ರಸ್ತೆ ಅಪಘಾತ: ಮಾಜಿ ಶಾಸಕ ಸೇರಿ ಇಬ್ಬರ ಸಾವು
ಶಿವಗಂಗಾ, ಅಕ್ಟೋಬರ್ 13: ಸರಕು ಸಾಗಣೆ ಲಾರಿಯೊಂದಕ್ಕೆ ಮೋಟಾರ್ ಸೈಕಲ್ ಡಿಕ್ಕಿ ಹೊಡೆದ ಪರಿಣಾಮ ಮಾಜಿ ಶಾಸಕ ಬಿ. ಮನೋಹರನ್ (66) ಮೃತಪಟ್ಟಿದ್ದಾರೆ. ಮದುರೈ-ಶಿವಗಂಗಾ ಹೆದ್ದಾರಿಯಲ್ಲಿ ಮಂಗಳವಾರ ಪದಮತ್ತೂರ್ ಬಳಿ ಸರಕು ಸಾಗಣೆ ಲಾರಿಯೊಂದಿಗೆ ಬಿ. ಮನೋಹರನ್ ಅವರು ಪ್ರಯಾಣಿಸುತ್ತಿದ್ದ ಮೋಟಾರ್ ಸೈಕಲ್ ಮುಖಾಮುಖಿಯಾಗಿ ಡಿಕ್ಕಿಯಾಗಿದೆ.
ಡಿಎಂಕೆಯ ಮಾಜಿ ಶಾಸಕರಾಗಿರುವ ಮನೋಹರನ್ ಅವರು, ತಮ್ಮ ಸಹವರ್ತಿ ಎಂ. ಸೈಫುದ್ದೀನ್ (42) ಜತೆ ಬೈಕ್ನಲ್ಲಿ ತೆರಳುತ್ತಿದ್ದರು. ಮನೋಹರನ್ ಹಿಂದೆ ಕುಳಿತಿದ್ದರೆ, ಸೈಫುದ್ದೀನ್ ಬೈಕ್ ಚಲಾಯಿಸುತ್ತಿದ್ದರು. ಇಬ್ಬರ ತಲೆಗೂ ತೀವ್ರ ಪ್ರಮಾಣದ ಗಾಯಗಳಾಗಿದ್ದರಿಂದ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಹಿರಿಯೂರಿನಲ್ಲಿ ಲಾರಿ, ಕಾರು ಅಪಘಾತ; ಒಂದೇ ಕುಟುಂಬದ ಮೂವರ ಸಾವು
ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಇಬ್ಬರೂ ಮದುರೈಗೆ ತೆರಳುತ್ತಿದ್ದರು. ಅವರ ಮೃತದೇಹಗಳನ್ನು ಶಿವಗಂಗೆಯ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಅಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ.
ವಿಡಿಯೋ: ಕಾರು ಸ್ಟಾರ್ಟ್ ಮಾಡಿದರೆ ಜೀವ ಹೋಗುತ್ತೆ; ಹುಷಾರ್
ಮನೋಹರನ್ ಅವರು 1989ರಲ್ಲಿ ಶಿವಗಂಗಾ ವಿಧಾನಸಭೆ ಕ್ಷೇತ್ರದಿಂದ ಡಿಎಂಕೆಯ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದರು. ಪೂವಂತಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.