ಹೆಲಿಕಾಪ್ಟರ್ ಪತನ: ಬಿಪಿನ್ ರಾವತ್ರನ್ನು ನೋಡಿದೆ, ನೀರು ಕೇಳಿದರು ಎಂದ ಪ್ರತ್ಯಕ್ಷದರ್ಶಿ
ಚೆನ್ನೈ, ಡಿಸೆಂಬರ್ 09: ಸೇನಾ ಹೆಲಿಕಾಪ್ಟರ್ ಪತನವಾದ ಬಳಿಕ ಗಾಯಗೊಂಡು ಜೀವಂತವಾಗಿದ್ದ ಭಾರತೀಯ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಬಿಪಿನ್ ಸಿಂಗ್ ರಾವತ್ರನ್ನು ನಾನು ನೋಡಿದ್ದೆ, ಅವರು ನೀರು ಕೊಡಿ ಎಂದು ಕೇಳುತ್ತಿದ್ದರು ಎಂದು ಈ ಘಟನೆ ನಡೆದ ಪ್ರದೇಶದ ಪ್ರತ್ಯಕ್ಷದರ್ಶಿ ತಿಳಿಸಿದ್ದಾರೆ.
ಭಾರತೀಯ ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಸಹಿತ 14 ಜನರಿದ್ದ ಸೇನಾ ಹೆಲಿಕಾಪ್ಟರ್ ಪತನವಾಗಿರುವ ಘಟನೆ ತಮಿಳುನಾಡಿನ ನೀಲ್ಗಿರಿ ಜಿಲ್ಲೆಯ ಕೂನೂರ್ ಬಳಿ ನಡೆದಿದೆ. ಐಎಎಫ್ ಎಂಐ-17ವಿ5 ಹೆಲಿಕಾಪ್ಟರ್ ಇದಾಗಿದ್ದು, ಹೆಲಿಕಾಪ್ಟರ್ನಲ್ಲಿ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಸೇರಿದಂತೆ 13 ಮಂದಿ ದುರ್ಮರಣಕ್ಕೀಡಾಗಿರುವುದನ್ನು ಇರುವುದನ್ನು ಭಾರತೀಯ ಸೇನೆ ಈಗಾಗಲೇ ಖಚಿತಪಡಿಸಿದ್ದು, ತನಿಖೆಗೆ ಆದೇಶಿಸಿದೆ.
ಪಾಕ್, ಚೀನಾದಿಂದ ಗಡಿ ಕ್ಯಾತೆ: ಕೇಂದ್ರ ಸರ್ಕಾರಕ್ಕೆ ಹೊಸ 'ಸಿಡಿಎಸ್' ನೇಮಕದ ತಲೆನೋವು
ಈ ಘಟನೆಯ ಪ್ರತ್ಯಕ್ಷ ದರ್ಶಿಯಾದ ಕಾಂಟ್ರಾಕ್ಟರ್ ಶಿವಕುಮಾರ್, "ನಾನು ಇಲ್ಲೇ ಎಸ್ಟೇಟ್ನಲ್ಲಿ ಕೆಲಸ ಮಾಡುತ್ತಿದ್ದೆ. ಹೆಲಿಕಾಪ್ಟರ್ ಪತನವಾದಾಗ ಸದ್ದು ಕೇಳಿಸಿ ಸ್ಥಳಕ್ಕೆ ಧಾವಿಸಿದೆ. ಸೇನಾ ಹೆಲಿಕಾಪ್ಟರ್ ಹೊತ್ತಿ ಉರಿದದ್ದನ್ನು ನಾನು ಕಣ್ಣಾರೆ ಕಂಡಿದ್ದೇನೆ. ಸ್ಥಳಕ್ಕೆ ನಾವು ಹಾಗೂ ಇತತರು ತೆರಳಿದೆವು," ಎಂದು ತಿಳಿಸಿದ್ದಾರೆ.
"ಮೂರು ದೇಹಗಳು ಕೆಳಕ್ಕೆ ಬೀಳುವುದನ್ನು ನಾವು ನೋಡಿದೆವು. ಆ ಪೈಕಿ ಓರ್ವರು ಜೀವಂತವಾಗಿದ್ದರು. ಅವರು ನೀರು ನೀಡಿ ಎಂದು ಕೇಳಿದರು. ನಾನು ಅವರನ್ನು ಬೆಡ್ಶೀಟ್ ಮೂಲಕ ಎಳೆದೆವು. ಅವರನ್ನು ರಕ್ಷಣಾ ತಂಡವು ಆಸ್ಪತ್ರೆಗೆ ಕರೆದೊಯ್ಯಿತು," ಎಂದು ಶಿವಕುಮಾರ್ ಎನ್ಡಿಟಿವಿಗೆ ತಿಳಿಸಿದ್ದಾರೆ.
"ದೇಶಕ್ಕಾಗಿ ದುಡಿದ ವ್ಯಕ್ತಿಗೆ ನೀರು ಕೊಡಲು ನನಗೆ ಆಗಲಿಲ್ಲ"
"ಕೆಲ ಗಂಟೆಗಳ ಬಳಿಕ ನನಗೆ ಬೇರೆಯೊಬ್ಬರು ನೀನು ಮಾತನಾಡಿದ ವ್ಯಕ್ತಿ ಜನರಲ್ ಬಿಪಿನ್ ರಾವತ್ ಎಂದು ಹೇಳಿದರು. ನನಗೆ ಭಾರತೀಯ ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ರ ಚಿತ್ರವನ್ನು ತೋರಿಸಿದರು. ನಾನು ಈ ವ್ಯಕ್ತಿ ಈ ದೇಶಕ್ಕಾಗಿ ಕೆಲಸ ಮಾಡಿದ ವ್ಯಕ್ತಿ ಎಂದು ನಂಬಲೇ ಸಾಧ್ಯವಾಗಲಿಲ್ಲ. ನಾನು ನೀರು ಕೂಡಾ ತಂದು ಕೊಡಲು ಸಾಧ್ಯವಾಗಲಿಲ್ಲ. ದೇಶಕ್ಕಾಗಿ ದುಡಿದ ವ್ಯಕ್ತಿಗೆ ಕೊನೆಯ ಕ್ಷಣದಲ್ಲಿ ನೀರು ಕೊಡಲು ಆಗಲಿಲ್ಲ ಎಂದು ನನಗೆ ರಾತ್ರಿ ಪೂರ್ತಿ ನಿದ್ದೆಯೇ ಬಂದಿಲ್ಲ," ಎಂದು ನೊಂದು ನುಡಿದಿದ್ದಾರೆ.
ಹೆಲಿಕಾಪ್ಟರ್ ಪತನ; ತನಿಖೆ ಉಸ್ತುವಾರಿ ಏರ್ ಮಾರ್ಷಲ್ ಮನ್ವಿಂದರ್ ಸಿಂಗ್ಗೆ
ಜನರಲ್ ಬಿಪಿನ್ ರಾವತ್ ಅವರು ಛೀಫ್ ಡಿಫೆನ್ಸ್ ಸ್ಟಾಫ್ (ಸಿಡಿಎಸ್) ಆಗಿ ಡಿಸೆಂಬರ್ 31, 2021 ತನಕ ಅಧಿಕಾರ ಅವಧಿ ಹೊಂದಿದ್ದರು. ಈಗ ಅಕಾಲಿಕ ಮರಣದ ಬಳಿಕ ಶೀಘ್ರದಲ್ಲೇ ಹೊಸ ಸಿಡಿಎಸ್ ನೇಮಕಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ಆದರೆ ಯಾರನ್ನು ಮುಖ್ಯಸ್ಥರನ್ನಾಗಿ ಮಾಡುವುದು ಎಂಬ ವಿಚಾರವೇ ಗೊಂದಲವಾಗಿದೆ. ಇನ್ನು ಈ ಘಟನೆಯಲ್ಲಿ ಬದುಕುಳಿದಿರುವ ಕ್ಯಾಪ್ಟನ್ ವರುಣ್ ಸಿಂಗ್ರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಸ್ಥಳಾಂತರ ಮಾಡಲಾಗುತ್ತಿದೆ. "ವರುಣ್ ಸಿಂಗ್ರನ್ನು ಬೆಂಗಳೂರಿಗೆ ಶಿಫ್ಟ್ ಮಾಡುವ ಪ್ರಕ್ರಿಯೆ ನಡೆಯುತ್ತಿದೆ ಎಂದಿದ್ದಾರೆ. ಹೇಗಿದ್ದಾರೆ ನಿಮ್ಮ ಮಗ ಎಂದು ಕೇಳಿದ ಪ್ರಶ್ನೆಗೆ, ಆ ಬಗ್ಗೆ ಈಗಲೇ ಏನೂ ಹೇಳಲಾರೆ. ಯಾವುದೂ ಖಚಿತವಿಲ್ಲ," ಎಂದು ವರುಣ್ ಸಿಂಗ್ರ ತಂದೆ ಹೇಳಿದ್ದಾರೆ.
ಈ ಹೆಲಿಕಾಪ್ಟರ್ ಪತನ ಘಟನೆಯಲ್ಲಿ ಸಿಡಿಎಸ್ ಬಿಪಿನ್ ರಾವತ್, ಸಿಡಿಎಸ್ ಬಿಪಿನ್ ರಾವತ್ ಪತ್ನಿ ಮಧುಲಿಕಾ ರಾವತ್, ಬ್ರಿಗೇಡಿಯರ್ ಎಲ್.ಎಸ್.ಲಿಡ್ಡರ್, ಲೆಫ್ಟಿನೆಂಟ್ ಕರ್ನಲ್ ಹರ್ಜಿಂದರ್ ಸಿಂಗ್, ವಿಂಗ್ ಕಮಾಂಡರ್ ಪಿ.ಎಸ್.ಚೌಹಾಣ್, ಸ್ಕ್ವಾಡ್ರನ್ ಲೀಡರ್ ಕೆ.ಸಿಂಗ್, ಜೂನಿಯರ್ ವಾರಂಟ್ ಆಫೀಸರ್ ದಾಸ್, ಜೂನಿಯರ್ ವಾರಂಟ್ ಆಫೀಸರ್ ಪ್ರದೀಪ್ ಎ., ಹವಾಲ್ದಾರ್ ಸತ್ಪಾಲ್ ರೈ, ನಾಯಕ್ ಗುರುಸೇವಕ್ ಸಿಂಗ್, ನಾಯಕ್ ಜಿತೇಂದರ್ ಕುಮಾರ್, ಲ್ಯಾನ್ಸ್ ನಾಯಕ್ ವಿವೇಕ್ ಕುಮಾರ್ ಮತ್ತು ಲ್ಯಾನ್ಸ್ ನಾಯಕ್ ಸಾಯಿತೇಜ ನಿಧನರಾಗಿದ್ದಾರೆ.
(ಒನ್ಇಂಡಿಯಾ ಸುದ್ದಿ)