ಹೆಲಿಕಾಪ್ಟರ್ ದುರಂತ; ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಬಗ್ಗೆ ತಿಳಿಯಿರಿ
ಚೆನ್ನೈ, ಡಿಸೆಂಬರ್ 09; ತಮಿಳುನಾಡಿನ ನೀಲಗಿರಿ ಜಿಲ್ಲೆಯ ಕೂನೂರಿನಲ್ಲಿ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ಎಂಐ-17ವಿ5 ಪತನಗೊಂಡಿದೆ. ಹೆಲಿಕಾಪ್ಟರ್ನಲ್ಲಿದ್ದ ಸೇನಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಸೇರಿದಂತೆ 13 ಜನರು ಸಾವನ್ನಪ್ಪಿದ್ದಾರೆ.
ಹೆಲಿಕಾಪ್ಟರ್ನಲ್ಲಿ ಪ್ರಯಾಣಿಸುತ್ತಿದ್ದ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಮಾತ್ರ ಬದುಕುಳಿದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಮಿಳುನಾಡು ಸರ್ಕಾರ, ವಾಯುಪಡೆ ಅವರಿಗೆ ಅತ್ಯುನ್ನತ ಗುಣಮಟ್ಟದ ಚಿಕಿತ್ಸೆ ನೀಡಲು ಸಕಲ ವ್ಯವಸ್ಥೆ ಮಾಡಿದೆ.
ಭಾರತೀಯ ವಾಯುಪಡೆಯ ಟ್ವೀಟ್ನಲ್ಲಿ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ಗೆ ವೆಲ್ಲಿಂಗಟನ್ನಲ್ಲಿನ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದೆ. ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಟ್ವೀಟ್ ಮಾಡಿ ಕ್ಯಾಪ್ಟನ್ ವರುಣ್ ಸಿಂಗ್ ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿದ್ದಾರೆ.
ಬಿಪಿನ್ ರಾವತ್ ಸಾವು; ವಿವಿಧ ದೇಶಗಳಿಂದ ಸಂತಾಪ
ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ಗೆ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದಲ್ಲಿ ಕೊಯಮತ್ತೂರಿನಲ್ಲಿ ಅಗತ್ಯ ವ್ಯವಸ್ಥೆಯನ್ನು ತಮಿಳುನಾಡು ಸರ್ಕಾರ ಮಾಡಿದೆ. ಅವರ ಚಿಕಿತ್ಸೆಗಾಗಿಯೇ ಹಿರಿಯ ವೈದ್ಯರನ್ನು ಒಳಗೊಂಡ ವಿಶೇಷ ತಂಡವನ್ನು ರಚನೆ ಮಾಡಲಾಗಿದೆ.
ಡಿಸೆಂಬರ್ 10ರಂದು ಬಿಪಿನ್ ರಾವತ್ ಮತ್ತು ಪತ್ನಿ ಮಧುಲಿಕಾ ಅಂತ್ಯಸಂಸ್ಕಾರ
ಶೌರ್ಯ ಚಕ್ರ ಪ್ರಶಸ್ತಿ; ಭಾರತೀಯ ವಾಯುಪಡೆ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ತಮ್ಮ ಶೌರ್ಯ, ಸಾಹಸಕ್ಕಾಗಿ 2021ರ ಸ್ವತಂತ್ರ ದಿನಾಚರಣೆಯಂದು ಶೌರ್ಯ ಚಕ್ರ ಪ್ರಶಸ್ತಿ ಪಡೆದಿದ್ದರು. ತಾಂತ್ರಿಕ ದೋಷ ಕಂಡು ಬಂದಿದ್ದ ಲಘು ತೇಜಸ್ ಯುದ್ಧ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್ ಮಾಡಿಸಿದ್ದರು.
ತಮಿಳುನಾಡು ಸೇನಾ ಹೆಲಿಕಾಪ್ಟರ್ ಪತನದ ಹಿಂದೆ ಚೀನಾ ಕೈವಾಡ!?
ಎಲ್ಸಿಎ ಸ್ಕ್ವಾಡ್ರನ್ನಲ್ಲಿ ಪೈಲೆಟ್ ಆಗಿದ್ದ ವರುಣ್ ಸಿಂಗ್ ವೈಮಾನಿಕ ತುರ್ತು ಪರಿಸ್ಥಿತಿಯನ್ನು ನಿಭಾಯಿಸಿದ್ದಕ್ಕೆ ಭಾರತದ 3ನೇ ಅತ್ಯುನ್ನತ ಶೌರ್ಯ ಪ್ರಶಸ್ತಿಯಾದ ಶೌರ್ಯಚಕ್ರ ಪ್ರಶಸ್ತಿ ಪಡೆದಿದ್ದರು. ಕಠಿಣ ಪರಿಸ್ಥಿತಿಯಲ್ಲಿಯೂ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್ ಮಾಡಿಸುವ ಧೈರ್ಯ ತೋರಿದ್ದರು.
2020ರ ಅಕ್ಟೋಬರ್ 12ರಂದು ತೇಜಸ್ ವಿಮಾನದ ನಿರ್ವಹಣೆ, ಒತ್ತಡ ನಿರ್ವಹಣೆ ಕೆಲಸಗಳು ಪೂರ್ಣಗೊಂಡ ಬಳಿಕ ವರುಣ್ ಸಿಂಗ್ ಸುರಕ್ಷತಾ ಪರೀಕ್ಷೆ ಮಾಡಲು ಪ್ರಾಯೋಗಿಕ ಹಾರಾಟ ನಡೆಸಿದ್ದರು.
ವಿಮಾನ ಹಾರಾಟ ನಡೆಸುವಾಗಲೇ ಕಾಕ್ ಪಿಟ್ ಒತ್ತಡ ನಿರ್ವಹಣೆ ವ್ಯವಸ್ಥೆ ಹದಗೆಟ್ಟಿತ್ತು. ಆದರೆ ಪೈಲೆಟ್ ಆಗಿದ್ದ ವರುಣ್ ಸಿಂಗ್ ಧೈರ್ಯದಿಂದ ವಿಮಾನವನ್ನು ಲ್ಯಾಂಡ್ ಮಾಡಿಸಿ, ಅದರಲ್ಲಿದ್ದ ಯೋಧರ ಜೀವವನ್ನು ಸಹ ಕಾಪಾಡಿದ್ದರು.
My heart goes out to the families of those who lost their loved ones in this accident. Praying for the speedy recovery of Gp Capt Varun Singh, who is currently under treatment at the Military Hospital, Wellington.
— Rajnath Singh (@rajnathsingh) December 8, 2021
ಕುಟುಂಬದ ಮಾಹಿತಿ; ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ತಂದೆ ಕರ್ನಲ್ (ನಿವೃತ್ತ) ಕೆ. ಪಿ. ಸಿಂಗ್. ಸೇನೆಯ ಎಎಡಿ ವಿಭಾಗದಲ್ಲಿ ಕೆಲಸ ಮಾಡಿ ನಿವೃತ್ತರಾಗಿದ್ದಾರೆ. ಸಹೋದರ ಲೆಫ್ಟಿನೆಂಟ್ ಕರ್ನಲ್ ತಂಜು ಸಿಂಗ್ ಭಾರತೀಯ ನೌಕಾಪಡೆಯಲ್ಲಿದ್ದಾರೆ.
ಬೆಂಗಳೂರಿನಲ್ಲಿರುವ ವಾಯುಪಡೆಯ ತರಬೇತಿ ಶಿಬಿರದಲ್ಲಿ ಮೊದಲು ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಪರೀಕ್ಷಾ ಪೈಲೆಟ್ ಆಗಿದ್ದರು. ಹಗುರ ಯುದ್ಧ ವಿಮಾನ ತೇಜಸ್ ನಿರ್ವಹಣೆ ನೋಡಿಕೊಳ್ಳುತ್ತಿದ್ದರು.
ಬುಧವಾರ ಜನರಲ್ ಬಿಪಿನ್ ರಾವತ್ ಸೇರಿದಂತೆ ಇತರ 13 ಜನರು ಇದ್ದ ಹೆಲಿಕಾಪ್ಟರ್ ಸಂಪರ್ಕ ಅಧಿಕಾರಿಯಾಗಿ ವರುಣ್ ಸಿಂಗ್ ಕಾರ್ಯ ನಿರ್ವಹಣೆ ಮಾಡುತ್ತಿದ್ದು, ಹೆಲಿಕಾಪ್ಟರ್ನಲ್ಲಿಯೇ ಪ್ರಯಾಣ ಮಾಡತ್ತಿದ್ದರು.
ಹೆಲಿಕಾಪ್ಟರ್ ಪತನದಲ್ಲಿ ಗಾಯಗೊಂಡಿರುವ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ಗೆ ಬುಧವಾರ ಸಂಜೆ ಚೆನ್ನೈನಿಂದ ಆಗಮಿಸಿದ ವೈದ್ಯರ ತಂಡ ಶಸ್ತ್ರ ಚಿಕಿತ್ಸೆ ನಡೆಸಿದೆ. ಆಪರೇಷನ್ ಥಿಯೇಟರ್ಗೆ ಕರೆದುಕೊಂಡು ಹೋಗುವಾಗ ಅವರಿಗೆ ಎಚ್ಚರವಿತ್ತು. ಪತ್ನಿಯ ಜೊತೆ ಮಾತನಾಡಲು ಬಯಸಿದ್ದರು ಎಂದು ಕುಟುಂಬದವರು ಮಾಹಿತಿ ನೀಡಿದ್ದಾರೆ.
ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ಇತರ 13 ಜನರ ಪಾರ್ಥಿವ ಶರೀರವನ್ನು ಗುರುವಾರ ಅವರ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗುತ್ತದೆ. ಬಿಪಿನ್ ರಾವತ್, ಮಧುಲಿಕಾ ರಾವತ್ ಪಾರ್ಥಿವ ಶರೀರವನ್ನು ದೆಹಲಿಗೆ ತೆಗೆದುಕೊಂಡು ಹೋಗಲಾಗುತ್ತಿದ್ದು, ಇದಕ್ಕಾಗಿ ವಿಶೇಷ ವ್ಯವಸ್ಥೆ ಮಾಡಲಾಗಿದೆ.
Recommended Video