ಕಪ್ಪು ಹಣದೊಂದಿಗೆ ಸಿಕ್ಕಿಬಿದ್ದ ಟಿಟಿಡಿ ಸದಸ್ಯ ಕಿಕ್ಡ್ ಔಟ್!
ಚೆನ್ನೈ, ಡಿಸೆಂಬರ್ 10: ವಾಹನದಲ್ಲಿ ಸಾಗಿಸುತ್ತಿದ್ದ ಇಪ್ಪತ್ನಾಲ್ಕು ಕೋಟಿ ರುಪಾಯಿಯನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಶನಿವಾರ ವೇಲೂರಿನಲ್ಲಿ ಪತ್ತೆ ಹಚ್ಚಿದ್ದಾರೆ. ಲೆಕ್ಕಕ್ಕೆ ನೀಡದ, ಈ ಎಲ್ಲ ಹೊಸ ನೋಟುಗಳ ಹಣವು ಶೇಖರ್ ರೆಡ್ಡಿ ಎಂಬುವರಿಗೆ ಸೇರಿದ್ದು ಎಂದು ಆರೋಪಿಸಲಾಗಿದೆ.
ಈಚೆಗೆ ಚೆನ್ನೈನಲ್ಲಿ ಮೂವರು ವ್ಯಾಪಾರಸ್ಥರ ಮನೆ-ಕಚೇರಿ ಮೇಲೆ ಐಟಿ ದಾಳಿ ನಡೆದಿತ್ತು. ಆ ಮೂವರಲ್ಲಿ ಶೇಖರ್ ರೆಡ್ಡಿ ಕೂಡ ಒಬ್ಬರು. ಚೆನ್ನೈನ ಎಂಟು ಕಡೆ ಎರಡು ದಿನಗಳ ಕಾಲ ನಡೆದ ದಾಳಿಯಲ್ಲಿ 170 ಕೋಟಿ ನಗದು ಹಾಗೂ 130 ಕೆ.ಜಿ. ಚಿನ್ನ ಸಿಕ್ಕಿತ್ತು. ಈ ದಾಳಿಗಳಾದ ನಂತರ ತಿರುಮತಿ ತಿರುಮಲ ದೇವಸ್ಥಾನ ಮಂಡಳಿ ಸದಸ್ಯತ್ವ ಸ್ಥಾನದಿಂದ ಶೇಖರ್ ರೆಡ್ಡಿ ಅವರನ್ನು ಕಿತ್ತುಹಾಕಲಾಗಿದೆ.[ಭರವಸೆ ಕೊಡ್ತೀನಿ ಒಬ್ರನ್ನೂ ಬಿಡಲ್ಲ : ನರೇಂದ್ರ ಮೋದಿ]
ನೋಟು ರದ್ದು ನಿರ್ಧಾರದ ನಂತರ ಶೇಖರ್ ರೆಡ್ಡಿ ಮತ್ತಿಬ್ಬರು ವ್ಯಾಪಾರಿಗಳು ಹಣ ಬದಲಾವಣೆ ದಂಧೆಯಲ್ಲಿ ತೊಡಗಿಕೊಂಡಿದ್ದರು. ದೇಶದ ಇತರೆಡೆ ನಡೆದ ಆದಾಯ ತೆರಿಗೆ ಇಲಾಖೆ ದಾಳಿಗಳಿಗಿಂತ ಚೆನ್ನೈನಲ್ಲಿ ಅತಿ ಹೆಚ್ಚಿನ ಮೊತ್ತ ದೊರೆತಿದೆ. ಅಧಿಕಾರಿಗಳು ಅನುಮಾನ ಪಡುವಂತೆ, ಈ ಮೂವರು ಅದಾಗಲೇ ಹಣ ಬದಲಾವಣೆ ಮಾಡಿದ್ದರು. ನೋಟು ಅಪನಗದೀಕರಣದ ನಂತರ ಚೆನ್ನೈನಲ್ಲಿ ಸಿಕ್ಕಿದ್ದು ಅತಿ ಹೆಚ್ಚಿನ ಮೊತ್ತ ಇದಾಗಿತ್ತು.