ನಮ್ಮ ಆಹಾರ ನಾವೇ ಬೆಳೆದುಕೊಳ್ಳೋಣ: ಚೆನ್ನೈ ವಿದ್ಯಾರ್ಥಿಗಳಿಗೆ ಆದರ್ಶ ಪಾಠ!
ಚೆನ್ನೈ, ಜುಲೈ 04: ಕೃಷಿ ಉತ್ಪನ್ನಗಳ ಕೊರತೆ ಎಂಬುದು ಒಂದು ಬಹುದೊಡ್ಡ ಸಮಸ್ಯೆಯಾಗಿ, ಎಷ್ಟೋ ದಿನಬಳಕೆಯ ಆಹಾರೋತ್ಪನ್ನಗಳಿಗಾಗಿ ವಿದೇಶಗಳ ಮೇಲೆ ಅವಲಂಬಿತವಾಗಬೇಕಾದ ಪರಿಸ್ಥಿತಿ ಇಂದಿದೆ. ಇಂಥ ಸಂದರ್ಭದಲ್ಲಿ ನಮ್ಮ ಆಹಾರವನ್ನು ನಾವೇ ಬೆಳೆದುಕೊಳ್ಳುವುದು ಹೇಗೆ ಎಂದು ಮಕ್ಕಳಿಗೆ ಪ್ರಾಯೋಗಿಕವಾಗಿ ಪಾಠ ಮಾಡುವ ಅತ್ಯುನ್ನತ ಕೆಲಸಕ್ಕೆ ಸ್ವಸಹಾಯ ಸಂಘವೊಂದು ಕೈಹಾಕಿದೆ.
ತಮಿಳುನಾಡಿನ ಚೆನ್ನೈನ ಈ ಸ್ವಸಹಾಯ ಸಂಘ 100 ಕ್ಕೂ ಹೆಚ್ಚು ಕಾರ್ಪೋರೇಷನ್ ಶಾಲೆಯ ವಿದ್ಯಾರ್ಥಿಗಳಿಗೆ ತರಕಾರಿಗಳನ್ನು ಬೆಳೆಯುವುದು ಹೇಗೆ ಎಂಬ ಪಾಠ ಮಾಡುತ್ತಿದೆ.
ಕೃಷಿ ಕ್ಷೇತ್ರದಲ್ಲಿ ದಿಟ್ಟ ಹೆಜ್ಜೆ ಇಟ್ಟ ದೊಡ್ಡಬಳ್ಳಾಪುರದ ಉಮಾದೇವಿ
ನ್ಯಾಶ್ನಲ್ ಅರ್ಬನ್ ಲೈವ್ಲಿಹುಡ್ ಮಿಶಿನ್ ನ ಭಾಗವಾಗಿರುವ ಈ ಸ್ವಸಹಾಯ ಸಂಘ, ವಿದ್ಯಾರ್ಥಿ ಮತ್ತು ಶಿಕ್ಷಕರು ಇಬ್ಬರಿಗೂ ಬೆಳೆ ಬೆಳೆಯುವ ತರಬೇತಿ ನೀಡುತ್ತಿದೆ. ಶಾಲೆಯ ಪುಟ್ಟ ಹೂದೋಟದಲ್ಲಿ, ಪಾಟ್ ಗಳಲ್ಲಿ ಅಥವಾ ಮನೆಯಲ್ಲಿ ಇರುವ ಅಲ್ಪಜಾಗದಲ್ಲೇ ಹೇಗೆ ತರಕಾರಿಗಳನ್ನು ಬೆಳೆದು ಸಾವಲಂಬಿಯಾಗುವುದು ಎಂಬ ಕುರಿತು ಈ ಸಂಘ ಪಾಠ ಹೇಳುತ್ತದೆ.
ಸುಮಾರು 40 ಕ್ಕೂ ಹೆಚ್ಚು ಮಕ್ಕಳಿಗೆ ಈ ಸ್ವಸಹಾಯ ಸಂಘ ತರಬೇತಿ ನೀಡುತ್ತದೆ. ಇವರಿಗೆ ಬೀಜ ಮತ್ತು ಗಿಡಗಳನ್ನು ನೀಡಿ, ಟೆರೇಸ್ ಅಥವಾ ಶಾಲೆಯ ಹೂದೋಟದಲ್ಲಿ ಅಥವಾ ಪಾಟ್ ಗಳಲ್ಲಿ ಇವುಗಳನ್ನು ಬೆಳೆಸುವಂತೆ ತರಬೇತಿ ನೀಡಲಾಗುತ್ತದೆ. ಮಕ್ಕಳಲ್ಲಿ ಬೆಳೆ ಬೆಳೆಯುವ ಮಹತ್ವವನ್ನು ಅರ್ಥಮಾಡಿಸುವುದು ಇದರ ಉದ್ದೇಶ.
ಈಗಿನ ಕಾಲದಲ್ಲಿ ಕೃಷಿ ಕೆಲಸ ಎಂದರೆ ಮೂಗು ಮುರಿಯುವವರೇ ಹೆಚ್ಚು, ಡಾಕ್ಟರ್, ಇಂಜಿನಿಯರ್ ಆಗುವ ಕನಸಿನೆದುರು ರೈತನಾಗುವ ಕನಸನ್ನು ಅಸಡ್ಡೆಯಿಂದ ನೋಡಲಾಗುತ್ತಿದೆ. ಆದರೆ ಬೇರೆ ವೃತ್ತಿಯಿಂದ ಹಣ ಗಳಿಸಬ ಹುದು. ಆದರೆ ಹೊಟ್ಟೆಗೆ ಆಹಾರ ನೀಡುವುದು ರೈತ ವೃತ್ತಿ ಮಾತ್ರ ಎಂಬುದನ್ನು ಮಕ್ಕಳಿಗೆ ಅರ್ಥಮಾಡಿಸುವ ಯತ್ನ ಇದು.
ಶಾಲೆಯಲ್ಲಿ ಬೆಳೆದ ತರಕಾರಿಗಳಲನ್ನು ಶಾಲೆಯಲ್ಲಿ ಅಡುಗೆ ಮಾಡುವುದಕ್ಕೇ ಬಳಸಲಾಗುತ್ತದೆ, ಹೆಚ್ಚಾಗಿ ಉಳಿದವನ್ನು ಮಾರಾಟ ಮಾಡಿ, ಬಂದ ಹಣವನ್ನು ಶಾಲೆಯ ಅಭಿವೃದ್ಧಿಗೆ ಬಳಸಲಾಗುತ್ತದೆ.