ತಮಿಳುನಾಡು ಚುನಾವಣೆ ದಿನಾಂಕ ನಿಗದಿ ಮೊದಲೇ "ಚಿನ್ನ"ದಂತಾ ಘೋಷಣೆ!
ಚೆನ್ನೈ, ಫೆಬ್ರವರಿ.26: ತಮಿಳುನಾಡು ವಿಧಾನಸಭಾ ಚುನಾವಣಾ ದಿನಾಂಕ ಘೋಷಣೆಗೆ ಕೆಲವೇ ಕೆಲವು ಗಂಟೆ ಬಾರಿ ಇರುವಂತೆ ಚಿನ್ನದ ಮೇಲಿನ ಸಾಲವನ್ನು ಮನ್ನಾ ಮಾಡಿ ಮುಖ್ಯಮಂತ್ರಿ ಇ ಪಳನಿಸ್ವಾಮಿ ಮಹತ್ವದ ಆದೇಶ ಹೊರಡಿಸಿದ್ದಾರೆ.
ವಿಧಾನಸಭಾ ಚುನಾವಣಾ ದಿನಾಂಕ ಘೋಷಣೆ ಬಳಿಕ ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಯಾಗಲಿದೆ. ಈ ಹಿನ್ನೆಲೆ ಅದಕ್ಕೂ ಮೊದಲೇ ರೈತರು ಮತ್ತು ಬಡವರಿಗೆ ಸಹಕಾರಿ ಬ್ಯಾಂಕ್ ಗಳಿಂದ ನೀಡಿದ ಚಿನ್ನದ ಮೇಲಿನ ಸಾಲ ಮನ್ನಾ ಮಾಡುವುದಾಗಿ ಸರ್ಕಾರ ಪ್ರಕಟಿಸಿದೆ.
ತಮಿಳುನಾಡು, ಕೇರಳ, ಬಂಗಾಳ, ಅಸ್ಸಾಂ, ಪುದುಚೇರಿ ಚುನಾವಣೆಗೆ ಮುಹೂರ್ತ
ಭಾರತದ ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಶುಕ್ರವಾರ ಕೇಂದ್ರ ಚುನಾವಣಾ ಆಯೋಗವು ಸುದ್ದಿಗೋಷ್ಠಿ ನಡೆಸಲಿದ್ದು ದಿನಾಂಕ ಘೋಷಿಸಲಿದೆ. ತಮಿಳುನಾಡು, ಪಶ್ಚಿಮ ಬಂಗಾಳ, ಅಸ್ಸಾಂ, ಕೇರಳ ಮತ್ತು ಪುದುಚೇರಿ ವಿಧಾನಸಭಾ ಕ್ಷೇತ್ರಗಳ ಚುನಾವಣೆಗೆ ಆಯೋಗ ದಿನಾಂಕ ಪ್ರಕಟಿಸಲಿದೆ.
ಚಿನ್ನದ ಮೇಲಿನ ಸಾಲಮನ್ನಾ ಬಗ್ಗೆ ಸಿಎಂ ಸಮರ್ಥನೆ:
ತಮಿಳುನಾಡಿನಲ್ಲಿ ಕೊರೊನಾವೈರಸ್ ಮತ್ತು ಭಾರತ ಲಾಕ್ ಡೌನ್ ಸ್ಥಿತಿಯಲ್ಲಿ ಎದುರಾದ ಆರ್ಥಿಕ ಸವಾಲುಗಳಿಂದ ಜನರು ಇನ್ನೂ ಚೇತರಿಸಿಕೊಂಡಿಲ್ಲ. ಈ ಹಿನ್ನೆಲೆ ಸರ್ಕಾರ ತೆಗೆದುಕೊಂಡಿರುವ ಕ್ರಮವು ರೈತರು ಮತ್ತು ಬಡವರು ಚಿನ್ನವನ್ನು ಉಳಿಸಿಕೊಳ್ಳುವುದಕ್ಕೆ ಸಹಕಾರಿ ಆಗಿರಲಿದೆ ಎಂದು ಮುಖ್ಯಮಂತ್ರಿ ಇ ಪಳನಿಸ್ವಾಮಿ ಸರ್ಕಾರದ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.
ಕಳೆದ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಸಂದರ್ಭದಲ್ಲಿ ಆರ್ಥಿಕತೆಯ ಪರಿಹಾರ ಕ್ರಮಗಳ ಭಾಗವಾಗಿ ತಮಿಳುನಾಡು ರಾಜ್ಯ ಅಪೆಕ್ಸ್ ಸಹಕಾರ ಬ್ಯಾಂಕ್ ಕಡಿಮೆ ಬಡ್ಡಿದರವನ್ನು ಹೊಂದಿರುವ ಚಿನ್ನದ ಸಾಲ ಯೋಜನೆಗಳನ್ನು ಪ್ರಕಟಿಸಿತ್ತು. ವಾರ್ಷಿಕ ಶೇ.6ರಷ್ಟು ಬಡ್ಡಿದರವನ್ನು ನಿಗದಿಗೊಳಿಸಲಾಗಿತ್ತು. ಸಾರ್ವಜನಿಕರು ಈ ಸೌಲಭ್ಯದಡಿ 25,000 ದಿಂದ 1 ಲಕ್ಷದವರೆಗೂ ಸಾಲ ಪಡೆದು 3 ತಿಂಗಳ ಅವಧಿಯಲ್ಲಿ ಮರು ಪಾವತಿ ಮಾಡಬೇಕಿತ್ತು.