ಜಲ್ಲಿಕಟ್ಟು: ಮದುರೈನ ಅಲಂಗನಲ್ಲೂರಿನಲ್ಲಿ 500 ಜನರ ಬಂಧನ
ಮದುರೈ, ಜನವರಿ. 17 : ತಮಿಳುನಾಡಿನಲ್ಲಿ ಜಲ್ಲಿಕಟ್ಟು ವಿವಾದ ತಾರಕಕ್ಕೇರಿದೆ. ಸುಪ್ರೀಂ ಆದೇಶದ ವಿರುದ್ಧ ತಮಿಳುನಾಡಿನಾದ್ಯಂತ ಪ್ರತಿಭಟನೆಗಳು ಜೋರಾಗಿಯೇ ನಡೆದಿವೆ.
ಇನ್ನು ಮದುರೈನ ಅಲಂಗನಲ್ಲೂರಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಸುಮಾರು 500 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸುಪ್ರೀಂಕೋರ್ಟ್ ಆದೇಶ ಉಲ್ಲಂಘಿಸಿ ಅಲಂಗನಲ್ಲೂರಿನಲ್ಲಿ ಜಲ್ಲಿಕಟ್ಟು ಸ್ಪರ್ಧೆ ಆಯೋಜಿಸಲು ಸಿದ್ಧತೆ ನಡೆಸಲಾಗಿದೆ ಎಂದು ವರದಿಯಾಗಿತ್ತು.[ಜಲ್ಲಿಕಟ್ಟು ,ಅಪಾಯಕಾರಿ ರೋಮಾಂಚನಕಾರಿ : ಟ್ವೀಟ್ಸ್]
ಇದರಿಂದ ಅಲಂಗನಲ್ಲೂರಿನಲ್ಲಿ ಸೋಮವಾರ ಭಾರಿ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಜಲ್ಲಿಕಟ್ಟಿಗೆ ಪ್ರಸಿದ್ಧಿಯಾಗಿರುವ ಅಲಂಗನಲ್ಲೂರಿನಲ್ಲಿ ನಡೆಯಬಹುದು ಎಂದು ರಾಜ್ಯದ ವಿವಿಧ ಭಾಗದಿಂದ ನೂರಾರು ಯುವಕರು ಗ್ರಾಮಕ್ಕೆ ಬಂದಿದ್ದರು. ಅಪಾರ ಸಂಖ್ಯೆಯಲ್ಲಿ ಜನ ಸೇರಿದ್ದರಿಂದ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು.
ಅಹಿತಕರ ಘಟನೆ ನಡೆಯಬುಹುದು ಎಂದು ಅರಿತ ಪೊಲೀಸರು ಸುಮಾರು 500 ಜನರನ್ನು ಬಂಧಿಸಿದ್ದಾರೆ. ಕಳೆದ ವರ್ಷ ಇದೇ ಅಲಂಗನಲ್ಲೂರಿನಲ್ಲಿ ಜಲ್ಲಿಕಟ್ಟು ಆಯೋಜಿಸಲಾಗಿತ್ತು.[ಜಲ್ಲಿಕಟ್ಟು ನಿಷೇಧ ರದ್ದುಗೊಳಿಸಲು ಕೇಂದ್ರ ಸರ್ಕಾರ ಸಮ್ಮತಿ]
ಈ ಗ್ರಾಮ ಜಲ್ಲಿಕಟ್ಟಿಗೆ ಹೆಸರು ವಾಸಿಯಾಗಿರುವುದರಿಂದ ಇಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಇದರಿಂದ ಅಂಗಡಿ ಮುಗ್ಗಟ್ಟುಗಳು ಸಂಪೂರ್ಣವಾಗಿ ಬಂದ್ ಆಗಿದ್ದು. ಮನೆ ಮತ್ತು ಅಂಗಡಿಗಳ ಮೇಲೆ ಕಪ್ಪು ಬಾವುಟ ನೆಟ್ಟಿದ್ದಾರೆ.