Jesus Calls ಮಿಷನರಿಯ ದಿನಕರನ್ ಮೇಲೆ ಐಟಿ ದಾಳಿ
ಚೆನ್ನೈ, ಜನವರಿ 20: ಕ್ರೈಸ್ತ ಸುವಾರ್ತಾಬೋಧಕ, ಜೀಸಸ್ ಕಾಲ್ಸ್ ಮಿಷನರಿಯ ಡಾ. ಪಾಲ್ ದಿನಕರನ್ ಅವರ ಮನೆ, ಕಚೇರಿ ಮೇಲೆ ಬುಧವಾರದಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸುತ್ತಿದ್ದಾರೆ, ಜೀಸಸ್ ಕಾಲ್ಸ್ ಮಿಷನರಿಯ ಪ್ರಧಾನ ಕಚೇರಿಯಾದ ಚೆನ್ನೈ ಮತ್ತು ಕೊಯಮತ್ತೂರು ಸೇರಿದಂತೆ ತಮಿಳುನಾಡಿನ 28 ಸ್ಥಳಗಳಲ್ಲಿ ಆದಾಯ ತೆರಿಗೆ ಇಲಾಖೆಯು ಏಕಕಾಲದಲ್ಲಿ ಶೋಧ ಕಾರ್ಯ ನಡೆಸಿದೆ. ತೆರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ದಾಳಿ ಜಾರಿಯಲ್ಲಿದೆ.
ದಿನಕರನ್ ಕುಟುಂಬದ ಒಡೆತನದ ಕರುಣಾ ಕ್ರಿಶ್ಚಿಯನ್ ಶಾಲೆ ಮತ್ತು ಕಾರುಣ್ಯ ವಿಶ್ವವಿದ್ಯಾಲಯದ ಮೇಲೂ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಆದಾಯ ತೆರಿಗೆ ವಂಚನೆ ಕುರಿತಂತೆ ಆರೋಪಗಳು ಕೇಳಿ ಬಂದಿತ್ತು. ಈ ಕುರಿತಂತೆ ದೂರು ದಾಖಲಾಗಿತ್ತು. ವಿದೇಶಗಳಿಂದ ಅಪಾರ ಪ್ರಮಾಣದಲ್ಲಿ ದೇಣಿಗೆ ಪಡೆದು ತೆರಿಗೆ ಕಟ್ಟದೆ ವಂಚಿಸಲಾಗಿದೆ ಎಂಬ ಮಾಹಿತಿ ಮೇರೆಗೆ ಐಟಿ ಇಲಾಖೆ ದಾಳಿ ನಡೆಸಿದೆ.
ಜೀಸಸ್ ಕಾಲ್ಸ್ ಮಿಷನರಿ ದೇಶಾದ್ಯಂತ ಕೆಲ ದಶಕಗಳಿಂದ ಕಾರ್ಯನಿರ್ವಹಿಸುತ್ತಿದೆ. ಜೀಸಸ್ ಕಾಲ್ಸ್ ಮಿಷನರಿ ಅಥವಾ ದಿನಕರನ್ ಕುಟುಂಬ ನಡೆಸುತ್ತಿರುವ ಕಾಲೇಜುಗಳ ವಿರುದ್ಧ ಈವರೆಗೆ ಒಂದೇ ಒಂದು ದೂರು ದಾಖಲಾಗಿಲ್ಲ ಇದು ರಾಜಕೀಯ ಪ್ರೇರಿತ ದಾಳಿ, ಕೇಂದ್ರ ಸರ್ಕಾರದ ಧಾರ್ಮಿಕ ರಾಜಕೀಯಕ್ಕೆ ರಾಜ್ಯ ಸರ್ಕಾರವೂ ಬೆಂಬಲ ನೀಡುತ್ತಿದೆ ಎಂದು ಹಲವಾರು ಮಂದಿ ಕಿಡಿಕಾರಿದ್ದಾರೆ.
ತಮಿಳುನಾಡಿನಲ್ಲಿ ಮುಂಬರುವ ಚುನಾವಣೆಯ ಹಿನ್ನೆಲೆಯಲ್ಲಿ, ಅನೇಕ ಕ್ರಿಶ್ಚಿಯನ್ ನಾಯಕರನ್ನು ಗುರಿಯಾಗಿಸಿಕೊಂಡು ಇಂಥ ದಾಳಿ, ಬೆದರಿಕೆ ಹಾಕಲಾಗುತ್ತಿದೆ. ಕ್ರೈಸ್ತರು ಡಿಎಂಕೆಗೆ ಮತ ಹಾಕುತ್ತಾರೆ ಎಂಬ ಭಯದಿಂದ ಎಐಎಡಿಎಂಕೆ ಇಂಥ ಕೀಳು ರಾಜಕೀಯ ಮಾಡುತ್ತಿದೆ ಎಂದು ಕ್ರೈಸ್ತ ಸಂಘಟನೆಗಳು ಖಂಡಿಸಿವೆ.