'ಅಮ್ಮಾ' ಉಸಿರಾಡುವ ಸ್ಥಿತಿಯಲ್ಲಿರಲಿಲ್ಲ! ಜಯಾ ಸಾವು ಬಗೆದಷ್ಟೂ ನಿಗೂಢ!
ಚೆನ್ನೈ, ಡಿಸೆಂಬರ್ 16: 'ಆಸ್ಪತ್ರೆಗೆ ಸೇರಿಸುವ ಹೊತ್ತಲ್ಲಿ ತಮಿಳು ನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಉಸಿರಾಡುವ ಸ್ಥಿತಿಯಲ್ಲಿರಲಿಲ್ಲ' ಎಂಬ ಆಘಾತಕಾರಿ ಸತ್ಯವನ್ನು ಅವರು ದಾಖಲಾಗಿದ್ದ ಅಪೋಲೋ ಆಸ್ಪತ್ರೆಯ ಉನ್ನತಾಧಿಕಾರಿಯೇ ಬಯಲಿಗೆಳೆದಿದ್ದಾರೆ. ಈ ಸುದ್ದಿಯಿಂದಾಗಿ ಜಯಾ ಸಾವಿನ ನಿಗೂಢತೆಯ ಕುರಿತು ಮತ್ತಷ್ಟು ಕುತೂಹಲ ಮೂಡಿದೆ.
Recommended Video
"ಜಯಲಲಿತಾರನ್ನು ಆಸ್ಪತ್ರೆಗೆ ಸೇರಿಸುವಾಗಲೇ ಉಸಿರಾಡದ ಸ್ಥಿತಿಯಲ್ಲಿದ್ದರು!"
ನಿಜಕ್ಕೂ, ಅವರ ಸಾವು ಬಗೆದಷ್ಟೂ ಮುಗಿಯದ ನಿಗೂಢಗಳ ಸಂತೆ! ಅವರು ಆಸ್ಪತ್ರೆಗೆ ಸೇರಿದಾಗಿನಿಂದ ಅಂದರೆ ಸೆಪ್ಟೆಂಬರ್ 22, 2016 ರಿಂದ ಡಿಸೆಂಬರ್ 05 2016 ರವರೆಗೂ ದಿನ ದಿನವೂ ಹುಟ್ಟುತ್ತಿದ್ದ ಅಂತೆ ಕಂತೆಗಳ ಪುರಾಣಕ್ಕೆ ಲೆಕ್ಕವಿಲ್ಲ. ಆದರೆ ಇಂದಿಗೂ ಅವರ ಸಾವು ಅವರ ಆಪ್ತರ ಮೇಲೊಂದಷ್ಟು ಅನುಮಾನವನ್ನು ಉಳಿಸಿ, ನಂಬಿಕೆದ್ರೋಹದ ಪ್ರತೀಕವೆಂಬಂತೆ ಕಾಣಿಸುತ್ತಿದೆ.
'ಅಮ್ಮ' ಇಲ್ಲವಾಗಿ ಒಂದು ವರ್ಷ! ಅನಾಥವಾಯ್ತು ತಮಿಳುನಾಡು ರಾಜಕೀಯ
ಜಯಾ ಸುತ್ತ ಯಾವುದೋ ವ್ಯವಸ್ಥಿತ ಪಿತೂರಿ ನಡೆದಿತ್ತೇನೋ ಎಂಬ ಅನುಮಾನವನ್ನು ಅಪೋಲೋ ಆಸ್ಪತ್ರೆಯ ವೈಸ್ ಚೇರ್ಮನ್ ಪ್ರೀತಾ ರೆಡ್ಡಿ ಅವರ ಮಾತು ಹುಟ್ಟಿಸಿದೆ. ತಮಿಳು ಚಾನೆಲ್ ವೊಂದಕ್ಕೆ ಸಂದರ್ಶನ ನೀಡುತ್ತಿದ್ದ ಸಮಯದಲ್ಲಿ ಪ್ರೀತಿ ರೆಡ್ಡಿ ಅವರು 'ಆಸ್ಪತ್ರೆಗೆ ಕರೆತಂದಾಗ ಜಯಲಲಿತಾ ಅವರು ಉಸಿರಾಡುವ ಸ್ಥಿತಿಯಲ್ಲೇ ಇರಲಿಲ್ಲ.' ಎಂಬ ಹೇಳಿಕೆ ನೀಡಿದ್ದರು. ಇದರಿಂದಾಗಿ ಬೂದಿಮುಚ್ಚಿದ ಕೆಂಡದಂತಿದ್ದ 'ಜಯಾ ಸಾವು ಪ್ರಕರಣ' ಮತ್ತೆ ಹೊಗೆಯಾಡತೊಡಗಿದೆ.
ಅಜ್ಞಾತ ವಾಸದಲ್ಲಿದ್ದ ಜಯಲಲಿತಾ
72 ದಿನಗಳ ಕಾಲ ಚೆನ್ನೈನ ಅಪೊಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜಯಲಲಿತಾ ಅನುಭವಿಸಿದ್ದು ಅಕ್ಷರಶಃ ಅಜ್ಞಾತವಾಸ! ಆಕೆ ಆಗ ನಿಜಕ್ಕೂ ಬದುಕಿದ್ದರಾ? ಬದುಕಿದ್ದರೆ ಅವರು ಯಾವ ಸ್ಥಿತಿಯಲ್ಲಿದ್ದರು? ಅವರಿಗೆ ಯಾವ ಚಿಕಿತ್ಸೆ ನೀಡಲಾಗುತ್ತಿತ್ತು ಎಂಬಿತ್ಯಾದಿ ಯಾವ ಮಾಹಿತಿಯೂ ಇಲ್ಲ! ಆಗಾ ಆಸ್ಪತ್ರೆಯ ವೈದ್ಯರು ಮಾಧ್ಯಮ ಗೋಷ್ಟಿ ಕರೆದೋ, ಪ್ರಕಟಣೆ ಹೊರಡಿಸಿಯೋ, 'ಅವರ ಆರೋಗ್ಯ ಸ್ಥಿರವಾಗಿದೆ' ಎನ್ನುತ್ತಿದ್ದುದನ್ನು ಬಿಟ್ಟರೆ ಅವರ ಆಸ್ಪತ್ರೆ ವಾಸ ಒಂದು ನಿಗೂಢತೆಯ ಸಂತೆಯೇ ಆಗಿ ಉಳಿದಿದೆ.
ಜಯಾ ಅವರಿಗೆ ವಿಷ ನೀಡಲಾಗಿತ್ತೇ?
ಜಯಲಲಿತಾ ಅವರ ಆಪ್ತ ವಲಯದ ಮೇಲೆ ಅನುಮಾನ ಹುಟ್ಟಿಸುವಂಥ ಸನ್ನಿವೇಶ ಸೃಷ್ಟಿಯಾಗಿದ್ದು, ಅವರಿಗೆ ಸ್ಲೋ ಪಾಯ್ಸನ್ ನೀಡಲಾಗುತ್ತಿತ್ತು ಎಂಬ ವಿಷಯ ಬೆಳಕಿಗೆ ಬಂದಾಗ. ಇದೂ ಸತ್ಯವೋ ಸುಳ್ಳೋ ಎಂಬುದು ಈಗಲೂ ಅರ್ಥವಾಗದೆ ನಿಗೂಢವಾಗಿಯೇ ಉಳಿದಿದೆ. "ಆಸ್ಪತ್ರೆಗೆ ಸೇರುವ ಮುನ್ನ, ಜಯಾ ನಿವಾಸ ಪೊಯಸ್ ಗಾರ್ಡನ್ ನಲ್ಲಿ ನಡೆದ ಮಾತಿನ ಚಕಮಕಿಯಲ್ಲಿ ಕೆಲವರು ಜಯಲಲಿತಾ ಅವರನ್ನು ತಳ್ಳಿ ಬೀಳಿಸಿದ್ದರು. ಆ ನಂತರ ಅವರಿಗೆ ಪ್ರಜ್ಞೆ ತಪ್ಪಿತ್ತು" ಎಂದು ತಮಿಳುನಾಡು ವಿಧಾನಸಭೆಯ ಮಾಜಿ ಸ್ಪೀಕರ್ ಪಿ.ಎಚ್.ಪಾಂಡ್ಯನ್ ಆರೋಪಿದ್ದರು.
ಅಂತೆ ಕಂತೆಗಳ ಗೊಂದಲ
ಜಯಾ ಸಾವಿನ ನಂತರ ಹುಟ್ಟಿಕೊಂಡ ಅಂತೆಕಂತೆ ಪುರಾಣಗಳಿಗಂತೂ ಲೆಕ್ಕವಿಲ್ಲ. ಅವರ ಪಾರ್ಥಿವ ಶರೀರ ನೋಡುವುದಕ್ಕೆ ಬಂದ ಹಲವರು ಅವರ ಮುಖದ ಮೇಲೆ ಗಾಯದ ಗುರುತುಗಳಿದ್ದವು ಎಂದು ಸಹ ಹೇಳಿದ್ದಾರೆ. ಆದರೆ ಈ ಕುರಿತು ವೈದ್ಯರು ಮಾತ್ರ ಯಾವ ಪ್ರತಿಕ್ರಿಯೆ ನೀಡಿಲ್ಲ. ತೀರಾ ಅನಾರೋಗ್ಯವಾದಾಗ ಮುಖ ಇಳಿಬಿದ್ದು ಕಲೆಗಳಾಗುವುದು ಸಾಮಾನ್ಯ, ಅದನ್ನೇ ಜನರು ತಪ್ಪಾಗಿ ಅರ್ಥೈಸಿಕೊಂಡಿದ್ದಿರಬಹುದು ಎಂದೂ ಹೇಳಲಾಗಿತ್ತು.
ತೆಗೆದುಕೊಳ್ಳುತ್ತಿದ್ದ ಔಷಧವೇ ಸರಿಯಿರಲಿಲ್ಲ!
ಒಂದು ರಾಜ್ಯದ ಮುಖ್ಯಮಂತ್ರಿಯಾಗಿ, ಕೋಟ್ಯಂತರ ಜನರ ಆರಾಧ್ಯ ದೈವವೇ ಆಗಿದ್ದ ಜಯಲಲಿತಾ ಅವರಿಗೆ ನೀಡಲಾಗುತ್ತಿದ್ದ ಮಧುಮೇಹದ ಔಷಧವೇ ತಪ್ಪಾಗಿತ್ತು ಎಂದು ಅವರನ್ನು ಆಸ್ಪತ್ರೆಗೆ ಸೇರಿಸಿದಾಗ ವೈದ್ಯರೇ ಹೇಳಿದ್ದರು ಎಂಬುದು ಒಂದು ಮೂಲದ ಮಾಹಿತಿ. ಆದರೆ ಸುಶಿಕ್ಷಿತೆ ಜಯಲಲಿತಾ ಅವರಿಗೆ ಅದು ತಿಳಿಯಲಿಲ್ಲವೇ? ಅಥವಾ ಅವರ ಆಪ್ತರೇ ಬೇಕೆಂದೇ ಹೀಗೆ ಆಟ ಆಡಿದರೆ ಎಂಬುದು ಅರ್ಥವಾಗದ ವಿಷಯ! ಇದೀಗ ಅಪೋಲೋ ಆಸ್ಪತ್ರೆಯ ಉನ್ನತಾಧಿಕಾರಿಯೇ ನೀಡಿರುವ ಹೇಳಿಕೆ ಮತ್ತಷ್ಟು ಗೊಂದಲ ಸೃಷ್ಟಿಸಿರುವುದು ಸುಳ್ಳಲ್ಲ.