'ಅಮ್ಮಾ' ನಿಗೂಢ ಸಾವು ಮತ್ತು ಆ 7 ಸಂಭಾವ್ಯ ಪಿತೂರಿಗಳು!
72 ದಿನಗಳ ರಹಸ್ಯ ಚಿಕಿತ್ಸೆ, ದಿನದಿನವೂ ಹುಟ್ಟುತ್ತಿದ್ದ ಕಟ್ಟುಕತೆಗಳು, ಇನ್ನೇನು ಗುಣಮುಖರಾಗಿ ಬಂದೇ ಬಿಡುತ್ತಾರೆ ಎಂದುಕೊಂಡಿದ್ದ 'ಅಮ್ಮ'ನ ನಿಗೂಢ ಸಾವು, ಇದ್ದಕ್ಕಿದ್ದಂತೇ ಬದಲಾದ ತಮಿಳುನಾಡಿನ ರಾಜಕೀಯ ದಿಕ್ಕು, ಒಡೆದ ಬಣಗಳು, ಶಶಿಕಲಾಗೆ ಜೈಲು... ಹೀಗೇ ಜಯಲಲಿತಾ(68) ಎಂಬ ಉಕ್ಕಿನ ಮಹಿಳೆಯ ಮರಣದ ನಂತರ ಹುಟ್ಟಿದ ಒಂದಕ್ಕೊಂದು ತಾಳತಂತು ಇಲ್ಲದ ಸನ್ನಿವೇಶಗಳು ಹಲವು.
'ಅಮ್ಮ' ಇಲ್ಲವಾಗಿ ಒಂದು ವರ್ಷ! ಅನಾಥವಾಯ್ತು ತಮಿಳುನಾಡು ರಾಜಕೀಯ
ಆದರೆ ಆ ಎಲ್ಲ ಸನ್ನಿವೇಶಗಳನ್ನೂ ಬೆಸೆಯುತ್ತ ಹೋದರೆ ಅಮ್ಮನ ಸಾವಿನ ಹಿಂದಿನ ಸತ್ಯ ಗೋಚರವಾಗುವ ಬದಲು ಮತ್ತಷ್ಟು ನಿಗೂಢತೆಯೇ ಸುತ್ತಿಕೊಂಡು ಕಗ್ಗಂಟಾಗಿಬಿಡುತ್ತದೆ!
ಜಯಲಲಿತಾ ಸಾವಿನ ತನಿಖೆಗೆ ಸಿದ್ಧ: ಅಪೊಲೊ ಆಸ್ಪತ್ರೆ
ಜಯಲಲಿತಾ ನಿಜಕ್ಕೂ ಅನಾರೋಗ್ಯದಿಂದ ಸತ್ತಿದ್ದಾ? ಅಥವಾ ಅದು ಕೊಲೆಯಾ? ಎಂಬ ಪ್ರಶ್ನೆ ಕಳೆದ ವರ್ಷ(2016) ಡಿ.5 ರಂದು ಅಮ್ಮಾ ಅಸುನೀಗಿದಾಗಲೇ ಎದ್ದಿದೆ. ಇಂದಿಗೂ ಅದಕ್ಕೆ ಸೂಕ್ತ ಉತ್ತರ ದೊರಕಿಲ್ಲ.
ಜಯಾ ಸಾವಿನ ಸಿಬಿಐ ತನಿಖೆಗೆ ಒಪ್ಪದ ಸುಪ್ರೀಂ ಕೋರ್ಟ್
ಆದರೆ ಅಮ್ಮಾ ಸಾವಿನ ಒಂದೊಂದೇ ಘಟನೆಗಳನ್ನು ಮೆಲಕುಹಾಕುತ್ತ ಹೋದರೆ, ಯಾವುದೋ ವಿಶ್ವಾಸಘಾತುಕ ನಡೆ, ಅಮ್ಮ ನಂಬಿದ್ದ ಆಪ್ತರಿಂದಲೇ ತಿಂದ ಪೆಟ್ಟಿನ ಗುರುತು ಕಂಡೂ ಕಾಣದಂತೆ ಮರೆಯಾಗುತ್ತದೆ. ಅಮ್ಮಾ ಸಾವಿನ ತನಿಖೆಯೇನೋ ನಡೆಯುತ್ತಿದೆ. ಆದರೆ ಅಮ್ಮಾ ಸಾವಿನ ನಂತರ ಜನಸಾಮಾನ್ಯರ ಮನಸ್ಸಿನಲ್ಲಿ ಅನುಮಾನ ಹುಟ್ಟಿಸಿದ ಹಲವು ಸಂಗತಿಗಳು ಇಂದಿಗೂ ಉತ್ತರ ಸಿಗದೆ ಕೂತಿವೆ. ಜಯಾ ಸುತ್ತ ಯಾವುದೋ ವ್ಯವಸ್ಥಿತ ಪಿತೂರಿ ನಡೆದಿತ್ತೇನೋ ಎಂಬ ಸಂಶಯವನ್ನು ಇಂಚಿಂಚೇ ಗಟ್ಟಿಗೊಳಿಸುತ್ತವೆ!
72 ದಿನ ರಹಸ್ಯ ಚಿಕಿತ್ಸೆ!
ಚೆನ್ನೈನ ಅಪೊಲೊ ಆಸ್ಪತ್ರೆಯಲ್ಲಿ ಬರೋಬ್ಬರಿ 72 ದಿನಗಳ ಕಾಲ ಜಯಲಲಿತಾ ಅನುಭವಿಸಿದ್ದು ಅಕ್ಷರಶಃ ಅಜ್ಞಾತವಾಸ! ಆಸ್ಪತ್ರೆಯಲ್ಲಿ ಏನಾಗುತ್ತಿದೆ ಎಂಬುದು ಜನಸಾಮಾನ್ಯರಿಗೆ ಹೋಗಲಿ, ಘಟಾನುಘಟಿ ನಾಯಕರಿಗೂ ಗೊತ್ತಾಗದ ಮಟ್ಟಿಗೆ ರಹಸ್ಯವಾಗಿಡಲಾಗಿತ್ತು. ಆಗಾಗ ವೈದ್ಯರು ನೀಡುತ್ತಿದ್ದ ಪ್ರಕಟಣೆಯಲ್ಲಿ, 'ಮುಖ್ಯಮಂತ್ರಿ ಜಯಲಲಿತಾ ಅವರ ಆರೋಗ್ಯ ಸ್ಥಿರವಾಗಿದೆ' ಎಂಬ ಎರಡು ಸಾಲಿನ ವಾಕ್ಯಗಳನ್ನು ಬಿಟ್ಟರೆ ಜಯಲಲಿತಾ ಅವರಿಗೆ ನಿಜಕ್ಕೂ ಆಗಿದ್ದೇನು ಎಂಬುದು ಯಾರೊಬ್ಬರಿಗೂ ಗೊತ್ತಿರಲಿಲ್ಲ, ಈಗಲೂ ಗೊತ್ತಿಲ್ಲ! ಆ ಸಮಯದಲ್ಲಿ ಜಯಲಲಿತಾ ಅವರಿಗೆ ಏನಾಗಿದೆ ಎಂಬ ಕುರಿತು ಸ್ಪಷ್ಟ ಮಾಹಿತಿ ನೀಡಿ ಎಂದು ಜಯಾ ಅಭಿಮಾನಿಗಳ ದಂಡೇ ಆಸ್ಪತ್ರೆಯ ಮುಂದೆ ಠಿಕಾಣಿ ಹೂಡಿತ್ತು. ಆದರೆ ಬಿಗಿಬಂದೋಬಸ್ತ್ ಇದ್ದಿದ್ದರಿಂದ ಯಾರೊಬ್ಬರನ್ನೂ ಆಸ್ಪತ್ರೆಯ ಒಳಗೆ ಬಿಟ್ಟಿರಲಿಲ್ಲ.
ಜಯಲಲಿತಾ ಅನಾರೋಗ್ಯ: ಸೆಪ್ಟೆಂಬರ್ 23ರಿಂದ ಡಿಸೆಂಬರ್ 4ರವರೆಗೆ
ಸ್ಲೋ ಪಾಯ್ಸನ್ ನೀಡಲಾಗಿತ್ತಾ..?
ಜಯಲಲಿತಾ ಅವರಿಗೆ ಸ್ಲೋ ಪಾಯ್ಸನ್ ನೀಡಲಾಗಿತ್ತಾ? ಹಾಗೊಂದು ಪ್ರಶ್ನೆ ಅವರ ಸಾವಿನ ನಂತರ ಹುಟ್ಟಿಕೊಂಡು, ಅವರ ಆಪ್ತವಲಯದ ಮೇಲೆ ಗಾಢ ಅನುಮಾನವನ್ನು ಹುಟ್ಟಿಸಿತ್ತು. 2012ರಲ್ಲೇ ನಿಯತಕಾಲಿಕವೊಂದು, ಜಯಲಲಿತಾ ಅವರಿಗೆ ಅವರ ಆಪ್ತ ವಲಯದ ಕೆಲವರು ಸ್ಲೋಪಾಯ್ಸನ್ ನೀಡುತ್ತಿದ್ದಾರೆ ಎಂಬ ಆಘಾತಕಾರಿ ಮಾಹಿತಿಯನ್ನು ಬಯಲುಮಾಡಿತ್ತು. ಈ ಎಲ್ಲ ಘಟನೆಯ ನಂತರ ಜಯಲಲಿತಾ ಮತ್ತು ಶಶಿಕಲಾ ಅವರ ನಡುವಲ್ಲಿ ಸ್ವಲ್ಪ ದಿನ ಅಂತರ ಸೃಷ್ಟಿಯಾಗಿತ್ತು.
ಆಸ್ಪತ್ರೆ ಸೇರುವ ಮುನ್ನ ತಳ್ಳಿ ಕೆಡವಲಾಗಿತ್ತಾ?
"ಆಸ್ಪತ್ರೆಗೆ ಸೇರುವ ಮುನ್ನ, ಜಯಾ ನಿವಾಸ ಪೊಯಸ್ ಗಾರ್ಡನ್ ನಲ್ಲಿ ನಡೆದ ಮಾತಿನ ಚಕಮಕಿಯಲ್ಲಿ ಕೆಲವರು ಜಯಲಲಿತಾ ಅವರನ್ನು ತಳ್ಳಿ ಬೀಳಿಸಿದ್ದರು. ಆ ನಂತರ ಅವರಿಗೆ ಪ್ರಜ್ಞೆ ತಪ್ಪಿತ್ತು" ಎಂದು ತಮಿಳುನಾಡು ವಿಧಾನಸಭೆಯ ಮಾಜಿ ಸ್ಪೀಕರ್ ಪಿ.ಎಚ್.ಪಾಂಡ್ಯನ್ ಆರೋಪಿಸಿ, ಈ ಕುರಿತು ತನಿಖೆಯಾಗಬೇಕು ಎಂದಿದ್ದರು. ಈ ಆರೋಪ ಸತ್ಯವೋ, ಸುಳ್ಳೋ ಎಂಬುದು ಇಂದಿಗೂ ಪ್ರಶ್ನೆಯಾಗಿಯೇ ಇದೆ.
ಜಯಾ ಸಾವಿನ ಲಾಭ ಪಡೆಯುತ್ತಿದ್ದವರು ಯಾರು?
ಜಯಾ ಅವರ ಸಾವಿಗೆ ಕೆಲವರ ಅಧಿಕಾರ ದಾಹವೂ ಕಾರಣ ಎಂದು ಸಹ ಪಾಂಡ್ಯನ್ ದೂರಿದ್ದರು. ಜಯಲಲಿತಾ ಅವರು ಸಾವಿಗೀಡಾದ 20 ದಿನಗಳಲ್ಲೇ ಎಐಎಡಿಎಂಕೆ ಪಕ್ಷದ ಎಲ್ಲ ನಾಯಕರೂ 'ಶಶಿಕಲಾ ನಟರಾಜನ್' ಅವರೇ ನಮ್ಮ ಪಕ್ಷದ ಮುಖ್ಯಸ್ಥೆ ಎಂದು ಹೇಳುವಂತೆ 'ಮಾಡಲಾಗಿತ್ತು!' ಜಯಲಲಿತಾ ಬದುಕಿದ್ದಾಗ, ನಾನ್ಯಾವತ್ತೂ ರಾಜಕೀಯಕ್ಕೆ ಬರುವುದಿಲ್ಲ ಎಂದು ಆಣೆ ಮಾಡಿದ್ದ ಶಶಿಕಲಾ, ಜಯಾ ಅವರ ಸಾವಿನ ನಂತರ ಕೂಡಲೇ ರಾಜಕೀಯ ಪ್ರವೇಶಿಸಿ, ಮಾತು ಮುರಿದಿದ್ದರು.
ಜಯಾ ಮುಖದ ಮೇಲೆ ಸಂಶಯಾಸ್ಪದ ಕಲೆಗಳು!
ಜಯಾ ಅವರು ಅಸುನೀಗಿದ ನಂತರ ಆಕೆಯ ದೇಹವನ್ನು ಪೋಯಸ್ ಗಾರ್ಡನ್ನಿನ ಅವರ ಮನೆಯ ಮುಂದೆ ಸಾರ್ವಜನಿಕ ದರ್ಶನಕ್ಕಾಗಿ ಇಡಲಾಗಿತ್ತು. ಆ ಸಂದರ್ಭದಲ್ಲಿ ಆಕೆಯ ಕೆನ್ನೆ ಮತ್ತು ಹುಬ್ಬಿನ ಬಳಿ ಕೆಲವು ಸಣ್ಣ ಪುಟ್ಟ ಗಾಯದ ಗುರುತುಗಳನ್ನು ಕಂಡವರಿದ್ದಾರೆ. ಆದರೆ ಈ ಕುರಿತು ವೈದ್ಯರು ಮಾತ್ರ ಯಾವ ಉತ್ತರವನ್ನೂ ನೀಡುತ್ತಿಲ್ಲ.
ಖಾಲಿ ಹಾಳೆಯ ಮೇಲೆ ಸಹಿ!
ಜಯಲಲಿತಾ ಸಾಯುತ್ತಿದ್ದಂತೆಯೇ, ಶಶಿಕಲಾ ಅವರು ತಮ್ಮ ಪಕ್ಷದ ಎಲ್ಲಾ ನಾಯಕರ ಬಳಿ ಖಾಲಿ ಹಾಳೆಯ ಮೇಲೆ ಸಹಿ ಮಾಡಿಸಿಕೊಂಡಿದ್ದಾರೆ ಎಂದೂ ಆಪ್ತಮೂಲಗಳು ವರದಿಮಾಡಿದ್ದವು. ಜಯಾ ಸಾವಿನ ನಂತರ, ಮಧ್ಯರಾತ್ರಿಯಲ್ಲೇ ಈ ಕಾರ್ಯ ನಡೆದಿತ್ತು. ಈ ಖಾಲಿ ಹಾಳೆಗಳನ್ನು ನಂತರ ಶಶಿಕಲಾ ಯಾತಕ್ಕಾಗಿ ಬಳಸಿಕೊಂಡರು, ಅಥವಾ ಇನ್ನುಮುಂದೆ ಅವನ್ನು ಯಾತಕ್ಕಾಗಿ ಬಳಸಿಕೊಳ್ಳುತ್ತಾರೆ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ!
ತಪ್ಪು ಔಷಧಗಳ ಬಳಕೆ?!
ಜಯಲಲಿತಾ ಅವರು ಅನಾರೋಗ್ಯಪೀಡಿತರಾಗಿ ಅಪೊಲೊ ಆಸ್ಪತ್ರೆಗೆ ಸೇರಿದಾಗ, ಅವರಿಗೆ ಇಷ್ಟು ದಿನ ನೀಡುತ್ತಿದ್ದ ಮಧುಮೇಹದ ಔಷದ ತಪ್ಪಾಗಿತ್ತು ಎಂದು ವೈದ್ಯರು ತಿಳಿಸಿದ್ದರು. ಇದೂ ಅವರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ್ದಿರಬಹುದು. ಆದರೆ ಒಂದು ರಾಜ್ಯದ ಮುಖ್ಯಮಂತ್ರಿಗೆ ತಪ್ಪು ಔಷಧ ನೀಡುವ ತಾಕತ್ತು ಇದ್ದಿದ್ದು ಯಾರಿಗೆ ಎಂಬುದೂ ಮತ್ತೆ ನಿಗೂಢವಾಗಿಯೇ ಉಳಿದ ಪ್ರಶ್ನೆ!