ಧರ್ಮಯುದ್ಧಕ್ಕೆ ಸಂದ ಮೊದಲ ಜಯ: ಪನ್ನೀರ್ ಸೆಲ್ವಂ
ಸಂಧಾನ ಮಾತುಕತೆ ವೇಳೆ ಶಶಿಕಲಾ ಹಾಗೂ ಅವರ ಕುಟುಂಬದ ಯಾವೊಬ್ಬ ಸದಸ್ಯರೂ ಇರಬಾರದೆಂದು ತಾಕೀತು ಮಾಡಿದ್ದ ತಮ್ಮ ಷರತ್ತು ಕಾರ್ಯಗತವಾಗಿದ್ದರ ಹಿನ್ನೆಲೆಯಲ್ಲಿ ಪನ್ನೀರ್ ಸೆಲ್ವಂ ಸಂತಸ.
ಚೆನ್ನೈ, ಏಪ್ರಿಲ್ 19: ಎಐಎಡಿಎಂಕೆ ಪಕ್ಷದಿಂದ ಶಶಿಕಲಾ ಹಾಗೂ ಅವರ ಹತ್ತಿರದ ಸಂಬಂಧಿಯಾದ ಟಿಟಿವಿ ದಿನಕರನ್ ಅವರನ್ನು ಹೊರಗಿಟ್ಟಿರುವುದು ತಾವು ಆರಂಭಿಸಿದ್ದ ಧರ್ಮ ಯದ್ಧಕ್ಕೆ ಸಂದ ಮೊದಲ ಜಯ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಎಐಎಡಿಎಂಕೆ ಪಕ್ಷದ ಉಚ್ಛಾಟಿತ ನಾಯಕ ಪನ್ನೀರ್ ಸೆಲ್ವಂ ಬಣ್ಣಿಸಿದ್ದಾರೆ.
ವ್ಯಕ್ತಿಗಿಂತ ಪಕ್ಷ ಮುಖ್ಯ ಎಂಬ ಧ್ಯೇಯದೊಂದಿಗೆ ನಾನು ಶಶಿಕಲಾ ವಿರುದ್ಧ ಸಮರ ಸಾರಿದ್ದೆ. ನನ್ನಂತೆಯೇ ಸಹ ಮನಸ್ಥಿತಿ ಹೊಂದಿದ್ದ ಎಐಎಡಿಎಂಕೆ ಪಕ್ಷದ ಹಲವಾರು ಶಾಸಕರು ಹಾಗೂ ಬೆಂಬಲಿಗರು ನನ್ನ ಜತೆಗಿದ್ದರು. ಆದರೆ, ಇದನ್ನು ಸಹಿಸದ ಶಶಿಕಲಾ ಬಣ ನನ್ನ ವಿರುದ್ಧ ಕ್ರಮ ಕೈಗೊಂಡಿತು. ಆಗಲೇ ನಾನು ಧರ್ಮ ಯುದ್ಧ ಘೋಷಿಸಿದೆ. ಈಗ, ನನ್ನ ಯುದ್ಧಕ್ಕೆ ಮೊದಲ ಯಶಸ್ಸು ಸಿಕ್ಕಿದೆ ಎಂದಿದ್ದಾರೆ.[ಎಐಎಡಿಎಂಕೆ ಪಕ್ಷದಿಂದ ಟಿಟಿವಿ ದಿನಕರನ್ ಔಟ್]
ಮಂಗಳವಾರ (ಏಪ್ರಿಲ್ 18) ರಾತ್ರಿ ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ನಡೆದ ಎಐಎಡಿಎಂಕೆ ಸಭೆಯಲ್ಲಿ ಎರಡು ಬಣಗಳಾಗಿ ಒಡೆದು ಹೋಗಿರುವ ಪಕ್ಷವನ್ನು ಮತ್ತೆ ಒಂದು ಮಾಡಬೇಕು ಹಾಗೂ ಒಗ್ಗೂಡಿಸುವ ಪ್ರಕ್ರಿಯೆ ಸುಲಲಿತವಾಗಲು ಪಕ್ಷದ ಅಧ್ಯಕ್ಷೆ ಶಶಿಕಲಾ ಹಾಗೂ ಹೆಚ್ಚುವರಿ ಮಹಾ ಕಾರ್ಯದರ್ಶಿ ಟಿಟಿವಿ ದಿನಕರನ್ ಅವರನ್ನು ಪಕ್ಷದಿಂದ ದೂರವಿಡಬೇಕು ಎಂದು ತೀರ್ಮಾನಿಸಲಾಗಿತ್ತು.
ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ನಿಧನದ ನಂತರ ಪಕ್ಷವು ಶಶಿಕಲಾ ಹಾಗೂ ಪನ್ನೀರ್ ಸೆಲ್ವಂ ಅವರ ನಾಯಕತ್ವದಲ್ಲಿ ಎರಡು ಬಣಗಳಾಗಿ ಒಡೆದು ಹೋಗಿತ್ತು. ಇತ್ತೀಚೆಗೆ, ಈ ಬಣಗಳನ್ನು ಒಗ್ಗೂಡಿಸಲು ಪಕ್ಷದ ಕೆಲ ಮುಖಂಡರು ಮಾಡಿದ ಪ್ರಯತ್ನಗಳಿಗೆ ಷರತ್ತು ವಿಧಿಸಿದ್ದ ಪನ್ನೀರ್ ಸೆಲ್ವಂ, ಸಂಧಾನ ಮಾತುಕತೆ ವೇಳೆ ಶಶಿಕಲಾ ಹಾಗೂ ಅವರ ಕುಟುಂಬದ ಯಾವೊಬ್ಬ ಸದಸ್ಯರೂ ಇರಬಾರದೆಂದು ತಾಕೀತು ಮಾಡಿದ್ದರು.[ಶಶಿಕಲಾ ಕಿತ್ತೊಗೆದರೆ ಮಾತ್ರ ಪಕ್ಷಕ್ಕೆ ಬರ್ತೇನೆ - ಪನ್ನೀರ್ ಸೆಲ್ವಂ]
ಪನ್ನೀರ್ ಸೆಲ್ವಂ ಅವರ ಷರತ್ತಿನಂತೆ ಇದೀಗ ಶಶಿಕಲಾ ಹಾಗೂ ಅವರ ಸೋದರ ಸಂಬಂಧಿ ಟಿಟಿವಿ ದಿನಕರನ್ ಅವರನ್ನು ಪಕ್ಷದಿಂದ ಹೊರಗಿಡಲಾಗಿದೆ.