ಐಟಿ ದಾಳಿ ನಮಗೆ ಈ ಸಮಯದಲ್ಲಿ ಒಳ್ಳೆ ಪ್ರಚಾರ ಕೊಟ್ಟಿದೆ; ಉದಯನಿಧಿ
ಚೆನ್ನೈ, ಏಪ್ರಿಲ್ 3: ಆದಾಯ ತೆರಿಗೆ ಇಲಾಖೆ ಶುಕ್ರವಾರ ನಡೆಸಿರುವ ದಾಳಿ, ಮುಂದಿನ ವಾರ ನಡೆಯಲಿರುವ ಚುನಾವಣೆಗೆ ಡಿಎಂಕೆಗೆ ಒಳ್ಳೆ ಪ್ರಚಾರ ನೀಡಿದೆ ಎಂದು ಎಂ.ಕೆ. ಸ್ಟಾಲಿನ್ ಪುತ್ರ, ಡಿಎಂಕೆ ಯುವ ಘಟಕದ ಅಧ್ಯಕ್ಷ ಉದಯನಿಧಿ ಸ್ಟಾಲಿನ್ ವ್ಯಂಗ್ಯವಾಗಿ ಹೇಳಿದ್ದಾರೆ.
ಶುಕ್ರವಾರ ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಅವರ ಅಳಿಯನ ಮನೆ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದರು. ಶಬರೀಶನ್ ಒಡೆತನದ ನಾಲ್ಕು ಕಡೆಗಳಲ್ಲಿ ಶುಕ್ರವಾರ ಬೆಳಿಗ್ಗೆ ಪರಿಶೀಲನೆ ನಡೆಸಲಾಗಿತ್ತು. ಚುನಾವಣೆಗೆ ಕೆಲವೇ ದಿನಗಳ ಮುನ್ನ ನಡೆದಿರುವ ಈ ದಾಳಿ ಬಗ್ಗೆ ಪ್ರತಿಕ್ರಿಯಿಸಿ, ಯಾವ ಡಿಎಂಕೆ ನಾಯಕರ ಮನೆ ಮೇಲೆ ದಾಳಿ ನಡೆಸಿದರೂ ಅಧಿಕಾರಿಗಳಿಗೆ ಏನೂ ಸಿಗುವುದಿಲ್ಲ, ಈ ದಾಳಿಯಿಂದ ನಮ್ಮನ್ನು ಚುನಾವಣೆಯಲ್ಲಿ ಸೋಲಿಸಲು ಸಾಧ್ಯವಾಗುವುದಿಲ್ಲ ಎಂದು ಡಿಎಂಕೆ ಪ್ರಧಾನ ಕಾರ್ಯದರ್ಶಿ ದೊರೈ ಮುರುಗನ್ ಹೇಳಿದ್ದರು.
ತಮಿಳುನಾಡು: ಎಂಕೆ ಸ್ಟಾಲಿನ್ ಅಳಿಯನ ಮನೆ ಮೇಲೆ ಐಟಿ ದಾಳಿ
ಆದರೆ ದಾಳಿಯಲ್ಲಿ ಅಧಿಕಾರಿಗಳು ಬರಿಗೈನಿಂದ ಹಿಂತಿರುಗಿದ್ದಾರೆ. ಎಲ್ಲದಕ್ಕೂ ಸೂಕ್ತ ಲೆಕ್ಕಪತ್ರ ದೊರೆತಿದೆ. ಐಟಿ ದಾಳಿ ಡಿಎಂಕೆಗೆ ಉಚಿತ ಜಾಹೀರಾತು ನೀಡಿದೆ. ಪಕ್ಷವನ್ನು ಯಾರಿಂದಲೂ ಅಲುಗಾಡಿಸಲು ಸಾಧ್ಯವಿಲ್ಲ ಎಂದು ಉದಯನಿಧಿ ಹೇಳಿದ್ದಾರೆ.
ಡಿಎಂಕೆ ಕೌಟುಂಬಿಕ ರಾಜಕಾರಣ ಮಾಡುತ್ತಿದೆ ಎಂಬ ಮೋದಿ ಆರೋಪಕ್ಕೆ ಉತ್ತರಿಸಿದ ಅವರು, "ಚೆಪೌಕ್-ತಿರುವಲ್ಲಿಕೆನ್ನಿ ಜನರು ಈ ಬಗ್ಗೆ ತೀರ್ಮಾನ ಮಾಡಲಿ. ಅತಿ ಹೆಚ್ಚಿನ ಸಂಖ್ಯೆಯಲ್ಲಿ ನಾವು ಗೆಲುವು ಸಾಧಿಸಲಿದ್ದೇವೆ" ಎಂದು ಆತ್ಮವಿಶ್ವಾಸದಿಂದ ನುಡಿದಿದ್ದಾರೆ. ಮೋದಿ ಹಾಗೂ ಅಮಿತ್ ಶಾ ನನ್ನನ್ನು ಗುರಿಯಾಗಿಸಿಕೊಂಡಿದ್ದಾರೆ. ಹೀಗಾಗಿ ನಾನೂ ಅವರನ್ನು ಗುರಿಯಾಗಿಟ್ಟುಕೊಂಡು ಮಾತನಾಡುತ್ತಿದ್ದೇನೆ ಎಂದಿದ್ದಾರೆ.
ಶುಕ್ರವಾರ ನಡೆದಿದ್ದ ಐಟಿ ದಾಳಿಗೆ ಪ್ರತಿಕ್ರಿಯಿಸಿದ್ದ ಉದಯನಿಧಿ, ಅಮಿತ್ ಶಾ ಪುತ್ರ ಜಯ್ ಶಾ ಆಸ್ತಿ ಏರಿಕೆ ಕುರಿತು ಉಲ್ಲೇಖಿಸಿದ್ದರು. 15 ಸಾವಿರದಿಂದ 120 ಕೋಟಿಗೆ ಹೇಗೆ ಅವರ ಆಸ್ತಿ ಏರಿಕೆಯಾಯಿತು ಎಂದು ಪ್ರಶ್ನಿಸಿದ್ದರು. ಡಿಎಂಕೆ ಮೇಲಿನ ಈ ದಾಳಿ ರಾಜಕೀಯ ಪ್ರೇರಿತ ಎಂದು ಆರೋಪಿಸಿದ್ದರು.