ತಮಿಳುನಾಡಿನಲ್ಲಿ ಮತ್ತೆ ಸಿಕ್ಕಿತು 43 ಲಕ್ಷ ರುಪಾಯಿ ನಗದು; ಎಎಂಎಂಕೆ ಪಕ್ಷದ್ದು
ವಿರುಧ್ ನಗರ್ (ತಮಿಳುನಾಡು), ಏಪ್ರಿಲ್ 17: ಚುನಾವಣಾ ನಿಗಾ ತಂಡದ ಸದಸ್ಯರು ಬುಧವಾರದಂದು 'ಅಮ್ಮ ಮಕ್ಕಳ್ ಮುನ್ನೆಟ್ರ ಕಳಗಂ' (ಎಎಂಎಂಕೆ) ಪದಾಧಿಕಾರಿ ಮನೆ ಮೇಲೆ ದಾಳಿ ನಡೆಸಿ, 43 ಲಕ್ಷ ರುಪಾಯಿ ನಗದು ವಶಕ್ಕೆ ಪಡೆದಿದ್ದಾರೆ. ಸತ್ತೂರ್ ಸಮೀಪದ ಎಥಿರ್ ಕೋಟೈನಲ್ಲಿ ದಾಳಿ ನಡೆದಿದೆ. ಸತ್ತೂರ್ ವಿಧಾನಸಭಾ ಉಪಚುನಾವಣೆ ಅಭ್ಯರ್ಥಿ ಎಸ್.ಜಿ. ಸುಬ್ರಮಣಿಯನ್ ಅವರ ತವರು ಇದೇ ಪಟ್ಟಣ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ನಗದು ವಶಪಡಿಸಿಕೊಂಡ ನಂತರ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಎಥಿರ್ ಕೋಟೈನಲ್ಲಿ ಇರುವ ಸುಬ್ರಮಣಿಯನ್ ಮನೆಯಲ್ಲೂ ಶೋಧ ನಡೆಸಿದ್ದಾರೆ. ವಿರುಧ್ ನಗರ್ ಜಿಲ್ಲೆಯ ಚುನಾವಣಾಧಿಕಾರಿ ಎ ಎ.ಶಿವಜ್ಞಾನಮ್ ಮಾತನಾಡಿ, ಎಎಂಎಂಕೆ ಪದಾಧಿಕಾರಿ ಜಿ.ಮಹದೇವನ್ ಮನೆಯಿಂದ ಹತ್ತು ಲಕ್ಷ ವಶಪಡಿಸಿಕೊಳ್ಳಲಾಗಿದೆ. ಅಲ್ಲೆ ಇನ್ನಷ್ಟು ಶೋಧ ನಡೆಸಿದಾಗ ಮನೆಯಲ್ಲಿ ಮೂವತ್ಮೂರು ಲಕ್ಷ ಮುಚ್ಚಿಟ್ಟಿರುವುದು ಕಂಡುಬಂದಿದೆ ಎಂದಿದ್ದಾರೆ.
ಈ ನಗದನ್ನು ಅಲಂಗುಲಂ ಪೊಲೀಸ್ ಠಾಣೆಗೆ ಒಪ್ಪಿಸಲಾಗಿದೆ. ತಮಿಳುನಾಡಿನ ವೆಲ್ಲೂರಿನಲ್ಲಿ ಡಿಎಂಕೆ ನಾಯಕರೊಬ್ಬರಿಗೆ ಸೇರಿದ ಹಣ ಎಂಟು ಕೋಟಿ ರುಪಾಯಿಗೂ ಹೆಚ್ಚು ಮೊತ್ತ ದೊರೆತ ಮೇಲೆ ಆ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆಯೇ ರದ್ದು ಮಾಡಲಾಗಿದೆ. ಇನ್ನು ಈ ಬಾರಿ ಚುನಾವಣೆ ಆಯೋಗಕ್ಕೆ ದೊರೆತಿರುವ ಅತಿ ಹೆಚ್ಚು ಅಕ್ರಮ ಹಣ ತಮಿಳುನಾಡಿನದ್ದೇ.