ನಟ ಸೂರ್ಯ, ಜ್ಯೋತಿಕಾ ವಿರುದ್ಧ ಎಫ್ಐಆರ್ ದಾಖಲಿಸಲು ಕೋರ್ಟ್ ಆದೇಶ
ಚೆನ್ನೈ, ಮೇ 05: ತಮಿಳು, ತೆಲುಗು ಕನ್ನಡ ಸೇರಿದಂತೆ ಹಿಂದಿ ಪ್ರೇಕ್ಷಕರ ಜನ ಮೆಚ್ಚುಗೆ ಪಡದಿದ್ದ ಜೈ ಬೀಮ್ ಚಿತ್ರದಲ್ಲಿ ವನ್ನಿಯಾರ್ ಸಮುದಾಯವನ್ನು ಅವಹೇಳನ ಮಾಡಲಾಗಿದೆ ಎಂಬ ಆರೋಪವನ್ನು ಎದುರಿಸುತ್ತಿರುವ ನಟ ಸೂರ್ಯ ಅವರ ಪತ್ನಿ ನಟಿ ಜ್ಯೋತಿಕಾ ಹಾಗೂ ಜೈ ಬೀಮ್ ಚಿತ್ರ ನಿರ್ದೇಶಕ ಟಿಜೆ ಜ್ಞಾನವೇಲ್ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಚೆನ್ನೈ ನ್ಯಾಯಾಲಯವು ಪೋಲಿಸರಿಗೆ ಆದೇಶ ಹೊರಡಿಸಿದೆ.
ಆದಿವಾಸಿಯ ರುದ್ರ ವನ್ನಿಯಾರ್ ಎಂಬ ಸಮೂದಾಯವು ಜೈ ಬೀಮ್ ಚಿತ್ರದ ವಿರುದ್ಧ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು. ತಮ್ಮ ಸಮೂದಾಯದ ಜನರನ್ನು ಕೀಳಾಗಿ ಹಾಗೂ ಕಳಪೆಯಾಗಿ ಚಿತ್ರದಲ್ಲಿ ತೋರಿಸಲಾಗಿದೆ. ಸಮುದಾಯಗಳ ನಡುವೆ ಕೋಮುಗಲಭೆಯನ್ನು ಪ್ರಚೋದಿಸುವ ಗುಪ್ತ ಉದ್ದೇಶವನ್ನು ಹೊಂದಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿತ್ತು.
ಚಿತ್ರ ಬಿಡುಗಡೆಯಾಗಿ ಒಂದು ತಿಂಗಳ ನಂತರ ಚೆನ್ನೈ ನಗರದ ಸೈದಾಪೇಟ್ ನ್ಯಾಯಾಲಯದಲ್ಲಿ ನಟ ಸೂರ್ಯ ಹಾಗೂ ಚಿತ್ರ ನಿರ್ದೇಶಕನ ವಿರುದ್ಧ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿ ಪುರಸ್ಕರಿಸಿದ್ದ ನ್ಯಾಯಾಲಯವು ನಟ ಸೂರ್ಯ, ಜ್ಯೋತಿಕಾ ಹಾಗೂ ನಿರ್ದೇಶಕನಿಗೆ ಕೋರ್ಟ್ಗೆ ಹಾಜರಾಗುವಂತೆ ಕಳೆದ ಏಪ್ರಿಲ್ 29ರಂದು ನೋಟಿಸ್ ಜಾರಿಮಾಡಿತ್ತು. ಆದರೆ, ನ್ಯಾಯಾಲಯದ ವಿಚಾರಣೆಗೆ ಗೈರಾಗಿದ್ದರು. ಬಳಿಕ ನ್ಯಾಯಾಲಯವು ಈ ಆರೋಪಿಗಳ ವಿರುದ್ಧ ದೂರು ದಾಖಲಿಸುವಂತೆ ಪೊಲೀಸರಿಗೆ ಸೂಚನೆ ನೀಡಿದೆ. ಈ ಪ್ರಕರಣ ಸಂಬಂಧ ಪೋಲಿಸರು ಹೆಚ್ಚಿನ ವಿಚಾರಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಅರ್ಜಿದಾರರ ವಾದವನ್ನು ಒಪ್ಪಿಕೊಂಡಿರು ನ್ಯಾಯಾಲಯವು ಆರೋಪಿಗಳೆಂದು ಹೆಸರಿಸಲಾದ ನಟ ಸೂರ್ಯ ಸೇರಿ ಮೂವರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಚೆನ್ನೈ ಪೊಲೀಸರಿಗೆ ಸೂಚಿಸಿದೆ. ದೂರಿನಲ್ಲಿ "ಕೆಲವು ಗುರುತಿಸಬಹುದಾದ ಅಪರಾಧವನ್ನು ಬಹಿರಂಗಪಡಿಸಲಾಗಿದೆ" ಎಂದು ನ್ಯಾಯಾಲಯವು ಗಮನಿಸಿದೆ ಮತ್ತು ಕಾನೂನಿನ ಪ್ರಕಾರ ಎಫ್ಐಆರ್ ದಾಖಲಿಸಿ ಪ್ರಕರಣದ ತನಿಖೆ ನಡೆಸುವಂತೆ ನ್ಯಾಯಾಲಯವು ದೂರನ್ನು ವೆಲಾಚೇರಿಯ ಪೊಲೀಸ್ ಇನ್ಸ್ಪೆಕ್ಟರ್ಗೆ ರವಾನಿಸಿದೆ. ಈ ಪ್ರಕರಣ ಕುರಿತಂತೆ ಮೇ 20 ರಂದು ಮತ್ತೆ ಪ್ರಕರಣದ ಮುಂದಿನ ವಿಚಾರಣೆ ನಡೆಯಲಿದೆ.
ಕಳೆದ ವರ್ಷ ಜೈ ಭೀಮ್ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಪಟ್ಟಾಲಿ ಮಕ್ಕಳ್ ಕಚ್ಚಿ (ಪಿಎಂಕೆ) ಯ ಅನ್ಬುಮಣಿ ರಾಮದಾಸ್ ಅವರು ಚಲನಚಿತ್ರವನ್ನು "ವನ್ನಿಯಾರ್ ಸಮುದಾಯದ ಮೇಲಿನ ಯೋಜಿತ ದಾಳಿ" ಎಂದು ಕರೆದಾಗ ವಿವಾದವು ಸ್ಫೋಟಗೊಂಡಿತು. ಒಬ್ಬ ಕ್ರೂರ ಸಬ್ಇನ್ಸ್ ಪೆಕ್ಟರ್ ಪಾತ್ರವನ್ನು ಪ್ರತಿನಿಧಿಸಿರುವ ರೀತಿಯನ್ನು ಪ್ರಶ್ನಿಸಿದ ಅವರು, ಇದು ವನ್ನಿಯಾರ್ ಸಮುದಾಯಕ್ಕೆ ಮಾಡಿದ ಅವಮಾನ ಎಂದು ಆರೋಪಿಸಿ ಚಿತ್ರವನ್ನು ಬ್ಯಾನ್ ಮಾಡುವಂತೆ ಆಕ್ರೋಶ ವ್ಯಕ್ತಪಡಿಸಿದ್ದರು.