ರಾಹುಲ್ ಕಾಲೇಜು ಕಾರ್ಯಕ್ರಮಕ್ಕೆ ಅವಕಾಶ ನೀಡಿದ್ದಕ್ಕೆ ಆಕ್ಷೇಪ
ಚೆನ್ನೈ, ಮಾರ್ಚ್ 15: ಎರಡು ದಿನದ ಹಿಂದಷ್ಟೇ (ಮಾರ್ಚ್ ಹದಿಮೂರನೇ ತಾರೀಕು) ಚೆನ್ನೈನ ಸ್ಟೆಲ್ಲಾ ಮೇರೀಸ್ ಕಾಲೇಜಿನಲ್ಲಿ ನಡೆದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಸಂವಾದ ಕಾರ್ಯಕ್ರಮದ ಬಗ್ಗೆ ಆಕ್ಷೇಪ ಎದ್ದಿದೆ. ಕಾಲೇಜು ಶಿಕ್ಷಣ ನಿರ್ದೇಶನಾಲಯದಿಂದ ಈ ಬಗ್ಗೆ ಪ್ರಾದೇಶಿಕ ಜಂಟಿ ನಿರ್ದೇಶಕರಿಗೆ ಸುತ್ತೋಲೆ ಹೊರಡಿಸಲಾಗಿದೆ.
ರಾಹುಲ್ ಗಾಂಧಿ ದಕ್ಷಿಣದಿಂದ ಸ್ಪರ್ಧೆ? ಮೊದಲ ಆಯ್ಕೆ ಕರ್ನಾಟಕ
ಲೋಕಸಭೆ ಚುನಾವಣೆ ದಿನಾಂಕ ಘೋಷಣೆಯಾಗಿ, ಮಾದರಿ ನೀತಿ ಸಂಹಿತೆ ಜಾರಿಯಾದ ಮೇಲೆ ಒಂದು ರಾಜಕೀಯ ಪಕ್ಷದ ನಾಯಕರ ಸಂವಾದದ ಸಲುವಾಗಿ ಕಾಲೇಜು ಕ್ಯಾಂಪಸ್ ಅನ್ನು ಹೇಗೆ ಬಳಸಿಕೊಳ್ಳಲು ಅವಕಾಶ ನೀಡಿದಿರಿ ಎಂದು ಪ್ರಶ್ನೆ ಮಾಡಲಾಗಿದೆ. ಈ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಅವರು ವಿದ್ಯಾರ್ಥಿಗಳ ಜತೆಗೆ ಸಂವಾದ ನಡೆಸಿದ್ದರು.
ಏಪ್ರಿಲ್ ಹನ್ನೊಂದರಿಂದ ಮೇ ಹತ್ತೊಂಬತ್ತನೇ ತಾರೀಕಿನ ತನಕ ಏಳು ಹಂತಗಳಲ್ಲಿ ಲೋಕಸಭಾ ಚುನಾವಣೆ ಮತದಾನ ದೇಶದ ವಿವಿಧ ರಾಜ್ಯಗಳಲ್ಲಿ ನಡೆಯಲಿದೆ. ಮೇ ಇಪ್ಪತ್ಮೂರರಂದು ಫಲಿತಾಂಶ ಪ್ರಕಟ ಆಗಲಿದೆ. ಈಗಾಗಲೇ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದು, ಚೆನ್ನೈನ ಸ್ಟೆಲ್ಲಾ ಮೇರೀಸ್ ಕಾಲೇಜು ಕ್ಯಾಂಪಸ್ ನಲ್ಲಿ ರಾಹುಲ್ ಗಾಂಧಿ ಪಾಲ್ಗೊಂಡ ಕಾರ್ಯಕ್ರಮದ ಬಗ್ಗೆ ಆಕ್ಷೇಪ ವ್ಯಕ್ತವಾಗಿದೆ.