ಪಾಲ್ ದಿನಕರನ್, ಜೀಸಸ್ ಕಾಲ್ಸ್ ಮೇಲೆ ಐಟಿ ದಾಳಿ, ದಕ್ಕಿದ್ದೆಷ್ಟು?
ಚೆನ್ನೈ, ಜನವರಿ 25: ಕ್ರೈಸ್ತ ಸುವಾರ್ತಾಬೋಧಕ, ಜೀಸಸ್ ಕಾಲ್ಸ್ ಮಿಷನರಿಯ ಡಾ. ಪಾಲ್ ದಿನಕರನ್ ಅವರ ಮನೆ, ಕಚೇರಿ ಮೇಲೆ ಕಳೆದ ಕೆಲವು ದಿನಗಳಿಂದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ದಾಳಿ ವೇಳೆ ಅಪಾರ ಪ್ರಮಾಣದ ಅಕ್ರಮ ಆಸ್ತಿ ಜಪ್ತಿ ಮಾಡಲಾಗಿದೆ.
ತೆರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೀಸಸ್ ಕಾಲ್ಸ್ ಮಿಷನರಿಯ ಪ್ರಧಾನ ಕಚೇರಿಯಾದ ಚೆನ್ನೈ ಮತ್ತು ಕೊಯಮತ್ತೂರು ಸೇರಿದಂತೆ ತಮಿಳುನಾಡಿನ 28 ಸ್ಥಳಗಳಲ್ಲಿ ಆದಾಯ ತೆರಿಗೆ ಇಲಾಖೆಯು ಏಕಕಾಲದಲ್ಲಿ ಶೋಧ ಕಾರ್ಯ ನಡೆಸಲಾಗಿತ್ತು.
ದಿನಕರನ್ ಕುಟುಂಬದ ಒಡೆತನದ ಕರುಣಾ ಕ್ರಿಶ್ಚಿಯನ್ ಶಾಲೆ ಮತ್ತು ಕಾರುಣ್ಯ ವಿಶ್ವವಿದ್ಯಾಲಯಕ್ಕೆ ವಿದೇಶಗಳಿಂದ ಅಪಾರ ಪ್ರಮಾಣದಲ್ಲಿ ದೇಣಿಗೆ ಸಿಗುತ್ತಿದ್ದು, ತೆರಿಗೆ ಕಟ್ಟದೆ ವಂಚಿಸಲಾಗಿದೆ ಎಂಬ ಮಾಹಿತಿ ಮೇರೆಗೆ ಐಟಿ ಇಲಾಖೆ ದಾಳಿ ನಡೆಸಿತ್ತು.
ದಾಳಿ ಖಂಡಿಸಿದ್ದ ಕ್ರೈಸ್ತ ಸಮುದಾಯ
ಜೀಸಸ್ ಕಾಲ್ಸ್ ಮಿಷನರಿ ದೇಶಾದ್ಯಂತ ಕೆಲ ದಶಕಗಳಿಂದ ಕಾರ್ಯನಿರ್ವಹಿಸುತ್ತಿದೆ. ಜೀಸಸ್ ಕಾಲ್ಸ್ ಮಿಷನರಿ ಅಥವಾ ದಿನಕರನ್ ಕುಟುಂಬ ನಡೆಸುತ್ತಿರುವ ಕಾಲೇಜುಗಳ ವಿರುದ್ಧ ಈವರೆಗೆ ಒಂದೇ ಒಂದು ದೂರು ದಾಖಲಾಗಿಲ್ಲ ಇದು ರಾಜಕೀಯ ಪ್ರೇರಿತ ದಾಳಿ, ಕೇಂದ್ರ ಸರ್ಕಾರದ ಧಾರ್ಮಿಕ ರಾಜಕೀಯಕ್ಕೆ ರಾಜ್ಯ ಸರ್ಕಾರವೂ ಬೆಂಬಲ ನೀಡುತ್ತಿದೆ ಎಂದು ಕ್ರೈಸ್ತ ಸಮುದಾಯದ ಹಲವಾರು ಮಂದಿ ಕಿಡಿಕಾರಿದ್ದರು. ತಮಿಳುನಾಡಿನಲ್ಲಿ ಮುಂಬರುವ ಚುನಾವಣೆಯ ಹಿನ್ನೆಲೆಯಲ್ಲಿ, ಅನೇಕ ಕ್ರಿಶ್ಚಿಯನ್ ನಾಯಕರನ್ನು ಗುರಿಯಾಗಿಸಿಕೊಂಡು ಇಂಥ ದಾಳಿ ಮಾಡಲಾಗುತ್ತಿದೆ ಎಂದಿದ್ದರು.
ದಾಳಿಯಿಂದ ಸಿಕ್ಕ ಮೊತ್ತವೆಷ್ಟು?
ತಮಿಳುನಾಡಿನ ವಿವಿಧೆಡೆ ಕಳೆದ ನಾಲ್ಕೈದು ದಿನಗಳಿಂದ ನಡೆದ ಐಟಿ ದಾಳಿಯಲ್ಲಿ ಸಿಕ್ಕ ಅಕ್ರಮ ಆಸ್ತಿಯ ಮೌಲ್ಯ ಸುಮಾರು 120 ಕೋಟಿ ರುಗೂ ಅಧಿಕ ಎಂದು ತಿಳಿದು ಬಂದಿದೆ. 4.5 ಕೆ.ಜಿ ಮೌಲ್ಯದ ಚಿನ್ನಾಭರಣವೂ ಪತ್ತೆಯಾಗಿದೆ. ಪಾಲ್ ದಿನಕರನ್ ಮನೆಯಲ್ಲೇ ಚಿನ್ನ ಸಿಕ್ಕಿದೆ. ತಮಿಳುನಾಡಿನ 30ಕ್ಕೂ ಕಡೆಗಳಲ್ಲಿರುವ ಕಚೇರಿ, ಜೀಸಸ್ ಕಾಲ್ ಮಿನಿಷ್ಟ್ರಿ, ಕಾರುಣ್ಯ ಶಾಲೆಗಳಲ್ಲಿ ಲಭ್ಯವಾದ ಅಕ್ರಮ ಆಸ್ತಿ ಮೊತ್ತ 120ಕೋಟಿ ರು ದಾಟುತ್ತದೆ ಎಂದು ಅಂದಾಜಿಸಲಾಗಿದೆ.
ಬಹು ಜನಪ್ರಿಯ ಸುವಾರ್ತೆ ಬೋಧಕ ಪಾಲ್
ಸುವಾರ್ತೆ ಬೋಧಕ ಪಾಲ್ ಅವರು ಬಹು ಜನಪ್ರಿಯರಾಗಿದ್ದು, ಭಾರತದ ವಿವಿಧೆಡೆ ಜೀಸಸ್ ಕಾಲ್ ಕಚೇರಿ ಹೊಂದಿದ್ದಾರೆ. ಟಿವಿ ಶೋಗಳಲ್ಲಿ ಮತ ಪ್ರಚಾರ, ಕ್ರಿಸ್ತನ ಸಂದೇಶ ಸಾರುತ್ತಾರೆ. ಭಾರತದಲ್ಲಷ್ಟೇ ಅಲ್ಲದೆ, ಇಸ್ರೇಲ್, ಸಿಂಗಪುರ, ಯುಕೆ ಹಾಗೂ ಯುಎಸ್ಎಯ ವಿವಿಧೆಡೆ ಅವರಿಗೆ ಹಿಂಬಾಲಕರಿದ್ದಾರೆ. ಅನೇಕ ದೇಶಗಳಲ್ಲಿ ಕಚೇರಿಗಳನ್ನು ಹೊಂದಿದ್ದಾರೆ.
200 ಬ್ಯಾಂಕ್ ಖಾತೆಗಳನ್ನು ಹೊಂದಿರುವ ಪಾಲ್
ಪಾಲ್ ದಿನಕರನ್ ಹಾಗೂ ಜೀಸಸ್ ಕಾಲ್ಸ್ ಸುಮಾರು 200 ಬ್ಯಾಂಕ್ ಖಾತೆಗಳನ್ನು ಹೊಂದಿದ್ದು, ಎಲ್ಲದರ ವಿವರ ಪಡೆಯಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು. ಕ್ರೈಸ್ತ ಮತ ಪ್ರಚಾರಕರಾಗಿದ್ದ ದೊರೈಸ್ವಾಮಿ ಜೆಫ್ರಿ ಸ್ಯಾಮುಯಲ್ ದಿನಕರನ್ ಅವರ ಪುತ್ರ ಪಾಲ್ ದಿನಕರನ್ (58) ಅವರು ಅಪ್ಪನ ಹಾದಿಯಲ್ಲೇ ಸಾಗಿ, ಕಾರುಣ್ಯ ಕಾಲೇಜು ವಿಸ್ತರಿಸಿದರು. ರೈನ್ ಬೋ ಟಿವಿ ಸೇರಿದಂತೆ ವಿವಿಧ ರೀತಿಯಲ್ಲಿ ಮತ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡರು. ಬಿಎಸ್ ಸಿ ಪದವಿ, ಪಿಎಚ್ ಡಿ (ಮಾರ್ಕೆಟಿಂಗ್) ಪಡೆದಿರುವ ಪಾಲ್ ಅವರು ತಮಿಳುನಾಡಿನಲ್ಲಿ ಪ್ರಭಾವಿಯಾಗಿ ಬೆಳೆದರು.