ಐಪಿಎಲ್ ಮೋಸದಾಟ ಭೇದಿಸಿದ್ದ ಐಪಿಎಸ್ ಅಧಿಕಾರಿ ಖುಲಾಸೆ
ಚೆನ್ನೈ, ಡಿಸೆಂಬರ್ 21: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ (ಐಪಿಎಲ್) ನಡೆದ ಬೆಟ್ಟಿಂಗ್ ಹಗರಣವನ್ನು ಭೇದಿಸಿದ್ದ ಐಪಿಎಸ್ ಅಧಿಕಾರಿ ಸಂಪತ್ ಕುಮಾರ್ ವಿರುದ್ಧ ಮಾಡಲಾಗಿದ್ದ ಆರೋಪಗಳನ್ನು ಚೆನ್ನೈನ ವಿಶೇಷ ನ್ಯಾಯಾಲಯವೊಂದು ವಜಾಗೊಳಿಸಿದೆ.
ಸಂಪತ್ ಕುಮಾರ್ ವಿರುದ್ಧದ ಆರೋಪಗಳ ಕುರಿತು ನಡೆದಿದ್ದ ಇಲಾಖಾ ತನಿಖೆಯು ಒಂದು ವರ್ಷದ ಹಿಂದೆ ಈ ಎಲ್ಲ ಆರೋಪಗಳಿಂದ ಅವರನ್ನು ಖುಲಾಸೆಗೊಳಿಸಿತ್ತು. ಬಳಿಕ ಅವರನ್ನು ಪೊಲೀಸ್ ಇಲಾಖೆಗೆ ಮರಳಿ ಸೇರಿಸಿಕೊಳ್ಳಲಾಗಿತ್ತು.
ಐಪಿಎಲ್ ಬೆಟ್ಟಿಂಗ್ ಮಾಡಿದ್ದು ನಿಜ: ತಪ್ಪೊಪ್ಪಿಕೊಂಡ ಅರ್ಬಾಜ್ ಖಾನ್
ತಮಿಳುನಾಡಿನ ಕ್ಯೂ ಬ್ರ್ಯಾಂಚ್ನ ಪೊಲೀಸ್ ವರಿಷ್ಠಾಧಿಕಾರಿಯಾಗಿರುವ ಸಂಪತ್ ಕುಮಾರ್, 2013ರಲ್ಲಿ ಜಗತ್ತಿನಾದ್ಯಂತ ಐಪಿಎಲ್ ಮಾನ ಹರಾಜುಹಾಕಿದ ಕ್ರಿಕೆಟ್ ಬೆಟ್ಟಿಂಗ್ನ ಜಾಲವನ್ನು ಭೇದಿಸಿದ್ದರು. ಬೆಟ್ಟಿಂಗ್, ಫಿಕ್ಸಿಂಗ್ ಮತ್ತು ವಂಚನೆಯ ಬೃಹತ್ ಮೋಸದಾಟದ ಅಂಶಗಳನ್ನು ಅವರ ತನಿಖೆ ಬಯಲು ಮಾಡಿತ್ತು. ಚೆನ್ನೈ ಸೂಪರ್ ಕಿಂಗ್ಸ್ನ ಮಾಜಿ ಅಧಿಕಾರಿ ಗುರುನಾಥ್ ಮೇಯಪ್ಪನ್ ಮತ್ತು ಅವರ ಅಳಿಯ, ಬಿಸಿಸಿಐ ಮಾಜಿ ಅಧ್ಯಕ್ಷ ಎನ್. ಶ್ರೀನಿವಾಸನ್ ಸೇರಿದಂತೆ ಗಣ್ಯ ವ್ಯಕ್ತಿಗಳು ಇದರಲ್ಲಿ ಭಾಗಿಯಾಗಿರುವುದನ್ನು ಅವರು ಪತ್ತೆಹಚ್ಚಿದ್ದರು.
ತನಿಖೆ ಬಳಿಕ ಆರ್ಎಂ ಲೋಧಾ ಸಮಿತಿಯು ಸಿಎಸ್ಕೆ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳನ್ನು ಎರಡು ವರ್ಷಗಳವರೆಗೆ ನಿಷೇಧಿಸಿತ್ತು.
ಆದರೆ, ಈ ಮೋಸದಾಟದ ಜಾಲವನ್ನು ಬಯಲಿಗೆಳೆದ ಸಂಪತ್ ಕುಮಾರ್ ಅವರ ವಿರುದ್ಧವೇ ಭ್ರಷ್ಟಾಚಾರದ ಆರೋಪ ಹೊರಿಸಲಾಗಿತ್ತು. ಇದರಲ್ಲಿ ಭಾಗಿಯಾದವರ ಹೆಸರನ್ನು ಬಹಿರಂಗಪಡಿಸದಂತೆ ಬುಕ್ಕಿಗಳಿಂದ ತನಿಖಾಧಿಕಾರಿ ಸಂಪತ್ ಕುಮಾರ್ ಲಂಚ ಪಡೆದಿದ್ದಾರೆ ಎಂದು ಅವರ ಮೇಲೆ ಸಿಬಿ-ಸಿಐಡಿ ಪ್ರಕರಣ ದಾಖಲಿಸಿತ್ತು.
ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಜಾಲದ ಮೇಲೆ ಪೊಲೀಸರ ದಾಳಿ
1997ರ ಬ್ಯಾಚ್ನ ಅಧಿಕಾರಿಯಾದ ಸಂಪತ್ ಕುಮಾರ್, ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಪ್ರಕರಣದ ಆರೋಪಿಗಳಿಂದ 60 ಲಕ್ಷ ರೂ. ಲಂಚ ಪಡೆದಿದ್ದಾರೆ. ಈ ಮೂಲಕ 1968ರ ಅಖಿಲ ಭಾರತ ಸೇವೆಗಳ (ನಡತೆ) ನಿಯಮಗಳಲ್ಲಿನ ನಿಯಮ 3ರ ಅಡಿಯಲ್ಲಿನ ಉಪ-ನಿಯಮ (1) ಉಲ್ಲಂಘಿಸಿದ್ದಾರೆ ಎಂದು ಆರೋಪ ದಾಖಲಿಸಲಾಗಿತ್ತು.
2014ರಲ್ಲಿ ಅವರು ಅಮಾನತ್ತಿಗೆ ಒಳಗಾಗಿದ್ದರು. 2018ರಲ್ಲಿ ಅವರ ವಿರುದ್ಧದ ಆರೋಪಗಳನ್ನು ಇಲಾಖೆಯ ತನಿಖಾ ವರದಿ ಖುಲಾಸೆಗೊಳಿಸಿದ್ದರಿಂದ ಮಾರ್ಚ್ನಲ್ಲಿ ಸೇವೆಗೆ ಮರಳಿದ್ದರು. '2013ರಲ್ಲಿ ತನಿಖೆ ವೇಳೆ ನಾನು ಏನು ಹೇಳಿದ್ದೆನೋ ಅದಕ್ಕೆ ಈಗಲೂ ಬದ್ಧನಾಗಿದ್ದೇನೆ. ಈ ಹಗರಣದ ಬಗ್ಗೆ ವಿಶೇಷ ತನಿಖಾ ತಂಡವು ತನಿಖೆ ನಡೆಸಬೇಕು ಎಂದು ಒತ್ತಾಯಿಸುತ್ತೇನೆ' ಎಂದಿದ್ದರು.