ಐಐಟಿಯಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ: ಪ್ರೊಫೆಸರ್ ಮೇಲೆ ಪೋಷಕರ ಅನುಮಾನ
ಚೆನ್ನೈ, ನವೆಂಬರ್ 15: ಮದ್ರಾಸ್ನ ಐಐಟಿಯಲ್ಲಿ ಕಳೆದ ಶನಿವಾರ ನಡೆದ ವಿದ್ಯಾರ್ಥಿನಿಯ ಆತ್ಮಹತ್ಯೆ ಪ್ರಕರಣ ದೇಶದಾದ್ಯಂತ ತೀವ್ರ ಚರ್ಚೆಗೆ ಒಳಗಾಗಿದೆ.
ಕೇರಳದ ಕೊಲ್ಲಂ ಮೂಲದ ಫಾತಿಮಾ ಲತೀಫ್ ಭಾರತೀಯ ತಂತ್ರಜ್ಞಾನ ಸಂಸ್ಥೆಯ (ಐಐಟಿ-ಎಂ) ಐಚ್ಛಿಕ ಎಂ.ಎ ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿನಿಯಾಗಿದ್ದರು. ಕಳೆದ ವಾರ ಅವರು ತಮ್ಮ ಹಾಸ್ಟೆಲ್ ಕೊಠಡಿಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದು, ಇದು ಆತ್ಮಹತ್ಯೆ ಎಂದು ಹೇಳಲಾಗಿದೆ. ಆದರೆ ಕೊಠಡಿಯಲ್ಲಿ ಆತ್ಮಹತ್ಯೆ ಪತ್ರ ದೊರಕಿಲ್ಲ.
ದೆಹಲಿಯ ಐಐಟಿ ಆವರಣದಲ್ಲಿ ಒಂದೇ ಕುಟುಂಬದ ಮೂವರ ಮೃತದೇಹ ಪತ್ತೆ
ಐಐಟಿ ಪ್ರಾಧ್ಯಾಪಕರ ನಿಂದನೆ ಮತ್ತು ಕಿರುಕುಳವೇ ಫಾತಿಮಾ ಆತ್ಮಹತ್ಯೆಗೆ ಕಾರಣ ಎಂದು ಆರೋಪಿಸಲಾಗಿದೆ. ಈ ಪ್ರಕರಣದ ಬೆನ್ನಲ್ಲೇ ಅನೇಕ ವಿದ್ಯಾರ್ಥಿಗಳು ತಮಗೂ ಕಿರುಕುಳ ನೀಡಲಾಗುತ್ತಿದೆ ಎಂದು ದೂರಿದ್ದಾರೆ. ಇದು ಅತ್ಯಂತ ಗಂಭೀರ ಘಟನೆಯಾಗಿದ್ದು, ಸೂಕ್ತ ಹಾಗೂ ಪಾರದರ್ಶಕ ತನಿಖೆ ನಡೆಸುವಂತೆ ವಿವಿಧ ವಿದ್ಯಾರ್ಥಿ ಸಂಘಟನೆಗಳು ಸಂಸ್ಥೆಯ ಆವರಣದಲ್ಲಿ ಪ್ರತಿಭಟನೆ ನಡೆಸಿವೆ. ಈ ಪ್ರಕರಣವನ್ನು ಚೆನ್ನೈ ಪೊಲೀಸರು ಕೇಂದ್ರ ಅಪರಾಧ ವಿಭಾಗಕ್ಕೆ (ಸಿಸಿಬಿ) ವಹಿಸಿದ್ದಾರೆ.
19 ವರ್ಷದ ಮಗಳನ್ನು ಕಳೆದುಕೊಂಡು ಆಘಾತಕ್ಕೆ ಒಳಗಾಗಿರುವ ಫಾತಿಮಾ ತಂದೆ ಅಬ್ದುಲ್ ಲತೀಫ್ ಶುಕ್ರವಾರ ಚೆನ್ನೈ ಪೊಲೀಸ್ ಮಹಾನಿರ್ದೇಶಕರನ್ನು ಭೇಟಿಯಾಗಿ ಮಗಳ ಸಾವಿನ ಕುರಿತು ನ್ಯಾಯಯುತ ತನಿಖೆ ನಡೆಸಬೇಕು ಎಂದು ಮನವಿ ಮಾಡಿದರು.
ನಾನು ಅಸಹಾಯಕ, ನೀವು ಸಹಾಯ ಮಾಡಿ
'ಮಗಳ ಸಾವಿನ ಹಿಂದಿನ ಸತ್ಯ ಹೊರಬರುವವರೆಗೂ ಎಲ್ಲ ಜನರೂ ಇದರ ಬಗ್ಗೆ ಧ್ವನಿ ಎತ್ತಬೇಕು. ಮಗಳ ಸಾವಿಗೆ ಕಾರಣರಾದ ತಪ್ಪಿತಸ್ಥರಿಗೆ ಕಾನೂನಿನ ಅಡಿಯಲ್ಲಿ ಸೂಕ್ತ ಶಿಕ್ಷೆಗೆ ಒಳಪಡಿಸುವುದಾಗಿ ಡಿಜಿಪಿ ಭರವಸೆ ನೀಡಿದ್ದಾರೆ' ಎಂದು ಅಬ್ದುಲ್ ಲತೀಫ್ ತಿಳಿಸಿದರು.
'ನಮಗೆ ಮತ್ತೊಬ್ಬಳು ಫಾತಿಮಾ ಸಿಗಲಾರಳು. ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೋ ಅಥವಾ ಯಾರಾದರೂ ಕೊಂದಿದ್ದಾರೋ ನಮಗೆ ಗೊತ್ತಿಲ್ಲ. ನಾನು ಕೇರಳದಿಂದ ಬಂದ ಅಸಹಾಯಕ. ನನಗೆ ನಿಮ್ಮೆಲ್ಲರ ಸಹಾಯ ಬೇಕು' ಎಂದು ನೆರೆದಿದ್ದ ಜನರ ಮುಂದೆ ಅಬ್ದುಲ್ ಅಂಗಲಾಚಿ ದೈನ್ಯದಿಂದ ಹೇಳುವ ದೃಶ್ಯ ಮನಕಲಕುವಂತಿತ್ತು.
ನೋಟ್ನಲ್ಲಿ ಕಿರುಕುಳದ ಉಲ್ಲೇಖ
ಮಗಳ ಜತೆ ಕೊನೆಯ ಬಾರಿಗೆ ಮಾತನಾಡಿದಾಗ ಓದುವ ಸಲುವಾಗಿ ಫೋನ್ ಸ್ವಿಚ್ ಆಫ್ ಮಾಡಿಕೊಳ್ಳುವುದಾಗಿ ತಿಳಿಸಿದ್ದಳು. ಆದರೆ ಆಕೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹಾಸ್ಟೆಲ್ನಿಂದ ವಾರ್ಡನ್ ಬಳಿಕ ಕರೆ ಮಾಡಿದ್ದರು. ಆಕೆಯ ಮೊಬೈಲ್ ಫೋನ್ಅನ್ನು ಆನ್ ಮಾಡಿದಾಗ ಅದರಲ್ಲಿನ ನೋಟ್ಗಳಲ್ಲಿ ಪ್ರೊಫೆಸರ್ಗಳು ತನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಬರೆದಿಟ್ಟಿರುವುದು ಕಂಡುಬಂದಿದೆ. 'ನನ್ನ ಸಾವಿಗೆ ಸುದರ್ಶನ್ ಪದ್ಮನಾಭನ್ ಕಾರಣ' ಎಂದು ನೋಟ್ನಲ್ಲಿ ಬರೆದಿರುವುದು ದೊರೆತಿದೆ.
ಐಐಟಿ ಮದ್ರಾಸ್ನ ಪ್ರೊಫೆಸರ್ಗಳು ಆಕೆಯನ್ನು ನಿರಂತರವಾಗಿ ಕಿರುಕುಳ ನೀಡಿದ್ದರು. ಇದರಿಂದ ಆಕೆಯ ಘನೆತೆಗ ತೀವ್ರ ಧಕ್ಕೆಯಾಗಿತ್ತು. ಈ ಬಗ್ಗೆ ಆಕೆ ನೋಟ್ನಲ್ಲಿ ಉಲ್ಲೇಖಿಸಿದ್ದಾಳೆ. ಹೀಗಾಗಿ ಆ ಪ್ರೊಫೆಸರ್ಅನ್ನು ಬಂಧಿಸಬೇಕು ಎಂದು ಅಬ್ದುಲ್ ಲತೀಫ್ ಒತ್ತಾಯಿಸಿದ್ದಾರೆ.
ಎಐಎಡಿಎಂಕೆ ಧ್ವಜ ಸ್ತಂಭವೇ ಕಾರಣ, ಯುವತಿ ಕುಟುಂಬದವರು ಆಕ್ರೋಶ
ಆತ್ಮಹತ್ಯೆಗೆ ಬಳಸಿದ ಹಗ್ಗವೇ ಇಲ್ಲ
ಮಗಳ ಸಾವಿನ ಬಗ್ಗೆ ಅನೇಕ ಅನುಮಾನಗಳಿದ್ದು, ಇದರ ಕುರಿತು ಡಿಜಿಪಿ ಅವರ ಜತೆ ಮಾತುಕತೆ ನಡೆಸಿರುವುದಾಗಿ ತಿಳಿಸಿದರು. ಫಾತಿಮಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಯೇ ಅಥವಾ ಆಕೆಯನ್ನು ಯಾರಾದರೂ ಕೊಂದಿದ್ದಾರೆಯೇ ಎಂಬುದು ಇನ್ನೂ ದೃಢಪಟ್ಟಿಲ್ಲ. ಆಕೆಯ ಹಾಸ್ಟೆಲ್ ಕೊಠಡಿಯಲ್ಲಿ ಎಲ್ಲವನ್ನೂ ಚೆಲ್ಲಾಪಿಲ್ಲಿ ಮಾಡಲಾಗಿತ್ತು. ಅದಕ್ಕಿಂತ ಮುಖ್ಯವಾಗಿ ಫ್ಯಾನ್ನಲ್ಲಿ ಯಾವ ಹಗ್ಗವೂ ಇರಲಿಲ್ಲ. ಆಕೆಯ ರೂಮ್ಮೇಟ್ಗೆ ಸೇರಿದ ಯಾವ ವಸ್ತುವನ್ನೂ ಮುಟ್ಟಿಲ್ಲ ಎಂದು ಅವರು ಸಂಶಯ ವ್ಯಕ್ತಪಡಿಸಿದ್ದಾರೆ.
ಮಾಹಿತಿ ನೀಡದ ಐಐಟಿ ಸಂಸ್ಥೆ
ತನ್ನ ಹೆಸರು ಮತ್ತು ಧರ್ಮ ಸೇರಿದಂತೆ ಫಾತಿಮಾ ವಿರುದ್ಧ ಎಲ್ಲ ಬಗೆಯ ಕಿರುಕುಳಗಳೂ ನಡೆದಿವೆ. ಪ್ರೊಫಸೆರ್ನಿಂದ ಕಿರುಕುಳ ಆಗುತ್ತಿರುವ ಬಗ್ಗೆ ಅವಳು ತಾಯಿಯೊಂದಿಗೆ ಹಲವು ಬಾರಿ ಹೇಳಿಕೊಂಡಿದ್ದಳು. ಆಕೆಗೆ ಕಿರುಕುಳ ನೀಡಿದ್ದು ನಿಜ. ಕಿರುಕುಳ ನೀಡಿದ ಪ್ರೊಫೆಸರ್ ಹೆಸರನ್ನು ನೋಟ್ನಲ್ಲಿ ಆಕೆ ಬರೆದಿದ್ದಾಳೆ. ಆಕೆಯ ಸಾವಿಗೀಡಾದ ಬಳಿಕ ಐಐಟಿ ಆಡಳಿತವು ತಮಗೆ ಕರೆ ಮಾಡಿಲ್ಲ ಅಥವಾ ಸಂಪರ್ಕಿಸಿಯೂ ಇಲ್ಲ. ಸಿಸಿಟಿವಿ ಕ್ಯಾಮೆರಾದ ದೃಶ್ಯಾವಳಿಗಳನ್ನು ನೀಡುವುದಾಗಿ ಭರವಸೆ ನೀಡಿದ್ದ ಸಂಸ್ಥೆ ಇದುವರೆಗೂ ನೀಡಿಲ್ಲ. ಹಾಗೆಯೇ ಆತ್ಮಹತ್ಯೆಗೆ ಬಳಸಿದ್ದ ಹಗ್ಗ ಎಲ್ಲಿ ಹೋಯಿತು ಎಂದೂ ತಿಳಿಸಿಲ್ಲ ಎಂದು ಆಕೆಯ ಕುಟುಂಬ ಆರೋಪಿಸಿದೆ.