯಾಯಮೂರ್ತಿ ಮೈಕಲ್ ಜಾನ್ ಕುನ್ಹ ಅವರ ಪೀಠ ವಿಚಾರಣೆ ಮುಗಿಸಿದ್ದು, ಅಂತಿಮ ತೀರ್ಪು ನೀಡಲಿದೆ. ಜಯಲಲಿತಾ ವಿಶೇಷ ವಿಮಾನದಲ್ಲಿ ಬೆಳಗ್ಗೆ ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಹೋಟೆಲ್ ಲೀಲಾ ಪ್ಯಾಲೇಸ್ನಲ್ಲಿ ವಿಶ್ರಾಂತಿ ಪಡೆದು ನಂತರ ರಸ್ತೆ ಮಾರ್ಗದ ಮೂಲಕ ಪರಪ್ಪನ ಅಗ್ರಹಾರ ತಲುಪಲಿದ್ದಾರೆ. ಪರಪ್ಪನ ಅಗ್ರಹಾರದ ಸುತ್ತಲೂ ನಿಷೇಧಾಜ್ಞೆ ಹೊರಡಿಸಿ ಬಿಗಿ ಪೊಲೀಸ್ ಪಹರೆ ಹಾಕಲಾಗಗಿದ್ದು ಸಿಸಿ ಟಿವಿ ಕ್ಯಾಮರಾ ಅಳವಡಿಸಲಾಗಿದೆ.(ಜಯಲಲಿತಾ ಅಕ್ರಮ ಆಸ್ತಿಗಳಿಕೆ ಪ್ರಕರಣ ತೀರ್ಪು ಸೆ.27ಕ್ಕೆ)
ಜಯಲಲಿತಾ ಪ್ರಕರಣದ ತೀರ್ಪು ಕೇವಲ ತಮಿಳುನಾಡು ಮಾತ್ರವಲ್ಲ ಇಡೀ ದೇಶದ ಮೇಲೆ ಪರಿಣಾಮ ಬೀರಲಿದೆ. ಕರ್ನಾಟಕ ಮತ್ತು ತಮಿಳುನಾಡು ಜನರಲ್ಲಿ ಮತ್ತು ರಾಜಕಾರಣಿಗಳಲ್ಲಿ ಇದು ತೀವ್ರ ಕುತೂಹಲ ಕೆರಳಿಸಿದೆ. ಈಗಾಗಲೇ ಸುಮಾರು 350 ಕ್ಕೂ ಹೆಚ್ಚು ಸಾಕ್ಷಿಗಳ ವಿಚಾರಣೆ ನಡೆದಿದ್ದು ಪ್ರಕರಣ ಅಂತಿಮ ಘಟ್ಟಕ್ಕೆ ಬಂದು ನಿಂತಿದೆ.
ಜಯಲಲಿತಾ ಅವರಿಗೆ ಭದ್ರತೆ ಕೊರತೆಯಿದ್ದು ಪ್ರಕರಣದ ಅಂತಿಮ ತೀರ್ಪನ್ನು ಕರ್ನಾಟಕ(ಬೆಂಗಳೂರು) ಬಿಟ್ಟು ಬೇರೆ ಸ್ಥಳದಲ್ಲಿ ನೀಡಬೇಕು ಎಂದು ಕೃಷ್ಣಮೂರ್ತಿ ಎಂಬುವರು ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಮಾಡಿತ್ತು.(ಬೆಂಗಳೂರಲ್ಲಿ ಜಯಾ 'ಅಮ್ಮ' ಪಡೆಗೆ ನೋ ಎಂಟ್ರಿ?)
ಜಯಲಲಿತಾ ಅಕ್ರಮ ಆಸ್ತಿ ಗಳಿಕೆ ಪ್ರಕರಣದ ಮೇಲೊಂದು ಹಿನ್ನೋಟ ಇಲ್ಲಿದೆ....
ಏನಿದು ಪ್ರಕರಣ?
1991 ರಲ್ಲಿ ಪ್ರಥಮಬಾರಿಗೆ ತಮಿಳುನಾಡು ಸಿಎಂಆಗಿ ಅಧಿಕಾರವಹಿಸಿಕೊಂಡ ಜಯಲಲಿತಾ 1996ರವರೆಗೆ ಪೂರ್ಣ ಅವಧಿ ಅಧಿಕಾರ ನಡೆಸಿದರು. ಅಧಿಕಾರದ ಅವಧಿ ಉದ್ದಕ್ಕೂ ಜಯಲಲಿತಾ ಕೇವಲ ಒಂದು ರೂಪಾಯಿ ವೇತನ ಪಡೆದಿದ್ದರು. ಆದರೆ ಅಧಿಕಾರ ಕಳೆದುಕೊಂಡ ತಕ್ಷಣ ಅಂದರೆ ತಮಿಳುನಾಡನಲ್ಲಿ ಕರುಣಾನಿಧಿ ನೇತೃತ್ವದ ಡಿಎಂಕೆ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಜಯಲಲಿತಾ ಮೇಲೆ ಅಕ್ರಮ ಆಸ್ತಿ ಗಳಿಕೆ ಪ್ರಕರಣ ದಾಖಲಾಯಿತು.
ಜಯಲಲಿತಾ ಬಂಧನ
1991 ರಲ್ಲಿ ಅಧಿಕಾರ ಏರುವಾಗ ಕೇವಲ 3 ಕೋಟಿ ರೂ. ಆಸ್ತಿ ಹೊಂದಿದ್ದ ಜಯಲಲಿತಾ ಅಧಿಕಾರದಿಂದ ಇಳಿಯುವಾಗ 66.6 ಕೋಟಿ ರೂ. ಆಸ್ತಿ ಒಡತಿಯಾಗಿದ್ದರು. ಅಲ್ಲದೇ ನಿಲ್ಗಿರಿಸ್ ಬೆಟ್ಟದ ತಪ್ಪಲಿನಲ್ಲಿ ಸಾವಿರ ಏಕರೆ ವ್ಯಾಪ್ತಿಯ ಎಸ್ಟೇಟ್, ತಿರುನಲ್ ವೆಲಿಯಲ್ಲಿ ಸಾವಿರ ಎಕರೆ ಜಾಗ, 28 ಕೆಜಿ ಚಿನ್ನ ಮತ್ತು ದತ್ತು ಮಗನ ಮದುವೆಗೆ ಮಾಡಿದ್ದ 5 ಕೋಟಿ ರೂ. ಖರ್ಚು ಎಲ್ಲವನ್ನು ಲೆಕ್ಕಕ್ಕೆ ತೆಗೆದುಕೊಳ್ಳಲಾಯಿತು. 1997ರಲ್ಲಿ ಮನೆ ಮೇಲೆ ದಾಳಿ ಮಾಡಿ ಅಕ್ರಮ ಆಸ್ತಿ ಸಂಪಾದನೆ ಹೆಸರಲ್ಲಿ ಕೆಲ ಕಾಲ ಅವರನ್ನು ಬಂಧಿಸಲಾಯಿತು.
ಇತರೆ ಆರೋಪಿಗಳು ಯಾರು?
ಜಯಲಲಿತಾ ಹಾಗೂ ಜತೆ ಇತರೆ ಮೂವರ ಮೇಲೆ ಪ್ರಕರಣ ದಾಖಲು ಮಾಡಲಾಯಿತು. ಜಯಲಲಿತಾ ದತ್ತುಪುತ್ರ ಸುಧಾಕರನ್, ಸ್ನೇಹಿತೆ ಶಶಿಕಲಾ ಹಾಗೂ ಇಳವರಸಿ ಮೇಲೆಯೂ ಅಕ್ರಮ ಆಸ್ತಿ ಗಳಿಕೆ ಪ್ರಕರಣ ದಾಖಲಾಗಿತ್ತು. ಈಗ ಅಂತಿಮ ತೀರ್ಪು ಪ್ರಕಟವಾಗುವ ಸಮಯ ಬಂದಿದ್ದು ಇವರೆಲ್ಲ ಹಾಜರಿರಬೇಕು ಎಂದು ನ್ಯಾಯಾಲಯ ಸ್ಪಷ್ಟವಾಗಿ ತಿಳಿಸಿದೆ.
ಬೆಂಗಳೂರು ಕೋರ್ಟ್ಗೆ ಪ್ರಕರಣ ಬಂದಿದ್ದು ಯಾಕೆ?
ನಂತರ 2003ರಲ್ಲಿ ಎಐಎಡಿಎಂಕೆ ಅಧಿಕಾರಕ್ಕೆ ಬಂದಿತು. ಜಯಲಲಿತಾ ಮತ್ತೆ ಮುಖ್ಯಮಂತ್ರಿಯಾದರು. ಅಧಿಕಾರದ ಶಕ್ತಿ ಬಳಸಿ ಜಯಲಲಿತಾ ಪ್ರಕರಣದ ಸಾಕ್ಷಿಗಳನ್ನು ನಾಶ ಮಾಡುತ್ತಾರೆ. ಅಲ್ಲದೇ ನ್ಯಾಯಾಂಗದ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ ಎಂದು ಆರೋಪಿಸಿ ಡಿಎಂಕೆ ಮುಖಂಡ ಕೆ. ಆನ್ಬಳಗನ್ ಸುಪ್ರೀಂ ಕೋರ್ಟ್ಗೆ ಮನವಿ ಸಲ್ಲಿಸಿದರು. ವಿಚಾರಣೆ ನಡೆಸಿದ ನ್ಯಾಯಾಲಯ ಪ್ರಕರಣವನ್ನು ಚೆನೈನಿಂದ ಬೆಂಗಳೂರಿಗೆ ವರ್ಗಾಯಿಸಿತು.
ಕರ್ನಾಟಕಕ್ಕೆ ಕೊನೆ ಬಾರಿ ಬಂದಿದ್ದು ಯಾವಾಗ?
ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿ ಜಯಲಲಿತಾ 2011ರಲ್ಲಿ ಬೆಂಗಳೂರಿಗೆ ಆಗಮಿಸಿದ್ದರು. ಝಡ್ ಸೆಕ್ಯೂರಿಟಿಯೊಂದಿಗೆ ತಮಿಳುನಾಡಿನಿಂದಲೇ ಆಗಮಿಸಿ ವಿಚಾರಣೆಗೆ ಹಾಜರಾಗಿ ತೆರಳಿದ್ದರು.
ಶನಿವಾರದ ತೀರ್ಪು ಏನಾಗಬಹುದು?
ನ್ಯಾಯಾಲಯ ಜಯಲಲಿತಾಗೆ ಒಂದೆರಡು ವರ್ಷದ ಜೈಲು ಶಿಕ್ಷೆ ವಿಧಿಸಿದರೆ ಅವರು ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಹಾಕುವುದು ನಿಶ್ಚಿತ. ಇಲ್ಲವೇ ಆರೇಳು ವರ್ಷದ ಶಿಕ್ಷೆ ನೀಡಿದರೆ ಪರಿಸ್ಥಿತಿ ಬಿಗಡಾಯಿಸಬಹುದು. ಸಾಮಾನ್ಯವಾಗಿ ನ್ಯಾಯಾಲಯ ಇಂಥ ಪ್ರಕರಣಗಳಲ್ಲಿ ಶಿಕ್ಷೆ ಪ್ರಮಾಣವನ್ನು ಒಂದೇ ಬಾರಿಗೆ ಘೊಷಿಸುವುದಿಲ್ಲ. ಈ ಬಾರಿಯೂ ಹಾಗೆ ಆಗುತ್ತದೆ ಎಂಬ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
ಶಿಕ್ಷೆಯಾದರೆ ಚುನಾವಣೆಗೆ ಸ್ಪರ್ಧಿಸುವಂತಿಲ್ಲ
ಒಂದು ವೇಳೆ ಜಯಲಲಿತಾ ಅವರಿಗೆ ಶಿಕ್ಷೆ ಪ್ರಕಟವಾದರೆ ಅವರ ರಾಜಕಾರಣದ ಭವಿಷ್ಯಕ್ಕೆ ಮಸುಕು ಕವಿದಂತೆ. ಅಲ್ಲದೇ ಕಳೆದ ವರ್ಷದ ಸುಪ್ರೀಂ ಕೋರ್ಟ್ ತೀರ್ಮಾನ ಮತ್ತು 'ಜನಪ್ರತಿನಿಧಿಗಳ ಕಾಯ್ದೆ' ಅನ್ವಯ ಅವರು ಆರು ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸುವಂತಿಲ್ಲ.